ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ ಹೊಸ ದರೋಡೆಕೋರರ ಗ್ಯಾಂಗ್!!
ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಈ ತಂಡ ಹೆಚ್ಚು ಸಕ್ರಿಯ; ಈ ತಂಡವು ದರೋಡೆ ಮಾಡುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು.
ಬೆಂಗಳೂರು, ಫೆಬ್ರವರಿ 10: ಬೆಂಗಳೂರಿಗರೇ ಎಚ್ಚರ. ನಗರದಲ್ಲಿ ಮಧ್ಯರಾತ್ರಿ ಸಂಚರಿಸುವವರನ್ನು ಅಡ್ಡಗಟ್ಟಿ ಹೊಡೆದು, ಬಡಿದು ಅವರ ಬಳಿಯಿದ್ದ ಮೊಬೈಲು, ಉಂಗುರ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಕಿತ್ತು ಪರಾರಿಯಾಗುವ ಸ್ಕೂಟರ್ ಸವಾರಿ ಕಳ್ಳರ ತಂಡವೊಂದು ಹುಟ್ಟಿಕೊಂಡಿದೆ.
ಒಟ್ಟು ಆರು ಜನರಿರುವ ತಂಡ ಇದಾಗಿದ್ದು ಮೂರು ಬೈಕ್ ಗಳಲ್ಲಿ ಬಂದು ರಸ್ತೆಗಳಲ್ಲಿಲ ಒಂಟಿಯಾಗಿ ಸಾಗುತ್ತಿರುವವರ ಮೇಲೆ ಹಲ್ಲೆ ಮಾಡಿ ಅವರಿಂದ ಮೊಬೈಲ್, ಚೈನ್, ಉಂಗುರು ಮತ್ತಿತರ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಾರೆ. ದರೋಡೆ ವೇಳೆ ಚಾಕುಗಳಿಂದಲ್ಲೂ ಹಲ್ಲೆ ಮಾಡಿದ್ದಾರೆ ಈ ಕಳ್ಳರು. ಈ ದರೋಡೆಕೋರರದ ಕೆಲವಾರು ಕೃತ್ಯಗಳು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇವು ನಾಗರಿಕರನ್ನು ಬೆಚ್ಚಿಬೀಳಿಸುವಂತಿವೆ.
ಮಧ್ಯರಾತ್ರಿ ಸುಮಾರು 1 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ಈ ಗ್ಯಾಂಗ್ ದರೋಡೆ ನಡೆಸುವುದು ಬೆಳಕಿಗೆ ಬಂದಿದೆ. ಅಲ್ಲದೆ, ಅವರು ಸಾಗುವ ಸ್ಕೂಟರ್ ಗಳಿಗೆ ನಂಬರ್ ಪ್ಲೇಟ್ ಹಾಕಲಾಗಿಲ್ಲ. ಆದರೂ, ಅವರನ್ನು ಪತ್ತೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಮೇಲೆ ಹಲ್ಲೆ: ಜೆಪಿ ನಗರದಲ್ಲಿ ಈಗಾಗಲೇ ಇಂಥ ಕೆಲವು ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದ್ದು, ಪೊಲೀಸರು ಈ ಕಳ್ಳರ ಗ್ಯಾಂಗ್ ಪತ್ತೆಗೆ ವ್ಯೂಹ ರಚಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 26 ರಂದು ಬೆಳಗಿನ ಜಾವ 4 ಗಂಟೆಗೆ, ಜೆಪಿ ನಗರದ ಮೊದಲ ಹಂತದಲ್ಲಿ ಇಂಥ ದರೋಡೆ ಪ್ರಕರಣ ನಡೆದಿತ್ತು. ಅಂದು ಸಾರಕ್ಕಿಯ 6ನೇ ಹಾಗೂ 7ನೇ ಕ್ರಾಸ್ ಗಳ ಮೂಲಕ ಸಾಗಿಬಂದಿದ್ದ ಈ ತಂಡ, ಅದೇ ರಸ್ತೆಯಲ್ಲಿ ಒಬ್ಬಂಟಿಯಾಗಿ ಹೋಗುತ್ತಿದ್ದ ಕಿರ್ಲೋಸ್ಕರ್ ಕಂಪನಿಗೆ ಕೆಲಸಕ್ಕಾಗಿ ತೆರಳುತ್ತಿದ್ದ ನೌಕರ ನಿಶಾಂತ್ ಎಂಬುವರ ಮೇಲೆ ಹಲ್ಲೆ ನಡೆಸಿ ಹಣ ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿತ್ತು.
ಇದಾದ ಮೇಲೆ, ಇತ್ತೀಚೆಗೆ, ಜನವರಿ 18ರಂದು ಜೆಪಿ ನಗರದ 2ನೇ ಹಂತದಲ್ಲಿರುವ ವಾಸವಿ ಎಜುಕೇಷನ್ ಟ್ರಸ್ಟ್ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಇದೇ ಗ್ಯಾಂಗ್ ನ ಸದಸ್ಯನೊಬ್ಬ ಹಲ್ಲೆ ಮಾಡಿದ್ದ. ಆಗ, ಎದುರಿನಲ್ಲೇ ಇದ್ದ ಅಂಗಡಿಯ ಮಾಲೀಕ ಹೊರಬಂದ ಕೂಡಲೇ ಹಲ್ಲೆಗೊಳಗಾದ ವಿದ್ಯಾರ್ಥಿಯನ್ನೂ ದಬ್ಬಿಕೊಂಡು ಗ್ಯಾಂಗ್ ಸದಸ್ಯ ದೂರ ಓಡಿದ್ದ.
ಮೇಲಿನ ಎರಡೂ ಘಟನೆಗಳ ಸಿಸಿಟಿವಿ ದೃಶ್ಯಾವಳಿಗಳೂ ಈಗ ಪೊಲೀಸರಿಗೆ ಲಭ್ಯವಾಗಿದ್ದು, ಅದನ್ನು ತೀವ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಎಲ್ಲಿಲ್ಲಿ ಗ್ಯಾಂಗ್ ಸಕ್ರಿಯ?: ಸದ್ಯಕ್ಕಿರುವ ಮಾಹಿತಿಗಳ ಪ್ರಕಾರ, ಈ ಗ್ಯಾಂಗ್ ಔಟರ್ ರಿಂಗ್ ರೋಡ್, ಮೈಸೂರು ರೋಡ್, ಹೊಸೂರು ರೋಡ್, ಜೆಪಿ ನಗರ, ಕುಮಾರ ಸ್ವಾಮಿ ಲೇಔಟ್, ಬನಶಂಕರಿ, ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ.
ಈ ಗ್ಯಾಂಗ್ ನಿಂದ ಆಗಾಗ ದರೋಡೆಗಳಾಗಿದ್ದರೂ ದರೋಡೆಗೊಳಗಾದ ಮಂದಿ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಹೇಳಲಾಗಿದೆ.