ಉದ್ಘಾಟನೆಯಾಗಿ ವಾರದೊಳಗೇ ಸೈಕಲ್ ಪಥದಲ್ಲಿ ಗುಂಡಿ ಅಗೆದ BWSSB
ಬೆಂಗಳೂರು, ಫೆಬ್ರುವರಿ 11: ಉದ್ಘಾಟನೆಯಾದ ಒಂದೇ ವಾರದಲ್ಲಿ, ರೇಸ್ ಕೋರ್ಸ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಸೈಕಲ್ ಟ್ರ್ಯಾಕ್ ಅನ್ನು ಮತ್ತೆ ಅಗೆಯಲಾಗಿದೆ.
ಬೆಂಗಳೂರಿನ ಸೈಕಲ್ ಪ್ರಿಯರಿಗಾಗಿ ರೇಸ್ ಕೋರ್ಸ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಸೈಕಲ್ ಪಥವನ್ನು ಕಳೆದ ವಾರವಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದರು. ಆದರೆ ವಾರದ ಒಳಗೆ ಮತ್ತೆ ಟ್ರ್ಯಾಕ್ ಅಗೆಯಲಾಗಿದೆ.
ಬೆಂಗಳೂರಲ್ಲಿ ಸೈಕಲ್ ಸವಾರಿಗೆ ಪ್ರತ್ಯೇಕ ಪಥ ಸಿದ್ಧ
ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಅರ್ಬನ್ ಲ್ಯಾಂಡ್ ಟ್ರಾನ್ಸ್ಪೋರ್ಟ್ ಜೊತೆಗೂಡಿ ನಿರ್ಮಿಸಿದ್ದ ಸೈಕಲ್ ಪಥವನ್ನು ಚರಂಡಿ ಕಾಮಗಾರಿಗೆಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಗೆದಿದೆ. "ಬಿಡಬ್ಲುಎಸ್ಎಸ್ಬಿ ಚರಂಡಿ ಕಾಮಗಾರಿಗೆ ಯಾವುದೇ ಅನುಮತಿ ಪಡೆಯದೇ ಟ್ರ್ಯಾಕ್ ಅಗೆದಿದೆ. ಹಸಿರು ಬಣ್ಣದ ಟ್ರ್ಯಾಕ್ ಮೇಲೇ ಗುಂಡಿ ತೆಗೆದಿದ್ದಾರೆ" ಎಂದು ಬಿಎಸ್ಸಿಎಲ್ ಅಧಿಕಾರಿಗಳು ಬಿಡಬ್ಲುಎಸ್ಎಸ್ಬಿ ಮೇಲೆ ಆರೋಪಿಸಿದ್ದಾರೆ.
ಇಲ್ಲಿ ಮುನ್ನವೇ ಮ್ಯಾನ್ ಹೋಲ್ ನಿರ್ಮಿಸಬೇಕಿತ್ತು. ಆದರೆ ಅದನ್ನು ಮಾಡದೇ ಬಿಎಸ್ಸಿಎಲ್ ಸೈಕಲ್ ಟ್ರ್ಯಾಕ್ ನಿರ್ಮಿಸಿದೆ ಎಂದು ಬಿಡಬ್ಲುಎಸ್ಎಸ್ಬಿ ಬಿಎಸ್ಸಿಎಲ್ ಅಧಿಕಾರಿಗಳ ಮೇಲೆ ಹೊಣೆ ಹೊರೆಸಿದೆ. ಇದನ್ನು ನೋಡಿ, ಸರ್ಕಾರದ ಇಲಾಖೆಗಳ ನಡುವೆಯೇ ಸಮನ್ವಯತೆ ಇಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
Recommended Video
ಆರ್ ಸಿ ಕಾಲೇಜಿನಿಂದ ಟರ್ಫ್ ಕ್ಲಬ್ ವರೆಗೆ ಹಾಗೂ ರಾಜ ಭವನ ರಸ್ತೆಯಲ್ಲಿ ಈ ಸೈಕಲ್ ಪಥ ಆರಂಭವಾಗಿದ್ದು, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಮಿಂಕ್ ಸ್ವ್ಕಾರ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್ ಯೋಜನೆಯಡಿಯಲ್ಲಿ ಸೈಕಲ್ ಲೇನ್ ರೂಪಿಸಿದೆ.