ಕೋವಿಡ್ ಸಂದರ್ಭದಲ್ಲಿನ ಜನಸೇವೆ ವಿವರಿಸಿದ ಆಮ್ ಆದ್ಮಿ ಪಕ್ಷ
ಬೆಂಗಳೂರು, ಜೂನ್ 7: ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿಯ ಎರಡನೇ ಅಲೆ ತಾಂಡವ ಶುರುಮಾಡಿದಾಗ, ಅನೇಕ ಸರ್ಕಾರಗಳು ಸಿದ್ಧತೆ ಇಲ್ಲದೇ ತಬ್ಬಿಬ್ಬಾಗಿದ್ದವು. ಇದಕ್ಕ ನಮ್ಮ ರಾಜ್ಯವೂ ಹೊರತಲ್ಲ. ಇಲ್ಲಿ ನಾವು ಕೇಳಬೇಕಿರುವ ಪ್ರಶ್ನೆ ಏನೆಂದರೆ ಈ ಬಿಕ್ಕಟ್ಟಿನಲ್ಲಿ ನಮ್ಮ ಸರಕಾರ ಹೇಗೆ ಪ್ರತಿಕ್ರಿಯಿಸಿತು?
ಈ ಕಷ್ಟದ ಸಂದರ್ಭದಲ್ಲಿ ಜನರಿಗೆ ಹೇಗೆ ನೆರವಾಯಿತು? ಕರ್ನಾಟಕ ಸರಕಾರ ಲಾಕ್ಡೌನ್ ಮಾಡುವುದರ ಮುಖಾಂತರ ಕೋವಿಡ್ ಅಲೆಯನ್ನು ತಡೆಯಲು ಹೊರಟಿತು. ಆಗ ಬರೀ ರಾಜ್ಯದ ಜನರು ಮಾತ್ರವಲ್ಲ, ರಾಜ್ಯ ಸರ್ಕಾರವೂ ಲಾಕ್ಡೌನ್ ಆಗಿಬಿಟ್ಟಿತು.
ದುಃಖದ ಸಂಗತಿಯೆಂದರೆ ಈ ಸಂದರ್ಭದಲ್ಲಿ ಸರ್ಕಾರದ ಕಿವಿ ಹಿಂಡಬೇಕಿದ್ದ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ನಿದ್ದೆಗೆ ಜಾರಿದ್ದವು. ಆಗ ಆಮ್ ಆದ್ಮಿ ಪಕ್ಷವು ತನ್ನ ಕರ್ತವ್ಯ ನಿರ್ವಹಿಸಲು ಮುಂದಾಗಿ ದಿನಾಂಕ 29/04/2021 ರಂದು ರಾಜ್ಯದ ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹಾಯವಾಣಿಯನ್ನು ಆರಂಭಿಸಿತು.
ಈ ಸಹಾಯವಾಣಿಯಲ್ಲಿ ವಿವಿಧ ಪರಿಣತಿಯುಳ್ಳ 46 ನುರಿತ ವೈದ್ಯರು, 12 ಮನೋವೈದ್ಯರು, ಸದಾಕಾಲ ಸಹಾಯವಾಣಿಯ ಕರೆ ಸ್ವೀಕರಿಸಲು 60 ಕಾರ್ಯಕರ್ತರ ತಂಡ ರಚಿಸಲಾಯಿತು.
ಪ್ರಮುಖವಾಗಿ ಈ ಕೆಳಗಿನ ಸೇವೆಗಳನ್ನು ಕೇವಲ ಫೋನ್ ಕರೆ ಮುಖಾಂತರ ಪಡೆಯುವಂತಾಗಲು ಮತ್ತು ಬೆಂಗಳೂರಿನಲ್ಲಿ ಬೆಡ್ ಕೊರತೆಯನ್ನು ನಿಯಂತ್ರಿಸಲು ಹೋಂ ಐಸೋಲೇಷನ್ ರೋಗಿಗಳಿಗೆ ನೆರವಾಗಲು "ಆಕ್ಷನ್ ಅಗೈನ್ಸ್ಟ್ ಪ್ಯಾಂಡಾಮಿಕ್' ಎಂಬ ಜನಸ್ನೇಹಿ ಅಭಿಯಾನವನ್ನು ಆರಂಭಿಸಿತು. ಈ ಅಭಿಯಾನದ ಮೂಲಕ ದಿನದ 24 ಗಂಟೆಯೂ ರೋಗಿಗಳಿಗೆ ಉಚಿತ ಆಕ್ಸಿಮೀಟರ್ ವಿತರಣೆ, ವೈದ್ಯಕೀಯ ನೆರವು ಕೌನ್ಸಿಲಿಂಗ್, ಹೋಂ ಐಸೋಲೇಶನ್ ನೆರವು ನೀಡಲು ಸಹಾಯವಾಣಿಯನ್ನು (7292022063) ಆರಂಭಿಸಿತು.
ಆಮ್ ಆದ್ಮಿ ಪಕ್ಷದ ಈ ಸಹಾಯವಾಣಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು. ಈ ಅಭಿಯಾನಕ್ಕೆ ಒಂದು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಮತ್ತಷ್ಟು ರೋಗಿಗಳು ಈ ಉಚಿತ ಸೇವೆಯನ್ನು ಪಡೆಯುವಂತಾಗಲಿ ಎಂದು ಒಂದು ತಿಂಗಳ ಕಾರ್ಯವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದು, ಹಾಗೂ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಿದೆ.
ಕಳೆದ ಒಂದು ತಿಂಗಳಿನಲ್ಲಿ ಸುಮಾರು 3254 ಉಚಿತ ಆಕ್ಸಿಮೀಟರ್ ವಿತರಣೆ, 16,000 ರೋಗಿಗಳಿಗೆ ಹೋಂ ಐಸೋಲೇಶನ್ ನೆರವು, ಪ್ರತಿದಿನ 112ಕ್ಕೂ ಹೆಚ್ಚು ಹೋಂ ಐಸೋಲೇಶನ್ ರೋಗಿಗಳಿಗೆ ಆಹಾರ ಒದಗಿಸುವಿಕೆ, 1300 ರೋಗಿಗಳಿಗೆ ಮನೋವೈದ್ಯರಿಂದ ಕೌನ್ಸಿಲಿಂಗ್ 3,00,000ಕ್ಕೂ ಅಧಿಕ ಮಾಸ್ಕ್ ವಿತರಣೆ, ಅಪಾರ್ಟ್ಮೆಂಟ್ಗಳು, ವಸತಿ ಸಮುಚ್ಚಯಗಳು, ಮನೆಗಳು ಹಾಗೂ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಕಚೇರಿಗಳು, ಪೊಲೀಸ್ ಠಾಣೆಗಳು, ಪೊಲೀಸ್ ಚೌಕಿಗಳು ಸೇರಿದಂತೆ 18,000ಕ್ಕೂ ಹೆಚ್ಚು ಕಡೆ ಸಾನಿಟೈಶೇಷನ್ ಮಾಡಲಾಗಿದೆ.
1400 ಐಸಿಯೂ ಬೆಡ್ಗಳ ಒದಗಿಸುವಿಕೆ, 900 ಆಕ್ಸಿಜನ್ ಸಿಲಿಂಡರ್ ಒದಗಿಸುವಿಕೆ, 260ಕ್ಕೂ ಹೆಚ್ಚು ರೋಗಿಗಳಿಗೆ ರಕ್ತದ ನೆರವು
ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ಪ್ರತಿನಿತ್ಯ 20,000 ಜನರಿಗೆ ಊಟ ನೀಡಿದ್ದು, ಸುಮಾರು 60,000 ಕುಟುಂಬಗಳಿಗೆ ದಿನಸಿ ಕಿಟ್ ಒದಗಿಸಲಾಗಿದ್ದು, ಸುಮಾರು 120 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ರಾಜ್ಯದ ವಿವಿಧೆಡೆ ಒದಗಿಸಲಾಗಿದೆ.
ಆಡಳಿತದಲ್ಲಿರುವ ಬಿಜೆಪಿ ತನ್ನ ಒಳಜಗಳ, ಅತ್ಯಂತ ಕಳಪೆ ಕೋವಿಡ್ ನಿವರ್ಹಣೆ ಮೂಲಕ ಜನರಿಗೆ ಭಾರವಾಗಿ ಪರಿಣಮಿಸಿದರೆ, ಬಹಳ ಕೆಲಸ ಮಾಡಬೇಕಿದ್ದ ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಿದ್ದೆ ಹೊಡೆದುಕೊಂಡು ಫೋಟೋಶೂಟ್ಗಳಲ್ಲೇ ಜನರನ್ನು ಮೂರ್ಖರನ್ನಾಗಿಸುತ್ತಿದೆ.
ಈಗಲೂ ಕಾಲ ಮಿಂಚಿಲ್ಲ, ಸರ್ಕಾರ ಈಗಲಾದರೂ ನಿದ್ದೆಯಿಂದ ಎದ್ದು, ಜನರ ಕಷ್ಟಕ್ಕೆ ನೆರವಾಗಬಹುದು ಹಾಗೂ ಮುಂಬರುವ ಮೂರನೇ ಆಲೆಯು ಇನ್ನೂ ಅಪಾಯಕಾರಿಯಾಗಲಿದ್ದು, ಮಕ್ಕಳಿಗೆ ಗಂಡಾಂತರವಾಗಿ ಪರಿಣಮಿಸುವ ಸಾಧ್ಯತೆಗಳಿದ್ದು, ಅದನ್ನು ತಡೆಗಟ್ಟಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು.
Recommended Video
ಹೊಸ ಮತ್ತು ಹೆಚ್ಚಿನ ಆಮ್ಲಜನಕ ಘಟಕಗಳ ಸ್ಥಾಪನೆ, ಮಕ್ಕಳ ಐಸಿಯು, ಅಗತ್ಯವಾದ ಔಷಧಿಗಳ ಸಮರ್ಪಕ ದಾಸ್ತಾನು ಇತ್ಯಾದಿಗಳನ್ನು ಈಗಿನಿಂದಲೇ ಮಾಡಬೇಕಿದೆ. ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟಲು ಲಸಿಕೆಯೊಂದೇ ಪರಿಣಾಮಕಾರಿ ಉಪಾಯವಾಗಿದ್ದು, ಮೂರನೇ ಅಲೆಗೆ ಮುಂಚೆಯೇ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಲಸಿಕೆ ನೀಡಿ, ಬರಲಿರುವ ಸಾವು- ನೋವನ್ನು ನಿಯಂತ್ರಿಸಬಹುದು ಎಂದು ಆಮ್ ಆದ್ಮಿ ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.