ಇಂದಿರಾ ಕ್ಯಾಂಟೀನ್ ಗೆ ನೀಡುವ 100 ಕೋಟಿ ಸರ್ಕಾರಕ್ಕೆ ಹೊರೆಯಾಯಿತೇ?
ಬೆಂಗಳೂರು, ಫೆಬ್ರವರಿ.29: ಇಂದಿರಾ ಕ್ಯಾಂಟೀನ್ ಗಳಲ್ಲಿನ ಊಟ ಉಪಹಾರ ದರವನ್ನು ಏರಿಕೆ ಮಾಡುತ್ತಿರುವ ಬಿಬಿಎಂಪಿಯ ಕ್ರಮವನ್ನು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ವ್ಯಾಪಕವಾಗಿ ವಿರೋಧಿಸಿದೆ.
ಬಡವರ ಹಸಿವು ನೀಗಿಸಲು ಲಕ್ಷಾಂತರ ಕೋಟಿ ರೂಪಾಯಿಗಳನ್ನು ತೆರಿಗೆ ಮೂಲಕ ಸಂಗ್ರಹಿಸಿ, 2.5 ಲಕ್ಷ ಕೋಟಿಗೂ ಹೆಚ್ಚು ಬಜೆಟ್ ಮಂಡಿಸುವ ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಗೆ ಕೇವಲ 100 ಕೋಟಿ ರೂಪಾಯಿ ಸಬ್ಸಿಡಿ ಹಣ ಹೊರೆಯಾಗುತ್ತದೆಯೇ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.
ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಪಹಾರ ದರವನ್ನು 5 ರೂಪಾಯಿಯಿಂದ 10 ರೂಪಾಯಿ ಮತ್ತು ಊಟದ ದರವನ್ನು 10 ರೂಪಾಯಿಯಿಂದ 15 ರೂಪಾಯಿಗೆ ಏರಿಕೆ ಮಾಡುವುದಾಗಿ ಬಿಬಿಎಂಪಿ ತಿಳಿಸಿದೆ. ಆದರೆ, ಕೇವಲ ನೂರು ಕೋಟಿ ರೂಪಾಯಿ ಹಣವನ್ನು ಇಂದಿರಾ ಕ್ಯಾಂಟೀನ್ ಎಂಬ ಮಹತ್ವದ ಆಹಾರ ಯೋಜನೆಗೆ ಖರ್ಚು ಮಾಡಲಾರದಷ್ಟು ಪಾಲಿಕೆ ಮತ್ತು ರಾಜ್ಯ ಸರ್ಕಾರವು ಪಾಪರ್ ಆಗಿದೆಯಾ ಎಂಬ ಅನುಮಾನವು ಬೆಂಗಳೂರಿಗರಲ್ಲಿ ಮೂಡುತ್ತಿದೆ.
ಇಂದಿರಾ ಕ್ಯಾಂಟೀನ್ ಊಟ-ಉಪಹಾರದ ಬೆಲೆಯಲ್ಲೂ ಭಾರಿ ಏರಿಕೆ
ಸಮಸ್ಯೆಗಳ ಹುತ್ತದ ಮಧ್ಯೆ ಇಂದಿರಾ ಕ್ಯಾಂಟೀನ್
2018ರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಆಂರಭಗೊಂಡ ಇಂದಿರಾ ಕ್ಯಾಂಟೀನ್ ನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಕ್ಯಾಂಟೀನ್ ಆಹಾರವನ್ನು ಸವಿದಿದ್ದರು. ಇಂದಿರಾ ಕ್ಯಾಂಟೀನ್ ಪ್ರಾರಂಭವಾದಾಗ ಜಾಗದ ಸಮಸ್ಯೆ, ಆಹಾರ ತಯಾರಿಕಾ ಸ್ಥಳ, ಆಹಾರ ಗುತ್ತಿಗೆದಾರರು - ಅಧಿಕಾರಿಗಳ ಭ್ರಷ್ಟಾಚಾರ, ಗುತ್ತಿಗೆದಾರರ ಮೇಲಿನ ಎಫ್ಐಆರ್, ಹೀಗೆ ಹಲವು ವಿವಾದಗಳಿಂದ ಆಹಾರದ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಕ್ಯಾಂಟೀನ್ ಗಳು ಸತತ ವೈಫಲ್ಯ ಕಾಣುತ್ತಿದೆ.
ಬಿಬಿಎಂಪಿ ಪಾಲಿಗೆ ಇಂದಿರಾ ಕ್ಯಾಂಟೀನ್ ಬೇಡದ ಶಿಶು?
ಕುಮಾರಸ್ವಾಮಿ ಹಾಗೂ ಸಿಎಂ ಯಡಿಯೂರಪ್ಪ ಸರ್ಕಾರ ಈ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆ ನಿಟ್ಟಿನಲ್ಲಿ ಯಾವುದೇ ರೀತಿ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಗಳನ್ನು ಬೆಂಗಳೂರು ಮಹಾನಗರ ಪಾಲಿಕೆಯ ಕೂಡಾ ಒಲ್ಲದ ಶಿಶುವಿನ ಹಾಗೆ ಕಡೆಗಣಿಸುತ್ತಾ ಬಂದಿದೆ ಎಂದು ಆಪ್ ಆರೋಪಿಸಿದೆ.
ಅನುದಾನ ನೀಡಲು ಸತಾಯಿಸುತ್ತಿರುವ ರಾಜ್ಯ ಸರ್ಕಾರ
ಕಳೆದ ಎರಡು ವರ್ಷಗಳಿಂದ ಇಂದಿರಾ ಕ್ಯಾಂಟೀನ್ ಗೆ ಸರ್ಕಾರದಿಂದ ಅನುದಾನವೇ ಬಂದಿಲ್ಲ. ಅನುದಾನ ನೀಡಲು ಸರ್ಕಾರವು ಸತಾಯಿಸುತ್ತಿದ್ದರೆ, ಮಹಾನಗರ ಪಾಲಿಕೆಯೂ ಈ ಯೋಜನೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸಬೀಬು ಹೇಳುತ್ತಿದೆ. ಇನ್ನೊಂದೆಡೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಬಡಜನ ಇರಲಿ, ಪ್ರಾಣಿ-ಪಕ್ಷಿಗಳು ತಿನ್ನುವುದಕ್ಕೂ ಆಗದಷ್ಟು ಕಳಪೆ ಆಹಾರ ಗುಣಮಟ್ಟಕ್ಕೆ ಕುಸಿದಿರುವುದು ಆಳುವ ಸರ್ಕಾರಗಳಿಗೆ ಬಡ ಜನತೆ ಮೇಲಿನ ಅಸಡ್ಡೆ ಮತ್ತು ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ.
ಪೊಳ್ಳು ನೆಪವೊಡ್ಡುತ್ತಿದೆಯಾ ಸರ್ಕಾರ ಮತ್ತು ಪಾಲಿಕೆ?
ಇಂದಿರಾ ಕ್ಯಾಂಟೀನಿನ ಊಟ ಮತ್ತು ಉಪಹಾರ ದರವನ್ನು ಹೆಚ್ಚಿಸದೆ ಉತ್ತಮ ಗುಣಮಟ್ಟದ ಆಹಾರ ಪೂರೈಸುವತ್ತ ಸರ್ಕಾರ ಗಮನ ಹರಿಸಬೇಕು. ಆರ್ಥಿಕ ಹೊರೆ ಎಂಬ ಪೊಳ್ಳು ನೆಪವನ್ನು ತೆಗೆದು ಹಾಕಿ ಬೆಂಗಳೂರಿಗರ ಕೆಂಗಣ್ಣಿಗೆ ಗುರಿಯಾಗಿದೇ, ಬಡವರ ಪಾಲಿನ ಅನ್ನಪೂರ್ಣೇಶ್ವರಿಯಂತೆ ಇರುವ ಇಂದಿರಾ ಕ್ಯಾಂಟೀನ್ ಗಳನ್ನು ಮಾರ್ಪಾಡು ಮಾಡುವಂತೆ ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.