ಫ್ರೀಡಂ ಪಾರ್ಕಿನಲ್ಲಿ ಭಗತ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು, ಸೆ. 28: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನ ಆವರಣದಲ್ಲಿ 15 ಅಡಿ ಎತ್ತರದ ಪ್ರತಿಮೆ ರೂಪದ ಸ್ಮಾರಕ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ಯುವ ಜನತೆಗೆ ಸ್ಫೂರ್ತಿಯಾಗಿರುವ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಸವಿನೆನಪಿನಲ್ಲಿ ರಾಷ್ಟ್ರೀಯ ಚಾಲಕರ ಯೂನಿಯನ್ ಈ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದೆ. ಶಿಲ್ಪಿ ಜಾನ್ ದೇವರಾಜ್ ಅವರು ಈ ಪ್ರತಿಮೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ದೇಶದ ಯುವ ಜನತೆ, ದಕ್ಷ ಅಧಿಕಾರಿಗಳು, ದೇಶಭಕ್ತ ನಾಗರಿಕರು, ಸೆಲೆಬ್ರಿಟಿಗಳು ಪ್ರತಿಮೆ ನಿರ್ಮಾಣಕ್ಕೆ ಸಿಮೆಂಟ್ ಹಾಕುವ ಮೂಲಕ ತಮ್ಮ ಕೈಜೋಡಿಸಲಿದ್ದಾರೆ. ಇದು ಯುವಜನತೆಗೆ ಸಂತಸದ ವಿಷಯವಾಗಿದೆ ಎಂದು ಡ್ರೈವರ್ಸ್ ಯೂನಿಯನ್ ನ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹೇಳಿದರು.
ಸೆ.28ರಿಂದ ಅಕ್ಟೋಬರ್ 02ರ ತನಕ ಭಗತ್ ಸಿಂಗ್ ಹುಟ್ಟುಹಬ್ಬದ ಆಚರಣೆಯನ್ನು ಫ್ರೀಡಂ ಪಾರ್ಕಿನಲ್ಲಿ ಆಚರಿಸಲಾಗುತ್ತಿದೆ. ಗುರುವಾರದ ಕಾರ್ಯಕ್ರಮದಲ್ಲಿ ಮಾಜಿ ಸೂಪರ್ ಕಾಪ್ ಹಾಲಿ ಕೆಪಿಸಿಸಿ ಉಪಾಧ್ಯಕ್ಷ ಎಚ್ ಟಿ ಸಾಂಗ್ಲಿಯಾನ, ಜಾನ್ ದೇವರಾಜ್, ಸಾಮಾಜಿಕ ಕಾರ್ಯಕರ್ತ ಕಿಶೋರ್ ಜೋಸೆಫ್, ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಉದಯ್ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.