ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ವ್ಯಕ್ತಿ ಸೆರೆ !
ಬೆಂಗಳೂರು, ಡಿಸೆಂಬರ್ 24: ಮದುವೆ ಮನೆಯಲ್ಲಿ ಕೆಲಸ ಮಾಡುವ ಅಮಾಯಕ ಹುಡುಗನ ರೀತಿ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡುತ್ತಿದ್ದ. ಸಂದರ್ಭ ನೋಡಿ ಚಿನ್ನಾಭರಣ ನೋಡಿ ಪರಾರಿಯಾಗುತ್ತಿದ್ದ. ಇಂತಹ ಖತರ್ನಾಕ್ ಕಳ್ಳನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಕುಮಾರ್ ಬಂಧಿತ ಆರೋಪಿ. ಈತನಿಂದ ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಸುಂಕದಕಟ್ಟೆಯ ತಿಮ್ಮಕ್ಕ ಪಟೇಲ್ ಕಲ್ಯಾಣ ಮಂಟಪದಲ್ಲಿ ಮದುವೆಯಾಗುತ್ತಿತ್ತು. ಮದು ಮಕ್ಕಳಿಗೆ ಕೊಡುವ ಕೊಠಡಿಗಳಿಗೆ ಭೇಟಿ ನೀಡಿ ಕೆಲಸ ಮಾಡುವನಂತೆ ಬಿಂಬಿಸಿಕೊಂಡಿದ್ದ.
ಕಳ್ಳತನಕ್ಕೆ ಹೊಂಚು ಹಾಕಿದ್ದ ಮೋಹನ್ ಕುಮಾರ್ ವರ್ಷಿಣಿ ಎಂಬುವರಿಗೆ ಸೇರಿದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಆಧರಿಸಿ ಮೋಹನ್ ಚಲನವಲನ ಗುರುತಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಎರಡು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.