Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗೆ ತಪಾಸಣೆಗೆ ಸಹಕರಿಸದ ಯುವತಿ ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಏರ್ಪೋರ್ಟ್ನಲ್ಲಿ ಆಗಿದ್ದೇನು?, ಮುಂದೆ ಓದಿ.
ಬೆಂಗಳೂರು, ಫೆಬ್ರವರಿ 06: ವಿಮಾನ ಹತ್ತಲು ಅವಸರದಲ್ಲಿದ್ದ ಯುವತಿಯೊಬ್ಬರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಸಿದ್ದಾರೆ. ಈ ಘಟನೆ ದೇವನಹಳ್ಳಿಯ ಬೆಂಗಳೂರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 3ರಂದು ಶುಕ್ರವಾರ ನಡೆದಿದೆ.
ಬೆಂಗಳೂರು ಏರ್ಪೋರ್ಟ್ನಿಂದ ವಿಮಾನದಲ್ಲಿ ಯುವತಿಯೊಬ್ಬರು ಕೊಲ್ಕತ್ತಾಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದ ಬಾಗಿಲಲ್ಲಿ ತಪಾಸಣೆಗೆ ಆ ಯುವತಿ ಒಳಗಾಗಬೇಕಿತ್ತು. ಆದರೆ ಅವಸರದಲ್ಲಿದ್ದರು ಎನ್ನಲಾಗುತ್ತಿರುವ ಯುವತಿ ತಪಾಸಣೆಗೆ ಮುಂದಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್ಎಫ್) ಸಿಬ್ಬಂದಿ ಗೆ ಸಹಕರಿಸಿಲ್ಲ. ಮನ ಬಂದಂತೆ ಸಿಬ್ಬಂದಿ ಮೇಲೆ ರೇಗಾಡಿದ್ದಾರೆ.
Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ
ಹೀಗೆ ಸಾರ್ವಜನಿಕ ಸ್ಥಳದಲ್ಲಿ ರಂಪಾಟ ಮಾಡಿದ ಯುವತಿ ಹೆಸರು ಮಾನಸಿ ಸತೇಬೈನು (31) ಎಂದು ತಿಳಿದು ಬಂದಿದೆ. ನಿಲ್ದಾಣದ ನಿರ್ಗಮನ ದ್ವಾರ-6ಕ್ಕೆ ಬಂದ ಮಾನಸಿ ಸತೇಬೈನು ಏಕಾಎಕಿ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಇದಕ್ಕೆ ಭದ್ರತಾ ಸಿಬ್ಬಂದಿ ಒಪ್ಪಿಲ್ಲ. ಇದೇ ಸ್ಥಳದಲ್ಲಿ ಬೇರೆ ಪ್ರಯಾಣಿಕರು ಒಳ ಹೋಗಲು ತಪಾಸಣೆಗಾಗಿ ಸಾಲುಗಟ್ಟಿ ನಿಂತಿದ್ದರು. ಅದನ್ನು ಲೆಕ್ಕಿಸದೇ ಒಳ ನುಗ್ಗಲು ಯುವತಿ ಪ್ರಯತ್ನಿಸಿದ್ದರು.
ವಿಮಾನ ಇನ್ನೇನು ಹೊರಡುವ ಸಮಯವಾಗಿದೆ ಎಂದು ಹೇಳಿ ಒಳ ಬಿಡಲು ಯುವತಿ ಒತ್ತಾಯಿಸಿದ್ದಾರೆ. ಭದ್ರತಾ ಸಿಬ್ಬಂದಿ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ಒಪ್ಪದೇ ತಪಾಸಣೆ ನಡೆಸಲು ಮುಂದಾದ ಭದ್ರತಾ ಸಿಬ್ಬಂದಿ ಜತೆ ಯುವತಿ ವಾಗ್ವಾದಕ್ಕೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದ ನಂತರ ಒಳ ಬಿಡಿ ಇಲ್ಲವೇ ಬಾಂಬ್ನಿಂದ ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಸತೇಬೈನು ಬೆದರಿಕೆ ಒಡ್ಡಿದ್ದಾರೆ.
ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ
ಯುವತಿ ಸತೇಬೈನು ಮಾತು ಕೇಳುತ್ತಿದ್ದಂತೆ ಅದೇ ದ್ವಾರದ ಭಾಗಿಲಲ್ಲಿ ಸಾಲುಗಟ್ಟಿ ನಿಂತಿದ್ದ ಸಹ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಸಹ ಪ್ರಯಾಣಿಕರ ಬಳಿ ತೆರಳಿ ಈ ದ್ವಾರದಲ್ಲಿ ಬಾಂಬ್ ಇದೇ ಎಲ್ಲರೂ ಓಡಿ ಹೋಗಿ ಎಂದು ಸುಳ್ಳು ಹೇಳಿ ಕೂಗಾಡಿದ್ದಾರೆ. ಸಾಲದೆಂಬಂತೆ ಸಿಐಎಸ್ಎಫ್ ಸಿಬ್ಬಂದಿ ಸಂದೀಪ್ ಸಿಂಗ್ ಎಂಬುವವರ ಶರ್ಟ್ ಕೊಳಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಸಿಬ್ಬಂದಿ ಮುಖಕ್ಕೆ ಬುದ್ದಿ, ಒದ್ದಿದ್ದಾರೆ ಎನ್ನಲಾಗಿದೆ. ಈ ಘಟನೆ ತಾರಕಕ್ಕೆರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗುತ್ತು.
ಕರ್ತವ್ಯ ನಿರ್ವಹಣೆ ಅಡ್ಡಿ ಪಡಿಸಲಾಗಿದೆ ಎಂಬ ಆಧಾರದಲ್ಲಿ ರಂಪಾಟ ಮಾಡಿದ್ದ ಯುವತಿಯನ್ನು ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕರೆದೊಯ್ದು ಯುವತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.