ಬಿಎಂಟಿಸಿ ನೌಕರರಿಗೆ ಪಿಪಿಇ ಕಿಟ್ಗಳನ್ನು ನೀಡಿ: ಎಎಪಿ ಆಗ್ರಹ
ಬೆಂಗಳೂರು, ಜೂನ್ 12: ಸಮರ್ಪಕವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಸಿಗುತ್ತಿಲ್ಲ ಎಂದು ಬಿಎಂಟಿಸಿ ನೌಕರರು ಅಳಲು ತೋಡಿಕೊಳ್ಳುತ್ತಿದ್ದರೂ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸ್ಪಂದಿಸುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಕೊರೊನಾ ಸೋಂಕು ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೇಳೆಯಲ್ಲೇ ಈ ರೀತಿಯ ಬೇಜವಾಬ್ದಾರಿ ವರ್ತನೆ ತೋರುತ್ತಿರುವುದು ತರವಲ್ಲ. ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಒಬ್ಬರಿಗೆ ಸೋಂಕು ಇರುವುದು ದೃಡಪಟ್ಟರೂ, ಸಹ ಸಾರಿಗೆ ಇಲಾಖೆಯ ಅಧಿಕಾರಿಗಳಾಗಲಿ, ಸಾರಿಗೆ ಸಚಿವ ಲಕ್ಷ್ಮಣ ಸವಧಿ ಅವರಾಗಲಿ ತುಟಿ ಬಿಚ್ಚದೆ ಕುಳಿತುಕೊಂಡಿದ್ದಾರೆ. ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಕೇವಲ ಮಾಧ್ಯಮದ ಮುಂದೆ ಮಾತ್ರ ಪ್ರದರ್ಶನ ನೀಡುವ ಅಧಿಕಾರಿಗಳ, ಸಚಿವರ ಬೇಜವಾಬ್ದಾರಿ ವರ್ತನೆ ತರವಲ್ಲ ಎಂದು ಎಎಪಿ ಅಸಮಾಧಾನ ಹೊರಹಾಕಿದೆ.
2 ಬಿಹೆಚ್ಕೆ ಫ್ಲಾಟ್ ಹಂಚಿಕೆಗೆ ಬಿಡ್ ಕರೆದ ಬಿಎಂಟಿಸಿ
ಈಗಾಗಲೇ ಸಾವಿರಾರು ಜನ ಬಿಎಂಟಿಸಿಯಲ್ಲಿ ಪ್ರಯಾಣಿಸಲು ಪ್ರಾರಂಭಿಸಿದ್ದಾರೆ ಇಂತಹ ಸಂದರ್ಭದಲ್ಲೇ ಯಾವುದೇ ರೀತಿಯ ಮುಂಜಾಗ್ರತೆವಹಿಸದೆ ಇದ್ದರೆ ಸೋಂಕು ಸಮುದಾಯಕ್ಕೆ ಹರಡಿದರೆ, ಇದರ ಹೊಣೆಯನ್ನು ಸಚಿವರು ಹಾಗೂ ಅಧಿಕಾರಿಗಳು ಹೊರುವರೇ??. ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸೋಂಕು ಹರಡಿದರೆ ಅವರೆಲ್ಲರ ಚಿಕಿತ್ಸಾ ವೆಚ್ಚವನ್ನು ಬಿಎಂಟಿಸಿ ಅಧಿಕಾರಿಗಳು ಹಾಗೂ ಸಚಿವರ ಸಂಬಳದಿಂದ ಕಟ್ಟಿಕೊಡಬೇಕು ಹಾಗೂ ಪರಿಹಾರವನ್ನು ಸಹ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯ ಮಾಡಿದೆ.
ಈ ಕೂಡಲೇ ಬಿಎಂಟಿಸಿ ನೌಕರರಿಗೆ ಸಾಕಷ್ಟು ಸಂಖ್ಯೆಯಲ್ಲಿ ಉತ್ತಮ ಗುಣಮಟ್ಟದ ಮಾಸ್ಕ್, ಸ್ಯಾನಿಟೈಜರ್, ಕೈಗವಸು, ಸುರಕ್ಷತಾ ಸಾಧನಗಳನ್ನು ನೀಡಬೇಕು ಹಾಗೂ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.