ಭ್ರಷ್ಟರ ವಿರುದ್ಧ ಇತರ ಜಿಲ್ಲೆಗಳಲ್ಲೂ ಹೋರಾಟː ಎಎಪಿ
ಬೆಂಗಳೂರು: ಅ. 2 : ಬೆಂಗಳೂರಿಗೆ ಸೀಮಿತವಾಗಿದ್ದ ಭ್ರಷ್ಟರ ವಿರುದ್ಧದ ಪ್ರತಿಭಟನೆಯನ್ನು ಇತರ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಆಲೋಚನೆಯಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ರವಿಕೃಷ್ಣಾ ರೆಡ್ಡಿ ತಿಳಿಸಿದರು.
ಭೂ ಕಬಳಿಕೆ ವಿರೋಧಿಸಿ ಎಪಿಪಿ ಬೆಂಗಳೂರಿನ ಪುರಭವನದ ಎದುರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.
ಭೂ ಕಬಳಿಕೆ ಮತ್ತು ಭ್ರಷ್ಟಾಚಾರ ಖಂಡಿಸಿ ಬೆಂಗಳೂರಿನ ಪುರಭವನದ ಎದುರು ಕಳೆದ 24 ದಿನಗಳಿಂದ ಆಮ್ ಆದ್ಮಿ ಪಕ್ಷ ನಡೆಸುತ್ತಿದ್ದ ಪ್ರತಿಭಟನೆ ಗುರುವಾರ 25ನೇ ದಿನಕ್ಕೆ ಕಾಲಿಟ್ಟಿತು. ಗಾಂಧೀಜಿಗೆ ನಮನ ಮತ್ತು ಪ್ರಾರ್ಥನೆ ಸಲ್ಲಿಸುವ ಮೂಲಕ ಧರಣಿ ತೀವ್ರಗೊಳಿಸಲಾಯಿತು. [ಭ್ರಷ್ಟರ ಅಧಿಕಾರ ಬಿಡಿಸಲು 'ಕ್ವಿಟ್ ಪವರ್' ಚಳವಳಿ]
ಇಲ್ಲಿಯವರೆಗೆ ಸರ್ಕಾರದ ಯಾವ ಸಚಿವರು, ಅಧಿಕಾರಿಗಳು ಗಮನ ನೀಡಿಲ್ಲ. ಸರ್ಕಾರವೂ ಭೂಗಳ್ಳರ ಜತೆ ಕೈಜೋಡಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮುಂದಿನ ಹೋರಾಟದ ರೂಪುರೇಷೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮತ್ತು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಮುಖಂಡ ರವಿ ಕೃಷ್ಣಾ ರೆಡ್ಡಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ನಿವೃತ್ತ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು.
ಬೆಂಗಳೂರಿನ ಸುತ್ತಮುತ್ತ ಹೆಚ್ಚಿರುವ ಭೂ ಮಾಫಿಯಾ, ಇಲಾಖೆಗಳಲ್ಲಿನ ಭ್ರಷ್ಟಾಚಾರ, ಸರ್ಕಾರದ ವಿಳಂಬ ನೀತಿ ಖಂಡಿಸಿ ಕಳೆದ 24 ದಿನಗಳಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ಪುರಭವನದ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.