ಖಾಸಗಿ ಬಸ್ಗಳ ಸುಲಿಗೆಗೆ ಬೇಕು ಕಡಿವಾಣ: ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ
ಬೆಂಗಳೂರು, ಏಪ್ರಿಲ್ 07: ಕೊರೋನಾ ಸೊಂಕು ಹರಡದಂತೆ ಲಾಕ್ಡೌನ್ ಹೇರಿದ ಪರಿಣಾಮ ನಗರಗಳು ಹಿಂದೆಂದೂ ಕಾಣದಂತೆ ಸ್ತಬ್ಧವಾಗಿಬಿಟ್ಟಿವೆ. ದಿನಗೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಹೀಗೆ ಲಕ್ಷಾಂತರ ಶ್ರಮಿಕ ಕಾರ್ಮಿಕ ವರ್ಗ ತಮ್ಮ ತಮ್ಮ ಊರುಗಳನ್ನು ಸೇರಿದ್ದಾರೆ. ಈ ಪರಿಸ್ಥಿತಿಯನ್ನು ಗಮನಿಸಿರುವ ಆಮ್ ಆದ್ಮಿ ಪಾರ್ಟಿ ಸರ್ಕಾರಕ್ಕೆ ಬಸ್ ವ್ಯವಸ್ಥೆ ಬಗ್ಗೆ ಮನವಿ ಮಾಡಿದೆ.
''ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ ಈಗಾಗಲೇ ಖಾಸಗಿ ಸಾರಿಗೆ ಕಂಪೆನಿಗಳು ಬೆಂಗಳೂರು ಹಾಗೂ ಇತರೆ ನಗರಗಳಿಗೆ ತೆರಳಲು ಬುಕ್ಕಿಂಗ್ ಆರಂಭಿಸಿದ್ದಾರೆ. ಆದರೆ ಹಿಂದೆಂದೂ ಕಾಣದ ರೀತಿಯಲ್ಲಿ ಅವೈಜ್ಞಾನಿಕವಾಗಿ ಪ್ರಯಾಣದ ದರವನ್ನು ಹೆಚ್ಚಳ ಮಾಡಿದ್ದು, ಪ್ರಸ್ತುತ ಇರುವ ದರಕ್ಕಿಂತ ಮೂರು ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವುದು ಆರೋಪ ಇದೆ.'' ಎಂದು ಎಎಪಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
ಮೈಸೂರು ಸಾರಿಗೆ ಸಂಸ್ಥೆ ವಿಭಾಗಕ್ಕೆ ನಷ್ಟ ತಂದಿತ್ತ ಕೊರೊನಾ
''ಖಾಸಗಿ ಸಾರಿಗೆ ಕಂಪೆನಿಗಳ ಈ ಚಾಳಿ ಹೊಸದೇನಲ್ಲ ಪರಿಸ್ಥಿತಿಯ ಲಾಭ ಪಡೆದು ಅನೇಕ ಬಾರಿ ಈ ಅನೈತಿಕ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಇಷ್ಟು ದಿನ ಇದನ್ನು ಜಾಣಗುರುಡಿನಿಂದಲೆ ನೋಡುತ್ತಾ ಬಂದಿದ್ದ ಸರ್ಕಾರಗಳು ಇಂತಹ ಕಷ್ಟದ ಸಮಯದಲ್ಲಾದರೂ ಸಹ ಎಚ್ಚೆತ್ತುಕೊಂಡು ಜನರ ನೆರವಿಗೆ ನಿಲ್ಲಬೇಕು ಮತ್ತು ಸುಲಿಗೆಕೋರರಿಗೆ ಮೂಗುದಾರ ಹಾಕಬೇಕು.'' ಎಂದಿದ್ದಾರೆ.
''ಕೈಯಲ್ಲಿ ಕೆಲಸವಿಲ್ಲದೆ ಬದುಕುತ್ತಿರುವ, ಆರ್ಥಿಕ ಮುಗ್ಗಟ್ಟಿನಿಂದ ಬದುಕು ತಳ್ಳುತ್ತಿರುವ ಈ ಹೊತ್ತಿನಲ್ಲಿ ಖಾಸಗಿಯವರು ಲಾಭ ಮಾಡಿಕೊಳ್ಳಲು ಅವಕಾಶ ನೀಡಬಾರದು ಹಾಗೂ ಈಗಾಗಲೇ ಹೆಚ್ಚುವರಿ ಹಣ ವಸೂಲಿ ಮಾಡಿದ್ದರೆ ಅದನ್ನು ಪ್ರಯಾಣಿಕರಿಗೆ ಮರಳಿಸುವಂತೆ ಖಡಕ್ ಎಚ್ಚರಿಕೆ ನೀಡಬೇಕು. ಎರಡು ದಿನಗಳ ಮಟ್ಟಿಗೆ ಊರಿನಿಂದ ಮರಳಲು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಹಾಗೂ ರೈಲ್ವೆ ವ್ಯವಸ್ಥೆ ಇರುವ ಕಡೆ ಹೆಚ್ಚಿ ಬೋಗಿ ಹಾಗೂ ಅಲ್ಲಿಯೂ ಸಹ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.'' ಎಂದು ಒತ್ತಾಯಿಸಿದ್ದಾರೆ.
ಈ ಸಮಯದಲ್ಲಿ ಒಂದೇ ಬಾರಿ ಲಕ್ಷಾಂತರ ಜನ ನಗರಗಳ ಕಡೆ ಹೊರಡುವುದರಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ಸಹ ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು ಮತ್ತು ಟೋಲ್ ಸಂಗ್ರಹವನ್ನು ಸಹ ಮಾಡದಂತೆ ಸೂಚನೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಸರ್ಕಾರದ ಬಳಿ ಮನವಿ ಮಾಡಿದೆ.