ದುಡಿಮೆಗೆ ಅಡ್ಡಿಯಾಗದ ಅಂಗವೈಕಲ್ಯ: ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಏಜೆಂಟ್ಗೆ ನೆಟ್ಟಿಗರ ಬಹುಪರಾಕ್
ಬೆಂಗಳೂರು, ಆಗಸ್ಟ್ 12: ಬದುಕುವ ಛಲವೊಂದಿದ್ದರೆ ನೂರಾರು ದಾರಿಗಳಿವೆ. ಸಾಧನೆ ಮಾಡಲೇಬೇಕೆಂದುಕೊಂಡವರಿಗೆ ಅಂಗವಿಕಲತೆ ಎಂದಿಗೂ ಅಡ್ಡಿಯಾಗಲಾರದು. ಅಂಗವೈಕಲ್ಯವನ್ನೂ ಮೀರಿ ಸಾಧನೆ ಮಾಡಿದ ಹಲವು ಕಥೆಗಳು ನಮ್ಮ ಮುಂದಿವೆ, ಇದೂ ಅದೇ ರೀತಿ ಒಬ್ಬ ವ್ಯಕ್ತಿಯ ಕಥೆ.
ರೋಹಿತ್ ಕುಮಾರ್ ಸಿಂಗ್ ಎನ್ನುವ ಬೆಂಗಳೂರಿನ ವ್ಯಕ್ತಿಯೊಬ್ಬರು ತಾವು ಭೇಟಿಯಾದ ವಿಶೇಷ ವ್ಯಕ್ತಿಯೊಬ್ಬರ ಬಗ್ಗೆ ವಿವರವಾಗಿ ಬರೆದುಕೊಂಡಿದ್ದು, ಆ ಪೋಸ್ಟ್ ಈಗ ವೈರಲ್ ಆಗಿದೆ.
ರೋಹಿತ್ ಫಾರ್ಮ್ ಬಗ್ಗೆ ಮಾತನಾಡದವರು ಕೊಹ್ಲಿ ಟೀಕಿಸುತ್ತಿದ್ದಾರೆ: ಸುನಿಲ್ ಗವಾಸ್ಕರ್
ಭಾನುವಾರ ಎಂದಿನಂತೆ ಕಚೇರಿಗೆ ರಜೆ ಇದ್ದುದ್ದರಿಂದ ರೋಹಿತ್ ಕುಮಾರ್ ಸಿಂಗ್ ನಿದ್ದೆಯಿಂದ ತಡವಾಗಿ ಎದ್ದಿದ್ದಾರೆ. ಸ್ವಿಗ್ಗಿ ಮೂಲಕ ಉಪಹಾರಕ್ಕಾಗಿ ಆರ್ಡರ್ ಮಾಡಿದ್ದಾರೆ. ನಿರೀಕ್ಷಿತ ಸಮಯಕ್ಕೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಬರದಿದ್ದಾಗ ರೋಹಿತ್ ಕುಮಾರ್ ಕರೆ ಮಾಡಿದ್ದಾರೆ, ಆ ಕಡೆಯಿಂದ ಕರೆ ಸ್ವೀಕರಿಸಿದ ಏಜೆಂಟ್, ಐದು ನಿಮಿಷಗಳಲ್ಲೇ ಬರುವುದಾಗಿ ತಿಳಿಸಿದ್ದಾರೆ.
ಐದು ನಿಮಿಷಗಳಾದರೂ ಉಪಾಹಾರ ಬರದಿದ್ದಾಗ ರೋಹಿತ್ ಕುಮಾರ್ ಸಿಂಗ್ ಸಹನೆ ಕಳೆದುಕೊಂಡಿದ್ದಾರೆ. ಮತ್ತೆ ಸ್ವಿಗ್ಗಿ ಡೆಲಿವರಿ ಏಜೆಂಟ್ಗೆ ಕರೆ ಮಾಡಿ ಹಸಿವಾಗುತ್ತಿದೆ ಬೇಗ ಬನ್ನಿ ಎಂದು ಮನವಿ ಮಾಡಿದ್ದಾರೆ. ಕರೆ ಸ್ವೀಕರಿಸಿದ ಆ ವ್ಯಕ್ತಿ ಪುನಃ ಸಮಾಧಾನದ ಧ್ವನಿಯಲ್ಲಿ ಐದು ನಿಮಿಷಗಳಲ್ಲೇ ಬರುವುದಾಗಿ ತಿಳಿಸಿದ್ದಾರೆ.
ಬಾಗಿಲು ತೆರೆದು ಶಾಕ್ ಆದ ರೋಹಿತ್ ಕುಮಾರ್; ಮುಂದಿನ 5-10 ನಿಮಿಷಗಳಲ್ಲೇ ಡೋರ್ ಬೆಲ್ ಶಬ್ದ ಮಾಡಿದೆ. ಅಸಹನೆಯಿಂದಲೇ ಹೋಗಿ ಬಾಗಿಲು ತೆರೆದ ರೋಹಿತ್ ಶಾಕ್ ಆಗಿದ್ದಾರೆ. ಎದುರಿನಲ್ಲಿ ಊರುಗೋಲಿನ ಸಹಾಯದಿಂದ ನಿಂತಿದ್ದ ವ್ಯಕ್ತಿಯೊಬ್ಬರು ರೋಹಿತ್ ಕುಮಾರ್ ಸಿಂಗ್ ಆರ್ಡರ್ ಮಾಡಿದ್ದ ಆಹಾರವನ್ನು ಹಿಡಿದು ನಗುತ್ತಾ ನಿಂತಿದ್ದರು. ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಕೃಷ್ಣಪ್ಪ ರಾಥೋಡ್ ಎನ್ನುವ ವ್ಯಕ್ತಿ ರೋಹಿತ್ ಕುಮಾರ್ ಸಿಂಗ್ ಎದುರಲ್ಲಿದ್ದರು.
"40 ವರ್ಷ ವಯಸ್ಸಿನ ಬೂದು ಕೂದಲು, ಊರುಗೋಲುಗಳಿಂದ ತನ್ನನ್ನು ತಾನು ಸಮತೋಲನಗೊಳಿಸುತ್ತಿದ್ದ ವ್ಯಕ್ತಿ ನನ್ನನ್ನು ನೋಡಿ ನಗುತ್ತಿದ್ದರು. ನನ್ನ ವರ್ತನೆ ಬಗ್ಗೆ ನನಗೆ ನಾಚಿಕೆಯಾಯಿತು. ನಾನು ತಕ್ಷಣವೇ ಅವನಲ್ಲಿ ಕ್ಷಮೆಯಾಚಿಸಿದೆ ಮತ್ತು ಅವರ ಜೊತೆ ಮಾತನಾಡಲು ಪ್ರಯತ್ನಿಸಿದೆ" ಎಂದು ರೋಹಿತ್ ಹೇಳಿದರು.
ಕೋವಿಡ್ನಿಂದ ಕೆಲಸ ಕಳೆದುಕೊಂಡ ಕೃಷ್ಣಪ್ಪ; ಸಿಕ್ಕ ಎರಡು ಮೂರು ನಿಮಿಷಗಳ ಕಾಲವಕಾಶದಲ್ಲೇ ರೋಹಿತ್ ಕುಮಾರ್ ಸಿಂಗ್ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಕೃಷ್ಣಪ್ಪ ರಾಥೋಡ್ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ಕೆಲಸ ಕಳೆದುಕೊಂಡರು.
ನಂತರ ಹೊಟ್ಟೆಪಾಡಿಗಾಗಿ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಆರಂಭಿಸಿದರು. ಅವರಿಗೆ ಮೂರು ಮಕ್ಕಳಿದ್ದಾರೆ. ಆದರೆ ಅವರ ಆರ್ಥಿಕ ಸ್ಥಿತಿಯಿಂದಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬೆಂಗಳೂರಿಗೆ ಕರೆತರಲು ಸಾಧ್ಯವಾಗಲಿಲ್ಲ. ಮುಂಜಾನೆ ಎದ್ದೇಳುವುದರಿಂದ ಹಿಡಿದು ಇಡೀ ದಿನ ದಣಿವರಿಯಿಲ್ಲದೆ ದುಡಿಯುವವರೆಗೆ ಎಲ್ಲ ಕಷ್ಟಗಳನ್ನೂ ಧಿಕ್ಕರಿಸುವ ಮಹಾಶಕ್ತಿ ಅವರಲ್ಲಿದೆ.
ಎರಡು ಮೂರು ನಿಮಿಷ ರೋಹಿತ್ ಮಾತನಾಡಿದ ಕೃಷ್ಣಪ್ಪ ತನ್ನ ಮುಂದಿನ ಆರ್ಡರ್ ನೀಡಲು ತಡವಾಗುತ್ತದೆ ಎಂದು ಹೊರಟು ಹೋಗಿದ್ದಾರೆ. ಈ ಹೃದಯಸ್ಪರ್ಶಿ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಕೃಷ್ಣಪ್ಪ ಅವರ ದುಡಿಯುವ ಛಲಕ್ಕೆ ಸಲಾಂ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬರು, "ಅವನ ಹೃದಯ ಸ್ಪರ್ಶಿಸುವ ನಗು ಮತ್ತು ಅವನ ಕಣ್ಣುಗಳಲ್ಲಿರುವ ಬಹಳಷ್ಟು ಕನಸುಗಳು ನನ್ನ ದಿನವನ್ನು ಸುಂದರವಾಗಿಸಿದವು" ಎಂದು ಬರೆದುಕೊಂಡಿದ್ದಾರೆ.