ಇದು ಪ್ರವಾಸಿ ತಾಣ, ಆದರೆ ಯಾರೂ ಬರುವಂತಿಲ್ಲ!: ಪೊಲೀಸರ ಕ್ರಮದಿಂದ ಜನರಿಗೆ ಸಂಕಷ್ಟ
ಬೆಂಗಳೂರು, ನವೆಂಬರ್ 18: ರಾಜ್ಯದಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳ ನಡುವೆ ಹೊಂದಾಣಿಕೆಯಿಲ್ಲ, ಅದರಿಂದ ಜನಸಾಮಾನ್ಯರು ಬಲಿಪಶುಗಳಾಗುತ್ತಿದ್ದಾರೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಯಾವುದು ನಿಯಮ? ಯಾವ ವಿಚಾರ ಯಾವ ವ್ಯಾಪ್ತಿಗೆ ಬರುತ್ತದೆ? ಅದನ್ನು ನಾವು ಹೇಗೆ ತಿಳಿದುಕೊಳ್ಳಬೇಕು ಇತ್ಯಾದಿ ಸಂಗತಿಗಳೇ ಜನಸಾಮಾನ್ಯರಿಗೆ ಅರ್ಥವಾಗದಂತಾಗಿದೆ. ಜತೆಗೆ ಅಧಿಕಾರಿಗಳ ವರ್ತನೆಯೂ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.
ಪ್ರವಾಸಕ್ಕೆ ತೆರಳಿದ್ದ ಕೆಲವರು ಪೊಲೀಸರು-ಅರಣ್ಯ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯ ಕಾರಣದಿಂದ ಪಜೀತಿ ಪಟ್ಟ ಘಟನೆ ನಡೆದಿದೆ. ಅದನ್ನು ಪ್ರವಾಸಿಗರಲ್ಲಿ ಒಬ್ಬರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.
ರಾಜಾಸೀಟ್ ಅಭಿವೃದ್ಧಿಗೆ 455 ಲಕ್ಷ ರೂ. ವೆಚ್ಚದ ಯೋಜನೆ
'ನಮ್ಮ ದೇಶದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿ ಜನರ ರಕ್ಷಣೆಗೆ ಇರುವುದೋ ಅಥವಾ ಜನರ ಜೀವನವನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಉದ್ದೇಶದಿಂದ ಇರುವುದೋ ಎಂಬ ಗೊಂದಲ ಪೋಲಿಸ್ ಸಿಬ್ಬಂದಿಗಳ ವರ್ತನೆಗಳಿಂದ ನಮ್ಮಂತಹ ಜನಸಾಮಾನ್ಯರಿಗೆ ಅನಿಸದೇ ಇರದು' ಎಂದು ರಾಮಕಿಶೋರ್ ಶಾಸ್ತ್ರಿ ಎಂಬುವವರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ವಿವರ ಇಲ್ಲಿದೆ. ಮುಂದೆ ಓದಿ (ಚಿತ್ರಗಳು: ರಾಮಕಿಶೋರ್ ಶಾಸ್ತ್ರಿ).
ತೊಟ್ಟಿಕಲ್ ಜಲಪಾತದ ಪ್ರವಾಸ
ಬೆಂಗಳೂರಿನ ಹೊರವಲಯದಲ್ಲಿರುವ ಅಂದರೆ, ಕನಕಪುರ ರಸ್ತೆಯಲ್ಲಿ ಸಿಗುವ ಕಗ್ಗಲೀಪುರದಿಂದ ಎಡಗಡೆ ಸಾಗುವ ರಸ್ತೆಯಲ್ಲಿ ಸುಮಾರು 5 ಕಿಮೀ ನಷ್ಟು ದೂರಸಾಗುತ್ತಿದ್ದರೆ,ನಾವು ಬೆಂಗಳೂರಿನ ಬಳಿಯಲ್ಲೇ ಇರುವ ಬಗ್ಗೆ ಅನುಮಾನ ಮೂಡಿಸುವಷ್ಟು ಹಳ್ಳಿಯ ವಾತಾವರಣದಲ್ಲಿ ನಿಮಗೆ ಸಿಗುವುದೇ ತೊಟ್ಟಿಕಲ್ ಜಲಪಾತ (T K FALLS).
ಟಿಕೆ ಫಾಲ್ಸ್ ಬಗ್ಗೆ ಹಲವರಿಂದ ಕೇಳಿ ತಿಳಿದುಕೊಂಡಿದ್ದ ನಾನು ಅಲ್ಲಿಯ ಬಗ್ಗೆ ಮಾಹಿತಿ ನೀಡುವ ಹಲವು ವರದಿಗಳನ್ನು ಯೂ- ಟ್ಯೂಬ್ ನಲ್ಲಿ ನೋಡಿದ್ದರಿಂದ ಬೆಂಗಳೂರಿಗೆ ಹತ್ತಿರವೇ ಇದ್ದ ಟಿಕೆ ಫಾಲ್ಸ್ಗೆ ಹೋಗುವ ಯೋಜನೆ ಮಾಡಿ ನಾನು ನನ್ನ ಗೆಳೆಯರೊಂದಿಗೆ ಅಲ್ಲಿಗೆ ಹೋಗಿದ್ದೆವು.
ನಿರ್ಜನ ಪ್ರದೇಶದಲ್ಲಿ ಫಲಕಗಳು
ಕಗ್ಗಲಿಪುರ ಬಳಿಯಿಂದ ತೊಟ್ಟಿಕ್ಕಲ್ ಜಲಪಾತಕ್ಕೆ ಸಾಗಲು 2-3 ಕಡೆಗಳಿಂದ ರಸ್ತೆಗಳಿದ್ದು, ಎಲ್ಲಾ ಕಡೆಯೂ ಎಲ್ಲಾ ಕವಲುಗಳಲ್ಲೂ ಟಿಕೆ ಫಾಲ್ಸ್ ಗೆ ದಾರಿ ಎಂಬ ಫಲಕಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ರಸ್ತೆಯಲ್ಲಿ ಸಾಗುತ್ತಿದ್ದಂತೆ ಒಂದು ರೀತಿಯಲ್ಲಿ ನಿರ್ಜನ ಪ್ರದೇಶವಾಗಿರುವ ಅಲ್ಲಿ ಸಣ್ಣಪುಟ್ಟ ಬೆರಳೆಣಿಕೆ ಜನರಿರುವ ಹಳ್ಳಿಗಳನ್ನು ಹಾದು ಹೋಗುವಂತಹ ಪ್ರದೇಶವದು. ಯಾವುದೇ ಅಂಗಡಿ ಅಗತ್ಯದ ವಸ್ತುಗಳು ಸಿಗದಂತಹ ಪ್ರದೇಶದಲ್ಲಿ 5 ಕಿ ಮೀ ಗಳಷ್ಟು ಸಾಗಿದ ನಂತರ ಸಿಗುವುದೇ ಟಿಕೆ ಫಾಲ್ಸ್!
ಚಿಕ್ಕಮಗಳೂರಿನ ಎತ್ತಿನ ಭುಜದಲ್ಲಿ ಪ್ರವಾಸಿಗರಿಂದ ಶುಲ್ಕ ವಸೂಲಿಗೆ ಸ್ಥಳೀಯರ ವಿರೋಧ
ಬೆಂಗಳೂರಿನ ಪರಿಸರದವರು ಬಹುಸಂಖ್ಯೆಯಲ್ಲಿ ಬರುವ ಕಾರಣ ಟಿಕೆ ಫಾಲ್ಸ್ ಗೆ 1 ಕಿ ಮೀ ಇರುವಾಗಲೇ ರಸ್ತೆ ತಡೆ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಕಿರಿದಾದ ರಸ್ತೆ ಬದಿಯಲ್ಲೇ ನಮ್ಮ ನಮ್ಮ ಗಾಡಿಗಳನ್ನು ನಿಲ್ಲಿಸಿ ನಡೆದುಕೊಂಡು ಹೋಗಬೇಕು.
ಗಾಳಿ ತೆಗೆಯುತ್ತಿದ್ದ ಪೊಲೀಸರು
ಹೀಗೆ ಸಾಗಿದ ನಾವು ಜಲಪಾತದ ಪರಿಸರದಲ್ಲಿ ಒಂದಷ್ಟು ಹೊತ್ತು ಓಡಾಡಿ ಇನ್ನು ಹಿಂತಿರುಗುವ ಯೋಚನೆಯಲ್ಲಿದ್ದಾಗ, ಅಂದರೆ ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಪೋಲಿಸ್ ಸಿಬ್ಬಂದಿ ಇಬ್ಬರು ತಮ್ಮ ಲಾಠಿಯೊಂದಿಗೆ ಬರುವುದು ಕಾಣಿಸಿತು. ಅವರನ್ನು ಕಂಡಾಗ ನಾನಂದುಕೊಂಡಿದ್ದು ಏನೆಂದರೆ ಪ್ರವಾಸಿಗರನ್ನು ಮಾಸ್ಕ್ ಧರಿಸುವಂತೆ ಹೇಳಲು ಅಥವಾ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಬರುತ್ತಿರಬಹುದೇನೋ ಎಂದು.
ಆದರೆ ಜಲಪಾತದ ಬಳಿ ಬರುತ್ತಿದ್ದಂತೆ ಪೋಲಿಸರು ಅಲ್ಲಿದ್ದ ಎಲ್ಲರನ್ನೂ ವಾಪಾಸ್ ಹೋಗುವಂತೆ ಹೇಳಿದರಲ್ಲದೇ ಎಲ್ಲರಿಗೂ ನಿಮ್ಮ ನಿಮ್ಮ ಗಾಡಿಗಳು ಇದೆಯೋ ಇಲ್ಲವೋ ಎಂದು ನೋಡಿ ಎಂದು ಹೇಳುತ್ತಿದ್ದದ್ದನ್ನು ಕೇಳಿ ನಾನು ಆಘಾತಕ್ಕೊಳಗಾದಿದ್ದು ಸುಳ್ಳಲ್ಲ.
ಇದೇನಪ್ಪಾ ಹೊಸ ಸಮಸ್ಯೆ ಎಂದು ಸುಮಾರು 1 ಕಿಮೀ ದೂರದಲ್ಲಿದ್ದ ಗಾಡಿಗಳತ್ತ ಓಡಿ ಬಂದಾಗ ಕಂಡಿದ್ದು, ಅಲ್ಲಿ ಬಹಳಷ್ಟು ಪೋಲಿಸ್ ಅಧಿಕಾರಿಗಳ ಸಮೇತ ಹಲವು ಪೋಲಿಸ್ ಸಿಬ್ಬಂದಿಗಳಿದ್ದು, ಅಲ್ಲಿ ನಿಂತಿದ್ದ ಗಾಡಿಗಳ ಚಕ್ರದಿಂದ ಗಾಳಿ ತೆಗೆಯುತ್ತಿದ್ದುದು!
ಇದು ಪ್ರವಾಸಿ ತಾಣವಲ್ಲ!
ಕನಕಪುರ ಮುಖ್ಯರಸ್ತೆಯಿಂದ ಸುಮಾರು 5 ಕಿಮೀ ಒಳಬಂದಿರುವ ಗಾಡಿಗಳ ಚಕ್ರಗಳಿಂದ ಗಾಳಿ ತೆಗೆಯುತ್ತಿದ್ದುದನ್ನು ನೋಡಿ ನಿಜಕ್ಕೂ ಗಾಬರಿಯಾಗಿ ನಾವು ನಮ್ಮ ನಮ್ಮ ಗಾಡಿಗಳತ್ತ ಓಡಿದೆವು. ಪುಣ್ಯಕ್ಕೆ ಗಾಳಿ ತೆಗೆಯುತ್ತಿದ್ದ ಪೋಲಿಸರ ಸಿಬ್ಬಂದಿ ನಮ್ಮ ಗಾಡಿಗಳತ್ತ ಇನ್ನೂ ತಲುಪಿರಲಿಲ್ಲ. ಕೂಡಲೇ ಗಾಡಿಹತ್ತಿ ನಾವೆಲ್ಲರೂ ಹೊರಬರುತ್ತಿದ್ದರೆ ದಾರಿಯುದ್ದಕ್ಕೂ ಪೋಲಿಸ್ ಅಧಿಕಾರಿಗಳು ಬಂದಿದ್ದವರನ್ನು ತಡೆದು ದಂಡ ವಿಧಿಸುತ್ತಿದ್ದಂತೆ ಕಾಣಿಸಿತು.
ಕಾಸರಕೋಡ ಇಕೋ ಬೀಚ್ ಗೆ ನ.1ರಂದು ದಾಖಲೆಯ ಪ್ರವಾಸಿಗರು
ಇಂತಹ ಸ್ಥಿತಿ ಯಾಕೆ ಸೃಷ್ಟಿಯಾಯಿತು ಎಂಬ ಗೊಂದಲದಲ್ಲಿದ್ದ ನಾನು ಗಾಡಿ ನಿಲ್ಲಿಸಿ ಪೋಲಿಸ್ ಸಿಬ್ಬಂದಿಯೊಬ್ಬರಲ್ಲಿ ವಿಚಾರಿಸಿದಾಗ ಅವರು ಹೇಳಿದ್ದು ಏನು ಗೊತ್ತೇ?
ಈ ತೊಟ್ಟಿಕ್ಕಲ್ ಜಲಪಾತ ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಂತೆ, ಇದು ಟೂರಿಸಂ ಜಾಗವಲ್ಲವಂತೆ. ಆದ್ದರಿಂದ ಇಲ್ಲಿಗೆ ಬಂದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಂತೆ, ದಂಡ ವಿಧಿಸಬಹುದಂತೆ. ಕೊನೆಯದಾಗಿ ಆತ ಹೇಳಿದ್ದು 'ನಿಮ್ಮ ಗಾಡಿಯ ಚಕ್ರದ ಗಾಳಿ ತೆಗೆಯದೇ ಸರಿಯಾಗಿರುವುದರಿಂದ ಬೇಗ ಇಲ್ಲಿಂದ ತೆರಳಿ' ಎಂದು.
Recommended Video
ಚೆಕ್ ಪೋಸ್ಟ್ ಏಕಿಲ್ಲ?
'ಇಷ್ಟೆಲ್ಲಾ ಕೇಳಿಸಿಕೊಂಡ ನನಗೆ ಈ ಕ್ಷಣಕ್ಕೂ ಅರ್ಥವಾಗದೇ ಇರುವ ವಿಚಾರವೆಂದರೆ, ಟಿಕೆ ಫಾಲ್ಸ್ ನಿಜಕ್ಕೂ ನಿಷೇಧಿತ ಸ್ಥಳವಾಗಿದ್ದಲ್ಲಿ ರಸ್ತೆಯುದ್ದಕ್ಕೂ ಟಿಕೆ ಫಾಲ್ಸ್ಗೆ ದಾರಿ ಎಂಬ ಫಲಕಗಳನ್ನು ಹಾಕಿರುವುದು ಯಾಕಾಗಿ? ಅದು ನಿಜಕ್ಕೂ ನಿಷೇಧಿತ ಪ್ರದೇಶವಾಗಿದ್ದಲ್ಲಿ, ಅಲ್ಲಿಗೆ ಜನರು ತೆರಳದಂತೆ ತಡೆಯ ರೂಪದಲ್ಲಿ ಚೆಕ್ ಪೋಸ್ಟ್ ರೀತಿಯಲ್ಲಿ ಅರಣ್ಯ ಇಲಾಖೆಯಿಂದಲೇ ವ್ಯವಸ್ಥೆ ಇರಬೇಕಿತ್ತಲ್ಲವೇ? ಇದ್ಯಾವುದನ್ನು ಮಾಡದೇ ಪ್ರವಾಸಿಗರನ್ನೆಲ್ಲಾ ಕೈ ಬೀಸಿ ಕರೆಯುವ ವ್ಯವಸ್ಥೆ ಮಾಡಿ ಅಲ್ಲಿಗೆ ಬಂದ ಪ್ರವಾಸಿಗರಿಗೆ ದಂಡ ವಿಧಿಸುವುದೋ, ಇಲ್ಲಾ ಚಕ್ರಗಳ ಗಾಳಿ ತೆಗೆದು ಅವರನ್ನು ಅತಂತ್ರ ಸ್ಥಿತಿಗೆ ತಳ್ಳುವ ಈ ಪೋಲಿಸ್ ವ್ಯವಸ್ಥೆಯ ಬಗ್ಗೆ ಏನು ಹೇಳಬೇಕೋ ಅರ್ಥವೇ ಆಗುತ್ತಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.