ಪಾದರಾಯನಪುರ ಘಟನೆ: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಎಎಪಿ ಆಗ್ರಹ
ಬೆಂಗಳೂರು, ಏಪ್ರಿಲ್ 20: ''ಬೆಂಗಳೂರಿನ ಪಾದರಾಯನಪುರದಲ್ಲಿ ಭಾನುವಾರ (ಏ.19) ರಾತ್ರಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ಗೆ ಕರೆದುಕೊಂಡು ಹೋಗಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ ಹಾಗೂ ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದೇ ಹೇಳಬಹುದು'' ಎಎಪಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಪ್ರತಿಕ್ರಿಯೆ ನೀಡಿದ್ದಾರೆ.
''ಯಾವುದೇ ರೋಗಗಳಿಗೆ ಧರ್ಮ, ಜಾತಿ, ಭಾಷೆಯ ಬೇದ-ಭಾವವಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಅಲ್ಲದೇ ಇದು ಕೇವಲ ನಮ್ಮ ದೇಶದ ಸಮಸ್ಯೆಯಲ್ಲ ಪ್ರಪಂಚದ 200ಕ್ಕೂ ಹೆಚ್ಚು ದೇಶಗಳು ಕೊರೊನಾ ಕೈಗೆ ಸಿಲುಕಿ ನಲುಗಿ ಹೋಗಿವೆ ಇಂತಹ ಸಂದರ್ಭದಲ್ಲಿ ನಾಗರಿಕರು 'ಕೊರೊನಾ ವಾರಿಯರ್ಸ್ಗೆ' ಅಸಹಕಾರ ನೀಡುವುದು ದೇಶದ ಪ್ರಜೆಗಳಾದ ನಮ್ಮ ಗೌರವಕ್ಕೆ ತಕ್ಕುದಾದ ಸಂಗತಿ ಅಲ್ಲ. ಅಲ್ಲದೇ ಈ ನೆಲದ ಕಾನೂನನ್ನು ಗೌರವಿಸಬೇಕಾಗಿರುವುದು ಎಲ್ಲರ ಕರ್ತವ್ಯವೂ ಆಗಿದೆ.'' ಎಂದಿದ್ದಾರೆ.
ವೈದ್ಯಕೀಯ ತಪಾಸಣೆ ವೇಳೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದೇನು?
ಅಮಾಯಕರ ಪ್ರಾಣಕ್ಕೂ ಎರವಾಗುತ್ತದೆ
''ಕೊರೊನಾ ನಗರ ಪ್ರದೇಶದಲ್ಲಿ ಹೆಚ್ಚಿದೆ. ಸುಮಾರು 18 ಸೋಂಕಿತರು ಪಾದರಾಯನಪುರ ಪ್ರದೇಶದಲ್ಲಿ ಕಂಡು ಬಂದಿದೆ. ಅವರ ಸಂಪರ್ಕದಲ್ಲಿ ಸುಮಾರು 56 ಮಂದಿ ಇದ್ದಾರೆ. ಇಂತಹ ವೇಳೆಯಲ್ಲಿ ಸ್ವಲ್ಪವೇ ಎಡವಿದರೂ ಸಹ ಸೋಂಕಿತರ ಸಂಖ್ಯೆ ಹೆಚ್ಚಾಗುವುದಲ್ಲದೆ. ಅಮಾಯಕರ ಪ್ರಾಣಕ್ಕೂ ಇದು ಎರವಾಗುತ್ತದೆ ಎನ್ನುವುದನ್ನು ಮನಗಾಣಬೇಕಿದೆ.'' ಎಂದು ಘಟನೆ ಬಗ್ಗೆ ಮೋಹನ್ ದಾಸರಿ ವಿವರಿಸಿದ್ದಾರೆ.
ವೈರಸ್ಸಿಗಿಂತಲೂ ಭಯಾನಕ ಮನಸ್ಥಿತಿ
''ಇದರೊಟ್ಟಿಗೆ ಸುಮಾರು 56 ಮಂದಿಯನ್ನು ಕ್ವಾರಂಟೈನ್ಗೆ ಕರೆ ತರಲು ಹೋಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿ, ಆಶಾ ಕಾರ್ಯಕರ್ತರಿಗೆ, ಸ್ವಯಂ ಸೇವಕರಿಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಕೆಲಸ. ಜನರಲ್ಲಿ ವಿಶ್ವಾಸ ಬರುವಂತೆ ನೋಡಿಕೊಳ್ಳುವುದು ಧಾರ್ಮಿಕ ಮುಖಂಡರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖ ಕರ್ತವ್ಯ. ಇಂತಹ ಆತಂಕಕಾರಿ ವಿಚಾರದಲ್ಲಿ ರಾಜಕೀಯವನ್ನು ಎಳೆದು ತರುವುದು ವೈರಸ್ಸಿಗಿಂತಲೂ ಭಯಾನಕ ಮನಸ್ಥಿತಿ ಎಂದೇ ಹೇಳಬಹುದು.''
ಚಿತ್ರಗಳು : ಗಲಭೆ ಬಳಿಕ ಪಾದರಾಯನಪುರ ಕಂಡಿದ್ದು ಹೀಗೆ
ಜಮೀರ್ ಹೇಳಿಕೆಗೆ ಅಸಮಾಧಾನ
''ಈ ಘಟನೆಯ ಕುರಿತಾಗಿ ಸ್ಥಳೀಯ ಶಾಸಕ ಜಮೀರ್ ಅಹಮದ್ ಅವರು ನೀಡಿರುವ 'ನನ್ನನ್ನು ಕೇಳಿಕೊಂಡು ಹೋಗಬೇಕಿತ್ತು' ಎನ್ನುವ ಹೇಳಿಕೆ ಅವರ ಸ್ಥಾನಕ್ಕೆ ತಕ್ಕುದಾದುದಲ್ಲ ಹಾಗೂ ಇಂತಹ ವಿಚಾರದಲ್ಲಿ ಪಕ್ಷ ರಾಜಕೀಯವನ್ನು ಬಿಟ್ಟು ರೋಗದ ವಿರುದ್ದ ಹೋರಾಡುವ ಮನಸ್ಥಿತಿಯನ್ನು ಶಾಸಕರು ತಾವೂ ಬೆಳೆಸಿಕೊಳ್ಳಬೇಕು ಹಾಗೂ ಜನರಿಗೂ ಮನದಟ್ಟು ಮಾಡಿಸಬೇಕು ಅದನ್ನು ಬಿಟ್ಟು ಉಡಾಫೆಯ ಉತ್ತರ ನೀಡಿರುವುದು ಶಾಸಕರ ಅವಿವೇಕತನ ಹಾಗೂ ದುರಹಂಕಾರದ ನಡೆ.'' ಎಂದು ಮೋಹನ್ ದಾಸರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಲಾ ನಾಗರೀಕರು ಸಹಕರಿಸಬೇಕು
''ಇಡೀ ದೇಶವೇ ಈ ರೋಗದಿಂದ ಪಾರಾಗಲು ಸಂಘರ್ಷ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರು ಒಗ್ಗಟ್ಟಾಗಿ ಕೈ ಜೋಡಿಸಿದರೆ ಮಾತ್ರ ಮುಂದಿನ ದಿನಗಳು ಆಶಾದಾಯಕವಾಗಿರಲು ಸಾಧ್ಯ. ಇಲ್ಲದಿದ್ದರೆ ಆತಂಕದಲ್ಲೆ ನಾವೆಲ್ಲರೂ ದಿನದೂಡಬೇಕಾಗುತ್ತದೆ. ಆದ ಕಾರಣ ವೈದ್ಯರಿಗೆ, ಪೊಲೀಸರಿಗೆ, ಸ್ವಯಂಸೇವಕರಿಗೆ ಸಮಾಜದ ಎಲ್ಲಾ ನಾಗರೀಕರು ಸಹಕರಿಸಬೇಕಾಗಿ ಆಮ್ ಆದ್ಮಿ ಪಕ್ಷ ಮನವಿ ಮಾಡಿದೆ.