ಕೃಷಿ ಬಿಕ್ಕಟ್ಟುಗಳ ಪರಿಹಾರಕ್ಕಾಗಿ ಸರಕಾರಕ್ಕೆ ಆಮ್ ಆದ್ಮಿ ಪಕ್ಷ ನೀಡಿದ ಸಲಹೆಗಳು
ಬೆಂಗಳೂರು, ಏಪ್ರಿಲ್ 04: ಕೊರೊನಾ ವೈರಸ್ನಿಂದ ರೈತರಿಗೆ ತುಂಬ ಸಮಸ್ಯೆಯಾಗಿದೆ. ಲಾಕ್ ಡೌನ್ನಿಂದ ತಾವು ಬೆಳೆಯ ಬೆಳೆಯನ್ನು ಸರಿಯಾಗಿ ಮಾರಾಟ ಮಾಡಲು ಆಗದೆ ಇರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಎಷ್ಟೋ ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ನಾಶ ಮಾಡುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಾರ್ಟಿ ಕೆಲವೊಂದು ಸಲಹೆಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ''ನಮ್ಮ ಅನ್ನದಾತರು ಧ್ವನಿ ಇಲ್ಲದವರು. ಹಾಗಾಗಿ ಅವರ ನೋವುಗಳನ್ನು, ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ನಗರ ಕೇಂದ್ರಿತ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಸಂಪೂರ್ಣ ಗಮನ ಹರಿಸಲಾಗಿದೆ. ಮಾರುಕಟ್ಟೆಗಳು ಲಾಕ್ ಡೌನ್ ಆಗಿ ವ್ಯಾಪಾರ ಕುಸಿದಿದೆ, ಕಾರ್ಮಿಕರು ಮತ್ತು ವ್ಯಾಪಾರಿಗಳು ಗುಳೆ ಹೋಗುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಗರದ ಗ್ರಾಹಕ ಕೇಂದ್ರಗಳಿಗೆ ಇರುವ ಪ್ರವೇಶ ನಿರ್ಬಂಧ ಮತ್ತು ಸಾರಿಗೆ ಸಂಪರ್ಕಗಳ ನಿರ್ಬಂಧದ ಪರಿಣಾಮ ಕೃಷಿಕರ ಮೇಲೆ ಆಗುತ್ತಿದೆ.'' ಎಂದಿದೆ.
ಕ್ಯಾಬ್, ಆಟೋ ಡ್ರೈವರ್ಗಳಿಗೆ ಸಿಹಿ ಸುದ್ದಿ ಕೊಟ್ಟ ಕೇಜ್ರಿವಾಲ್
''ತಮ್ಮ ಕುಟುಂಬಗಳಿಗೆ ಅದಾಯ ಪೂರೈಸಲು ಕೃಷಿ ಬದುಕಿನಿಂದ ವಿಮುಖರಾಗಿ ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ಬಂದ ಗ್ರಾಮೀಣ ಭಾಗದ ಜನರು ದೈನಂದಿನ ವೇತನ ಸಮರ್ಪಕವಾಗಿ ಗಳಿಸಲು ಸಾಧ್ಯವಾಗದೆ ಆರ್ಥಿಕ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಇದರಿಂದ ರೈತರು ಮತ್ತು ಅವರ ಕುಟುಂಬಗಳ ಮೇಲೆ ಒತ್ತಡ ಹೆಚ್ಚಾಗಿದೆ. ನಿಮ್ಮ ಸರಕಾರ ಈ ನಿಟ್ಟಿನಲ್ಲಿ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ನಮಗೆ ಸಂತೋಷವಿದೆ. ಯಾವುದೇ ವಿಳಂಬವಾಗದ ಹಾಗೆ ಹೆಚ್ಚಿನ ಪರಿಹಾರ ಕ್ರಮಗಳನ್ನು ಜಾರಿಗೆ ತರುತ್ತೀರಿ ಎಂದು ನಂಬಿದ್ದೇವೆ.'' ಎಂದು ಕೆಲವು ಸಲಹೆಗಳನ್ನು ಹಂಚಿಕೊಂಡಿದೆ.
ಬೆಳೆ ಪರಿಹಾರವನ್ನು ಘೋಷಣೆ
1.ಲಾಕ್ ಡೌನ್ ಕಾರಣದಿಂದಾಗಿ ಬೆಳೆ ಹಾನಿ ಹೊಂದಿರುವ ರೈತರಿಗೆ ಬೆಳೆ ಪರಿಹಾರವನ್ನು ಘೋಷಿಸಬೇಕು. ಅವರು ಅನುಭವಿಸಿರುವ ನಷ್ಟ ಕೇವಲ ಒಂದು ದಿನದ ವೇತನ ಅಥವಾ ಮೂರು ವಾರಗಳ ಅದಾಯವಲ್ಲ. ತಿಂಗಳುಗಟ್ಟಲೆ ಬೀಜ, ರಸಗೊಬ್ಬರ ಮತ್ತು ಕೃಷಿ ಕಾರ್ಮಿಕರು ಇತ್ಯಾದಿಗಳಿಗೆ ಹಣವನ್ನು ಸಾಲ ಪಡೆದು ವಿನಿಯೋಗಿಸಿ ಬೆವರಿಳಿಸಿ ಬೆಳೆ ತೆಗೆಯುವಲ್ಲಿ ನಡೆಸಿದ ಪ್ರಯತ್ನವಾಗಿದೆ.
2. ರೈತರು ತಮ್ಮ ಬೆಳೆಗಳನ್ನು ಹತ್ತಿರದ ಎಪಿಎಂಸಿ ಅಥವಾ ನಗರಗಳಿಗೆ ಮಾರಾಟ ಮಾಡಲು ಸಾಗಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಉಚಿತವಾಗಿ ಸರಕು ಸಾಗಣೆ ಮಾಡುವ ವ್ಯವಸ್ಥೆಯನ್ನು ಸರಕಾರ ಮಾಡಬೇಕಿದೆ.
ಉಚಿತ ಶೇಖರಣೆ ವ್ಯವಸ್ಥೆ
3.ಸರಕಾರ ಕನಿಷ್ಟ ಉತ್ತೇಜನ ಬೆಲೆಯಲ್ಲಿ ಅವರ ಸರಕುಗಳನ್ನು ಖರೀದಿಸಬೇಕು. ಟೊಮ್ಯಾಟೋ ಮೊದಲಾದ ತರಕಾರಿಗಳು ಹಾಳಾಗುವ ಕಾರಣದಿಂದಾಗಿ ಅವುಗಳಿಗೆ ಕನಿಷ್ಟ ಉತ್ತೇಜಿತ ಬೆಲೆ ಇಲ್ಲವಾದಲ್ಲಿ ಮತ್ತು ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದ್ದಲ್ಲಿ ಈ ಹಿಂದೆ ಮಾವು ಮತ್ತು ಈರುಳ್ಳಿ ಖರೀದಿಸಿದಂತೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಬೆಲೆಯಲ್ಲಿ ಸರಕಾರ ಖರೀದಿಸಿ ನಷ್ಟವನ್ನು ಸರಿದೂಗಿಸಬೇಕು.
4.ರೈತರು ಸ್ಪರ್ಧಾತ್ಮಕ ಬೆಲೆಗಾಗಿ ಕಾಯುವುದಾದರೆ ಮತ್ತು ತಮ್ಮ ಬೆಳೆಗಳನ್ನು ಸಂಗ್ರಹಿಸಲು ಬಯಸುವುದಾದರೆ ಅವರಿಗೆ ಸರ್ಕಾರವು ಸರಕುಗಳ ಮೌಲ್ಯದ ಮೇಲೆ ಉಚಿತ ಶೇಖರಣೆ ವ್ಯವಸ್ಥೆ ಮತ್ತು ಬಡ್ಡಿ ರಹಿತ ಸಾಲವನ್ನು ನೀಡಬೇಕು.
ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ
ಪೂರೈಕೆ ಮಾಡುವ ವ್ಯವಸ್ಥೆ
5.ರೈತರನ್ನು ಗ್ರಾಹಕರೊಂದಿಗೆ ಜೋಡಿಸುವ ಬಗ್ಗೆ ಪರಿಣತಿ, ಜ್ಞಾನ ಮತ್ತು ನೆಟ್ವರ್ಕ್ ಹೊಂದಿರುವ HOPCOMS, ಕರ್ನಾಟಕ ಕೃಷಿ ಕೈಗಾರಿಕಾ ನಿಗಮ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟ ಮೊದಲಾದ ಸರಕಾರಿ ಸಂಘಟನೆಗಳು ಮತ್ತು ಏಜೆನ್ಸಿಗಳು ಮರು ಕಾರ್ಯಶೀಲವಾಗುವ ಹಾಗೆ ಮಾಡಬೇಕು.
6.ಜನತಾ ಬಜಾರ್ ಗಳು, ಬೃಹತ್ ಖಾಸಗಿ ಗ್ರಾಹಕ ಮಳಿಗೆಗಳು, ಬಡಾವಣೆಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು, ಅವುಗಳ ಒಕ್ಕೂಟಗಳಿಗೆ ನೇರವಾಗಿ ಪೂರೈಕೆ ಮಾಡುವ ವ್ಯವಸ್ಥೆಯನ್ನು ರೂಪಿಸಬೇಕು. ಇದು ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡುತ್ತದೆ.
ವೈದ್ಯಕೀಯ ವಿಮಾ ಸೌಲಭ್ಯ
7.ಆಹಾರ ನಿರ್ವಹಣೆಯಲ್ಲಿ ಭಾಗಿಗಳಾಗಿ ಇರುವ ಎಲ್ಲರ ಸಮರ್ಪಕ ರಕ್ಷಣೆಯ ನೆಲೆಯಿಂದ ಕೋವಿಡ್-19 ಪರೀಕ್ಷೆ ಮತ್ತು ವೈದ್ಯಕೀಯ ವಿಮಾ ಸೌಲಭ್ಯ ಒದಗಿಸಬೇಕು.
8.ಕೃಷಿ ಸರಕುಗಳನ್ನು ಸಾಗಿಸುವ ವಾಹನಗಳು ವಿಳಂಬವಾಗದ ಹಾಗೆ ಅವುಗಳಿಗೆ ಸೂಕ್ತ ಪಾಸ್ ಮತ್ತು ಪರವಾನಿಗೆ ನೀಡಬೇಕು. ಈ ಮೇಲಿನ ಕ್ರಮವನ್ನು ಜಾರಿಗೊಳಿಸಲು ಮತ್ತು ಈ ಸಂದರ್ಭದಲ್ಲಿ ಸಲಹೆಗಳನ್ನು ನೀಡಲು ಆಮ್ ಆದ್ಮಿ ಪಕ್ಷ ನಿಮ್ಮೊಂದಿಗೆ ಕೈಜೋಡಿಸಲು ಸಂತಸ ಪಡುತ್ತದೆ ಎಂದು ತಿಳಿಸಲಾಗಿದೆ.