ಕಾಂಗ್ರೆಸ್ ಪ್ರಚಾರ ವೇಳೆ ನಟಿ ಖುಷ್ಬೂ ಜತೆ ಶಾಂತಿನಗರದಲ್ಲಿ ಯುವಕನ ಅಸಭ್ಯ ವರ್ತನೆ
ಬೆಂಗಳೂರು, ಏಪ್ರಿಲ್ 10: ಚಿತ್ರ ನಟಿ ಖುಷ್ಬೂ ಅವರು ಬುಧವಾರ ಚುನಾವಣೆ ಪ್ರಚಾರ ನಡೆಸುವ ವೇಳೆ ಯುವಕನೊಬ್ಬ ಅನುಚಿತವಾಗಿ ನಡೆದುಕೊಂಡಿದ್ದು, ಆ ವೇಳೆ ಅವರು ಆತನ ವಿರುದ್ಧ ಅಕ್ರೋಶಗೊಂಡ ಘಟನೆ ನಡೆದಿದೆ. ಬೆಂಗಳೂರಿನ ಶಾಂತಿನಗರದ ವ್ಯಾಪ್ತಿಯ ಹೊಯ್ಸಳ ನಗರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡಿದ್ದಾಗ ಹೀಗಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಬುಧವಾರ ನಟಿ ಖುಷ್ಬೂ ಅವರು ಪ್ರಚಾರ ಕೈಗೊಂಡಿದ್ದರು. ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು, ಪೊಲೀಸರು ಹೀಗೆ ಅಪಾರ ಪ್ರಮಾಣದಲ್ಲಿ ಜನರು ಇದ್ದ ಸಮಯದಲ್ಲೇ ಹೀಗೆ ನಡೆದಿದೆ.
ವಾಹನ ಹತ್ತಲು ತೆರಳುತ್ತಿದ್ದ ಖುಷ್ಬೂ ಅವರ ಜತೆಗೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮುಜುಗರ ಆಗುವಂತೆ ನಡೆದುಕೊಂಡಿದ್ದಾನೆ. ಅತನ ವರ್ತನೆಯಿಂದ ಸಿಟ್ಟಾದ ಖುಷ್ಬೂ ಅವರು, ಸರಿಯಾಗಿ ಬಾರಿಸಲು ಮುಂದಾಗಿದ್ದಾರೆ. ಹೀಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಿಲ್ಲ. ಅದರೆ ಖುಷ್ಬೂ ಅವರು ಸಿಟ್ಟಾಗಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಚಿತ್ರ ನಟಿಯರಿಗೆ ಇಂಥ ಕೆಟ್ಟ ಅನುಭವಗಳು ಆಗಿರುವ ಬಗ್ಗೆ ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಆದ್ದರಿಂದ ನಟಿಯರು ಪ್ರಚಾರಕ್ಕೆ ಬಂದ ವೇಳೆ ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಹೆಚ್ಚಿನ ಭದ್ರತೆ ಒದಗಿಸುವುದು ಅತ್ಯಗತ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದರ ಜತೆಗೆ ಮಹಿಳೆಯರ ಜತೆಗೆ ಅಶ್ಲೀಲವಾಗಿ ನಡೆದುಕೊಳ್ಳುವ ಮನಸ್ಥಿತಿಯೇ ಬದಲಾಗಬೇಕಿದೆ.