ಪಡಿತರ ವಿತರಣಾ ವ್ಯವಸ್ಥೆ ಅತಂತ್ರ, ದುಪ್ಪಟ್ಟು ಬೆಲೆಗೆ ಮಾರಾಟ -ಎಎಪಿ ಆರೋಪ
ಬೆಂಗಳೂರು, ಏಪ್ರಿಲ್ 08: ಸರ್ಕಾರವು ಕರೋನಾ, ಲಾಕ್ ಡೌನ್ ಸಂದರ್ಭದಲ್ಲಿ ಬಡ ಜನತೆಗೆ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ನೀಡುವ ವ್ಯವಸ್ಥೆಯನ್ನು ಘೋಷಿಸಿ ವಾರಕ್ಕೂ ಹೆಚ್ಚು ದಿವಸಗಳು ಕಳೆದಿದೆ. ಯಾವುದೇ ಒಟಿಪಿ ಕೇಳದೆ ಪಡಿತರವನ್ನು ವಿತರಿಸಬೇಕೆಂದು ಮುಖ್ಯಮಂತ್ರಿಗಳೇ ಸ್ವತಃ ಆದೇಶ ನೀಡಿದ್ದಾರೆ. ಎಪಿಎಲ್ ಕಾರ್ಡುದಾರರಿಗೂ ಪಡಿತರವನ್ನು ವಿತರಿಸಬೇಕೆಂದು ಆದೇಶಿಸಿತ್ತು. ಆದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಈ ಪಡಿತರಗಳನ್ನು ಬಡಜನತೆಗೆ ಒಂದು ವಾರದ ಬಳಿಕ ವಿತರಿಸಲು ಇಂದು ಕ್ರಮ ತೆಗೆದುಕೊಂಡಿದೆ ಎಂದು ಎಎಪಿ ಆರೋಪ ಮಾಡಿದೆ.
ಇಂದು ಬೆಳಗ್ಗೆ ಆರು ಗಂಟೆಯಿಂದಲೇ ರಾಜ್ಯದ ಬಡ ಜನತೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಕಾದರೂ ಸಹ ಒಟಿಪಿ ಬರದ ಕಾರಣದಿಂದಾಗಿ ಪಡಿತರವನ್ನು ಪಡೆಯಲಾಗದೆ ಮನೆಗಳಿಗೆ ಹಿಡಿ ಶಾಪವನ್ನು ಹಾಕಿಕೊಂಡು ಮರಳುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳವರು ಒಟಿಪಿ ಬಂದರೆ ಮಾತ್ರ ಪಡಿತರವನ್ನು ವಿತರಿಸುತ್ತೇವೆ ಎಂದು ಜನರನ್ನು ಕಳುಹಿಸುತ್ತಿದ್ದಾರೆ. ಎಪಿಎಲ್ ಕಾರ್ಡುದಾರರಿಗೆ ಪಡಿತರ ಸಿಗುವುದಿರಲಿ, ಬಿಪಿಎಲ್ ಕಾರ್ಡುದಾರರಿಗೇ ಪಡಿತರ ಸಿಗದೆ ಪರದಾಡುವಂತಾಗಿದೆ. ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕರ ಜಗದೀಶ್ ವಿ ಸದ೦ ತಿಳಿಸಿದ್ದಾರೆ.
ಲಾಕ್ ಡೌನ್: ಶಿವಮೊಗ್ಗದಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಣೆ
ಮುಖ್ಯಮಂತ್ರಿಗಳ ಆದೇಶ ಏನಾಯಿತು
''ಸರ್ಕಾರದ ಹಾಗೂ ಮುಖ್ಯಮಂತ್ರಿಗಳ ಆದೇಶ ಏನಾಯಿತು? ನ್ಯಾಯಬೆಲೆ ಅಂಗಡಿಗಳವರಿಗೆ ಈ ಆದೇಶದ ಯಾವುದೇ ಕಿಂಚಿತ್ ಭಯವೇ ಇಲ್ಲದಂತಾಗಿದೆ. ಇಲಾಖೆಯ ಅಧಿಕಾರಿಗಳು ಮುಂದೆ ನಿಂತು ಪಡಿತರವನ್ನು ಸಾರ್ವಜನಿಕರಿಗೆ ವಿತರಿಸುವುದನ್ನು ಬಿಟ್ಟು ಅವರು ಯಾರು ಸಹ ಸಾರ್ವಜನಿಕರಿಗೆ ಸಿಗುವುದಿರಲಿ ಯಾವುದೆ ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಸಾರ್ವಜನಿಕರು ಇಂದು ನರಳಾಡುವ ಪರಿಸ್ಥಿತಿಗೆ ತಲುಪಿದ್ದಾರೆ.'' ಎಂದಿದ್ದಾರೆ.
ವಸ್ತುಗಳ ಕೊರತೆ ಉಂಟಾಗಿದೆ
''ಆಮ್ ಆದ್ಮಿ ಪಕ್ಷವು ಕಳೆದ ಎರಡು ದಿವಸಗಳ ಹಿಂದೆ ರಿಯಾಲಿಟಿ ಚೆಕ್ ನಡೆಸಿ ರಾಜ್ಯದಲ್ಲಿ ದಿನಸಿ ವಸ್ತುಗಳ ಕೊರತೆ ಉಂಟಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿತ್ತು. ನಮ್ಮ ಅಂದಾಜಿನಂತೆಯೇ ರಾಜ್ಯದಲ್ಲಿ ದಿನಸಿ ವಸ್ತುಗಳ ಕೃತಕ ಕೊರತೆ ಉಂಟಾಗಿದೆ. ಅಂಗಡಿಗಳ ಮಾಲೀಕರು ದುಪ್ಪಟ್ಟು ಬೆಲೆಗೆ ವಸ್ತುಗಳನ್ನು ಮಾರುತ್ತಿದ್ದಾರೆ. ಪಡಿತರ ಚೀಟಿಯೂ ಇಲ್ಲದ ಅನೇಕ ಬಡ ಜನತೆ ಇಂತಹ ಅಂಗಡಿಗಳನ್ನೇ ಆಶ್ರಯಿಸಿದ್ದಾರೆ. ಇವರುಗಳು ದುಪ್ಪಟ್ಟು ಬೆಲೆಯನ್ನು ನೀಡಿ ವಸ್ತುಗಳನ್ನು ಕೊಳ್ಳಲಾಗದೆ ಮತ್ತಷ್ಟು ನರಳಾಡುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ.'' ಎಂದು ಹೇಳಿದ್ದಾರೆ.
ವ್ಯಾಪಾರಸ್ಥರ ದಂಧೆ
''ಎಪಿಎಂಸಿ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳು ದೊರಕುತ್ತಿದ್ದರೂ, ಸಹ ಕೆಲ ವ್ಯಾಪಾರಸ್ಥರು ಇಂತಹ ದಂಧೆಗೆ ಇಳಿದಿರುವುದು ತೀರಾ ದುರದೃಷ್ಟಕರ. ಈ ಕೂಡಲೇ ಎಪಿಎಂಸಿ ಮಾರುಕಟ್ಟೆಯ ಕೂಲಿ ಕಾರ್ಮಿಕರ ಜೊತೆ ಸರ್ಕಾರದ ಪ್ರತಿನಿಧಿಗಳು ಮಾತನಾಡಿ ಎಪಿಎಂಸಿ ಮಾರುಕಟ್ಟೆಯಿಂದ ಸ್ಥಳೀಯ ಅಂಗಡಿಗಳಿಗೆ ದಿನನಿತ್ಯದ ಸಾಮಾನುಗಳನ್ನು ವಿತರಿಸುವ ವ್ಯವಸ್ಥೆಯು ಕೂಡಲೇ ಆಗಬೇಕಿದೆ. ಆಗ ಈ ರೀತಿಯ ಕೃತಕ ಅಭಾವವೂ ಕಡಿಮೆಯಾಗುತ್ತದೆ.'' ಎಂದು ಸಲಹೆ ನೀಡಿದೆ
ಸರ್ಕಾರ ಕೂಡಲೇ ಗಮನ ಹರಿಸಬೇಕು
''ಸರ್ಕಾರವು ಈ ಕೂಡಲೇ ಇತ್ತ ಕಡೆ ಗಮನ ಹರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಂತಹ ದಿಟ್ಟ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ. ಕೂಡಲೇ ಮುಖ್ಯಮಂತ್ರಿಗಳು ಇತ್ತ ಕಡೆ ಗಮನಹರಿಸಿ ಕಟ್ಟುನಿಟ್ಟಾದ ಆದೇಶವನ್ನು ನೀಡಬೇಕು'' ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.