ಮಕ್ಕಳ ಕಳ್ಳನೆಂದು ಥಳಿಸಿ ಕೊಂದ ಸ್ಥಳೀಯರು: 9 ಮಂದಿ ಬಂಧನ
ಬೆಂಗಳೂರು, ಮೇ 24: ಮಕ್ಕಳ ಕಳ್ಳನೆಂದು ಭಾವಿಸಿ ಸ್ಥಳೀಯ ನಿವಾಸಿಗಳು ಯುವಕನನ್ನು ಅಮಾನುಷವಾಗಿ ಥಳಿಸಿ ಕೊಂದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.
ಬುಧವಾರ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಬಾಲಕರು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಮಕ್ಕಳ ಕಳ್ಳರ ವದಂತಿಗೆ ಕಿವಿಗೊಡಬೇಡಿ: ಡಿಸಿಪಿ ರವಿ ಡಿ. ಚನ್ನಣ್ಣನವರ್
ರಾಜಸ್ಥಾನ ಮೂಲದ ಕಾಲುರಾಮ್ ಬಚ್ಚನ್ರಾಮ್ (26) ಕೊಲೆಯಾದ ಯುವಕ. ಕೆಲ ತಿಂಗಳ ಹಿಂದೆಯಷ್ಟೇ ಅವರು ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದರು.
ಉದ್ದವಾದ ಕೊದಲು ಹಾಗೂ ಗಡ್ಡ ಬಿಟ್ಟಿದ್ದ ಅವರು, ಪೆನ್ಷನ್ ಮೊಹಲ್ಲಾದ ರಸ್ತೆಯಲ್ಲಿ ಓಡಾಡುತ್ತಿದ್ದರು. ಅವರ ಬಗ್ಗೆ ಅನುಮಾನಗೊಂಡ ಸ್ಥಳೀಯರು, ಮಕ್ಕಳ ಕಳ್ಳ ಎಂದು ಶಂಕೆಯಿಂದ ಬೆನ್ನಟ್ಟಿದ್ದರು. ರಂಗನಾಥ್ ಟಾಕೀಸ್ ಸಮೀಪ ಅವರನ್ನು ಹಿಡಿದು ಅಮಾನುಷವಾಗಿ ಥಳಿಸಿದ್ದಾರೆ.
ಕಾಲುರಾಮ್ ಅವರ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ರಸ್ತೆಯಲ್ಲಿ ಎಳೆದಾಡಿದ್ದಾರೆ. ದೊಣ್ಣೆ ಹಾಗೂ ಬ್ಯಾಟ್ಗಳಿಂದ ಹೊಡೆದಿದ್ದಾರೆ.
ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡುತ್ತಿರುವುದನ್ನು ನೋಡಿದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋದಾಗಲೂ ಜನರ ಗುಂಪು ಅವರನ್ನು ಹೊಡೆಯುತ್ತಿತ್ತು. ಪೊಲೀಸರನ್ನು ಕಂಡ ಕೂಡಲೇ ಅವರು ಅಲ್ಲಿಂದ ಓಡಿಹೋದರು.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಕಾಲುರಾಮ್ ಅವರನ್ನು ಪೊಲೀಸರು ಹೊಯ್ಸಳ ವಾಹನದಲ್ಲಿಯೇ ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಅವರು ಮೃತಪಟ್ಟರು.
ಘಟನೆ ಸಂಬಂಧ ಚಾಮರಾಜಪೇಟೆ ಪೊಲೀಸರು ಸಾರ್ವಜನಿಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಸ್ಥಳದಲ್ಲಿ ಇದ್ದ ಮತ್ತು ಹಲ್ಲೆಯಲ್ಲಿ ಪಾಲ್ಗೊಂಡಿದ್ದ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ.
ಕಾಲುರಾಮ್ ಅವರ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರ ಸಂಬಂಧಿಕರು ಮತ್ತು ಪರಿಚಿತರ ಕುರಿತು ಯಾವುದೇ ಮಾಹಿತಿ ಗೊತ್ತಾಗಿಲ್ಲ.