ದುರ್ಘಟನೆಯಲ್ಲಿ ಯುವ ಪತ್ರಕರ್ತ ರೋಹಿತ್ ನಿಧನ
ಬೆಂಗಳೂರು, ಫೆಬ್ರವರಿ 22 : ರಜೆ ಕಳೆಯಲು ಊರಿಗೆ ತೆರಳಿದ್ದ ಪತ್ರಕರ್ತರೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಭಾನುವಾರ ಬೇವಿನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆದಿದೆ.
ತುಮಕೂರಿನ ಕ್ಯಾತ್ಸಂದ್ರ ಸಮೀಪದ ಸದರನಹಳ್ಳಿಯಲ್ಲಿ ತೋಟದ ಬಾವಿಯಲ್ಲಿ ಈಜಾಡಲು ತೆರಳಿದ್ದಾಗ ಬಿ. ಆರ್. ರೋಹಿತ್ (39) ಮೃತಪಟ್ಟಿದ್ದಾರೆ. ರೋಹಿತ್ ಟೈಮ್ಸ್ ಆಫ್ ಇಂಡಿಯಾದ ಬೆಂಗಳೂರು ನಗರದ ಡೆಪ್ಯೂಟಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು.
ಶನಿವಾರ ರಜೆ ಇದ್ದ ಕಾರಣಕ್ಕೆ ತಮ್ಮ ತಂದೆಯ ಊರಾದ ಸದರನಹಳ್ಳಿಗೆ ಬಂದಿದ್ದರು. ಸ್ನೇಹಿತರೊಂದಿಗೆ ತಮ್ಮ ತೋಟದ ಬಾವಿಯಲ್ಲಿ ಈಜಲು ಹೋದಾಗ ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರೋಹಿತ್ ಅವರಿಗೆ ಪತ್ನಿ, ಹೆಣ್ಣು ಮಗು ಹಾಗೂ ತಂದೆ-ತಾಯಿ ಇದ್ದಾರೆ. ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ವಾಸಿಸುತ್ತಿದ್ದರು. ತಂದೆ, ತಮ್ಮ ಹಾಗೂ ಮಾವನ ಮಗನ ಜೊತೆ ಹೊಲಕ್ಕೆ ಹೋಗಿದ್ದ ರೋಹಿತ್ ಈಜಾಡಲು ಬಾವಿಗೆ ಇಳಿದಿದ್ದರು.
ಈಜುವ ವೇಳೆ ಬಾವಿಯಲ್ಲಿನ ಕಲ್ಲು ತಲೆಗೆ ಬಡಿದಿದೆ ಎಂದು ತಿಳಿದು ಬಂದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.