ನೀವು ವಿಮೆ ಮಾಡಿಸಿದ್ರೆ ಈ ಮರದಡಿ ನಿಲ್ಲಬಹುದು!
ಬೆಂಗಳೂರು, ಮೇ 28: 'ಎಚ್ಚರಿಕೆ... ಯಾವ ಕಾರಣಕ್ಕೂ ಇಲ್ಲಿ ಗಾಡಿ ಪಾರ್ಕ್ ಮಾಡಲು ಹೋಗಬೇಡಿ, ಇಲ್ಲಿ ಯಾವ ಕಾರಣಕ್ಕೂ ನಿಲ್ಲಬೇಡಿ, ಈ ತೆಂಗಿನ ಮರ ಯಾವಾಗ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಚುನಾವಣೆ ಸಮಯದಲ್ಲಿ ಮರದ ಸ್ಥಿತಿಯನ್ನು ಪರಿಶೀಲನೆ ಮಾಡಲಾಗುತ್ತದೆ!!! '.
ಹೌದು...ಇಂಥದ್ದೊಂದು ಬ್ಯಾನರ್ ಮಹಾನಗರದ ಅತ್ಯಂತ ಹಳೆಯ ಪ್ರದೇಶ ಎಂದೇ ಹೆಸರುವಾಸಿಯಾಗಿರುವ ಚಾಮರಾಜ ಪೇಟೆಯ ರಾಮೇಶ್ವರ ದೇವಾಲಯದ ಎದುರಿಗಿನ ವೃತ್ತದ ಸಮೀಪ ಅಳವಡಿಸಲಾಗಿದೆ. ನಿಮಗೆ ಅರ್ಥ ಆಗಿರಬಹುದು. ಬ್ಯಾನರ್ ಹಾಕಿದವರು ಯಾವ ಇಲಾಖೆಯವರಲ್ಲ.
ಇಲಾಖೆಗಳಿಗೆ ಮನವಿ ಸಲ್ಲಿಸಿ ಬೇಸತ್ತ 78 ವರ್ಷದ 'ಯುವಕ' ಮೂರ್ತಿ ಬ್ಯಾನರ್ ಹಾಕಿ ವ್ಯವಸ್ಥೆಯ ಕರಾಳತೆಯನ್ನು ಎತ್ತಿ ಹಿಡಿದಿದ್ದಾರೆ. ಕೆಎಸ್ ಆರ್ ಟಿಸಿಯ ನಿವೃತ್ತ ಅಧಿಕಾರಿಯಾಗಿರುವ ಮೂರ್ತಿಯವರ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸುವವರು ಯಾರೂ ಇಲ್ಲದಿರುವುದು ದುರ್ದೈವ.
ಹವಾಮಾನ ಇಲಾಖೆ ಇನ್ನು ಎರಡು ಮೂರು ದಿನ ಗಾಳಿ ಮಳೆಯಾಗುತ್ತದೆ ಎಂದು ವರದಿ ನೀಡಿದೆ. ಒಂದು ವೇಳೆ ಜೋರಾದ ಮಳೆ ಆರಂಭವಾದರೆ ಮರ ನೆಲಕ್ಕುರುಳುವುದು ಖಂಡಿತ. ಬಿದ್ದು ಅಪಾಯಕ್ಕೆ ಕಾರಣವಾದರೆ ಯಾರು ಹೊಣೆ? ಎಂಬುದು ಮೂರ್ತಿ ಅವರ ಪ್ರಶ್ನೆ.[ಹವಾಮಾನ ಇಲಾಖೆ ವರದಿ: ಹತ್ತು ಜಿಲ್ಲೆಗಳಲ್ಲಿ ಮಳೆ]
ಮೈಕೋ ಲೇಔಟ್ ನಲ್ಲಿ ಮರವೊಂದನ್ನು ಕಡಿಯಬೇಕು, ಕಡಿಯಬಾರದು ಎಂದು ಪರ ವಿರೋಧದ ಚರ್ಚೆ ಎದ್ದಿದ್ದನ್ನು ನೋಡಿದ್ದೇವೆ. ಆದರೆ ಇಲ್ಲಿ ಮರ ಕಡಿಯಲು ಯಾರ ಅಡ್ಡಿ ಆತಂಕಗಳಿಲ್ಲ. ಅಷ್ಟಕ್ಕೂ ಇದು ಗೆದ್ದಲು ತಿಂದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರ.[ಈ ಮರ ಕಡಿಯುವುದೋ? ಬಿಡುವುದೋ? ನೀವೇ ಹೇಳಿ..]
ಇದೊಂದು ಪುಟ್ಟ ಬ್ಯಾನರ್ ನಾಗರಿಕರಿಗೆ ವ್ಯವಸ್ಥೆ ಮೇಲೆ ಹುಟ್ಟಿರುವ ಅಸಹ್ಯದ ಪ್ರತೀಕ ಎಂಬಂತೆ ಕಂಡುಬರುತ್ತಿದೆ. ಅಷ್ಟಕ್ಕೂ ಈ ಬ್ಯಾನರ್ ಅಳವಡಿಸಲು ಕಾರಣವೇನು ಮುಂದಿದೆ ಕತೆ ಓದಿ....
ಮರ ಯಾವಾಗ ಬೀಳುತ್ತೋ ಗೊತ್ತಿಲ್ಲ!
ಬೆಂಗಳೂರಿನ ಮರಗಳು ಧರೆಗುರುಳಲು ಸ್ವಲ್ಪವೇ ಮಳೆ ಬಂದರೂ ಸಾಕು. ಸುಮಾರು 80 ವರ್ಷಕ್ಕೂ ಹಳೆಯದಾದ ತೆಂಗಿನ ಮರ ಗೆದ್ದಲು ತಿಂದು ನಿಂತಿದೆ. ಇದನ್ನು ತೆರವು ಮಾಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವ ಅಧಿಕಾರಿ ಅಥವಾ ಇಲಾಖೆ ಸ್ಪಂದಿಸಿಲ್ಲ. ಇದೆಲ್ಲದರಿಂದ ಬೇಸತ್ತ ಸ್ಥಳೀಯ ನಿವಾಸಿ ಮೂರ್ತಿ ಇಂಥದ್ದೊಂದು ಬ್ಯಾನರ್ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ತೆಂಗಿನ ಮರ ಹೇಗಿದೆ?
ತೆಂಗಿನ ಮರದ ಬುಡವನ್ನು ಗೆದ್ದಲು ತಿಂದಿದೆ. ಮರಕ್ಕೆ ತಾಗಿಕೊಂಡೆ ವಿದ್ಯುತ್ ತಂತಿಗಳು ಹೋಗಿವೆ, ಸುಮಾರು 120 ಅಡಿ ಎತ್ತರದ ಮರ ಗಾಳಿ ಬಂದಾಗ ಅತ್ತಿಂದ ಇತ್ತ ತೂರಾಡುತ್ತಿರುತ್ತದೆ.
ಬ್ಯಾನರ್ ಹಾಕಿ ಎಷ್ಟು ದಿನ ಆಗಿದೆ?
ಇಂಥದ್ದೊಂದು ಬ್ಯಾನರ್ ಹಾಕಿ ಇದಾದಲೇ ಸುಮಾರು 20 ದಿನ ಕಳೆದಿದೆ. ಆದರೆ ಬಿಬಿಎಂಪಿ, ಬೆಸ್ಕಾಂ ಮತ್ತು ಅರಣ್ಯ ಇಲಾಖೆಯ ಯಾವ ಅಧಿಕಾರಿಗಳು ಇತ್ತ ಮುಖ ಹಾಕಿಲ್ಲ.
ಕಟ್ಟೆ ಸತ್ಯನಾರಾಯಣ ಅವರಿಗೆ ಮನವಿ
ಕಟ್ಟೆ ಸತ್ಯನಾರಾಯಣ ಮೇಯರ್ ಆಗಿದ್ದಾಗಲೇ ಮೂರ್ತಿ ಮರ ತೆರವಿನ ಸಂಬಂಧ ಮನವಿ ಸಲ್ಲಿಸಿದ್ದರು. ಅವರು ಜಯನಗರದ ಅರಣ್ಯ ಕಚೇರಿಗೆ ಮನವಿ ಸಲ್ಲಿಕೆ ಮಾಡುವಂತೆಯೂ ತಿಳಿಸಿದ್ದರು. ಮೂರ್ತಿ ಹಾಗೇ ಮಾಡಿ ವರ್ಷಗಳು ಕಳೆದಿದ್ದರೂ ಮರ ಯಾವ ಸ್ಥಿತಿಯಲ್ಲಿದೆ? ಎಂದು ಪರಿಶೀಲನೆ ಮಾಡಲು ಯಾರೂ ಸುಳಿದಿಲ್ಲ.
ಯಾರಿಗೂ ಅಪಾಯ ಆಗಬಾರದು
ನಾನು ಶಾಸ್ತ್ರ ಓದಿದ್ದೇನೆ. ಕಲ್ಪವೃಕ್ಷವನ್ನು ಕಡಿಯಬಾರದು ಎಂದು ಗೊತ್ತು. ಆದರೆ ಬೇರೆಯವರಿಗೆ ಅಪಾಯ ತಂದೊಡ್ಡುತ್ತಿರುವ ಹಳೆಯ ಮರ ಕತ್ತರಿಸಿದರೆ ತಪ್ಪೇನು? ಎಂದು ಮೂರ್ತಿ ಪ್ರಶ್ನೆ ಮಾಡುತ್ತಾರೆ.
ಮಳೆ ಬಂದರೆ ಏನು ಕತೆ?
ಮಳೆ ಬಂದ ನಂತರವ ಮುರಿದು ಬಿದ್ದ ಮರಗಳನ್ನು ತೆರವು ಮಾಡಲು ಇಲಾಖೆಗಳು ವಾರಗಳ ಕಾಲ ತೆಗೆದಿಕೊಳ್ಳುವುದು ನಿಮಗೆ ಗೊತ್ತು. ಗೆದ್ದಲು ಹಿಡಿದು ಶಿಥಿಲಗೊಂಡಿರುವ ತೆಂಗಿನ ಮರ ಕಡಿಯಲು ಯಾರ ಆತಂಕವೂ ಇಲ್ಲ. ಆದರೆ ಅಧಿಕಾರಿಗಳು ಯಾರ ಬಲಿಗಾಗಿ ಕಾದಿದ್ದಾರೋ ಗೊತ್ತಿಲ್ಲ!
ಜನಜಂಗುಳಿಯ ರಸ್ತೆ
ಒಂದು ಕಡೆ ಲಾರಿಗಳನ್ನು ಪಾರ್ಕ್ ಮಾಡಲಾಗಿರುತ್ತದೆ. ಚಾಮರಾಜ ಪೇಟೆಯ ಒಳಭಾಗದಿಂದ ಪಂಪ ಮಹಾಕವಿ ರಸ್ತೆ ಕಡೆ ಸಂಚರಿಸುವವರಿಗೆಲ್ಲ ಇದೇ ರಸ್ತೆಯೇ ಆಧಾರ. ರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ. ಮರ ಯಾವಾಗ ಯಾರ ಮೇಲೆ ಉರುಳುತ್ತದೆಯೋ ಹೇಳಲು ಸಾಧ್ಯವಿಲ್ಲ.
ಯಾರೂ ಬಂದಿಲ್ಲ ಸ್ವಾಮಿ
ನಮ್ಮ ತಾತ ಅದೆಷ್ಟು ಸಾರಿ ಮನವಿ ಸಲ್ಲಿಸಿದ್ದಾರೋ ಗೊತ್ತಿಲ್ಲ. ನಂತರ ಬೇಸತ್ತು ಬ್ಯಾನರ್ ಮಾಡಿ ಹಾಕಿದ್ದಾರೆ. ನಾನೇ ಬ್ಯಾನರ್ ಕಟ್ಟಿದ್ದೇನೆ. ಒಮ್ಮೆ ಚುನಾವಣೆ ಸಮಯದಲ್ಲಿ ಮತ ಕೇಳಲು ಬಂದವರನ್ನು ಮರದ ವಿಚಾರಕ್ಕೆ ಸಂಬಂಧಿಸಿ ತಾತ ಚೆನ್ನಾಗೆ ತರಾಟೆಗೆ ತೆಗೆದುಕೊಂಡಿದ್ದರು ಎಂದು ಸಮೀಪದಲ್ಲೇ ಬೇಕರಿ ನಡೆಸುವ ಮೂರ್ತಿ ಅವರ ಮೊಮ್ಮಗ ಹೇಳುತ್ತಾರೆ.
ಇನ್ನಾದರೂ ಕಣ್ಣು ಬಿಡುವರೇ?
ಮೂರ್ತಿಯವರ ಮನವಿಯುತ ಹೋರಾಟಕ್ಕೆ ಇನ್ನಾದರೂ ಬೆಲೆ ಸಿಗುತ್ತದೆಯೇ? ಅಥವಾ ಮಳೆ ಬಂದಾಗ ಮರ ಯಾರ ಮೇಲಾದರೂ ಬಿದ್ದು ಜೀವ ಹಾನಿಯಾಗದ ಮೇಲೆ ಸಬೂಬು ಹೇಳಲಾಗುತ್ತದೆಯೇ? ಎಂಬುದನ್ನು ಇಲಾಖೆಗಳೇ ಹೇಳಬೇಕು.