ಬೆಂಗಳೂರಲ್ಲಿ ಲಾಡ್ಜ್ಗೆ ಬಾ ಎಂದ ವ್ಯಕ್ತಿ ತೋರಿದ್ದು ಎಂಥಾ ಕ್ರೌರ್ಯ!?
ಬೆಂಗಳೂರು, ಆಗಸ್ಟ್ 12: ಬೆಂಗಳೂರಿನಲ್ಲಿ ಓಟಿಟಿಯಲ್ಲಿ ಹಣ ಹೂಡಿಕೆ ಮಾಡುವುದಾಗಿ ನಂಬಿಸಿ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿ ಆಕೆಗೆ ತೀರಾ ಪರಿಚಯದವನೇ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ ಆ ವ್ಯಕ್ತಿಯು ನಗರದಲ್ಲಿ ಮಾಡಬಾರದ್ದನ್ನು ಮಾಡಿದ ಎನ್ನುವುದೇ ಮಹಿಳೆಯ ಆರೋಪವಾಗಿದೆ.
ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!
ಸಿಲಿಕಾನ್ ಸಿಟಿಯಲ್ಲಿ ನಿತ್ಯ ನಡೆಯುವ ಕ್ರೈಂಗಳ ಮಧ್ಯೆ ಇಂಥದೊಂದು ಪ್ರಕರಣವನ್ನು ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ತಂದೆ ವಯಸ್ಸಿನ ವ್ಯಕ್ತಿಯಿಂದ ಮಗಳ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದ ವಿವರ ಇಲ್ಲಿದೆ...
ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ
ಬೆಂಗಳೂರು ಮೂಲದ ಮಹಿಳೆಯು ನಗರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯು ಓಟಿಟಿ ಅನ್ನು ಪ್ರಾರಂಭಿಸುವುದಕ್ಕೆ ಯೋಜನೆ ಹಾಕಿಕೊಂಡಿದ್ದು, ಹೂಡಿಕೆದಾರರನ್ನು ಹುಡುಕುವಂತೆ ಮಹಿಳೆಗೆ ಸೂಚನೆ ನೀಡಿತ್ತು. ಹೀಗಾಗಿ ತನ್ನ ಪರಿಚಯದವರೇ ಆಗಿದ್ದ ಆರೋಪಿ ರಮೇಶ್ ಎಂಬುವವರನ್ನು ಮಹಿಳೆಯು ದೂರವಾಣಿ ಮೂಲಕ ಸಂಪರ್ಕಿಸಿದ್ದರು.
ಅಂಕಲ್ ಮಾತಿನಲ್ಲಿ 3 ಕೋಟಿ ಹೂಡಿಕೆ ಭರವಸೆ
ಬೆಂಗಳೂರಿನ ದೂರುದಾರ ಮಹಿಳೆಗೆ ಚಿಕ್ಕ ವಯಸ್ಸಿನಿಂದಲೂ ಆರೋಪಿ ರಮೇಶ್ ಪರಿಚಯವಿತ್ತು. ಅದೇ ಸಲುಗೆಯಲ್ಲಿ ಸಂಪರ್ಕಿಸಿದ್ದ ಮಹಿಳೆಗೆ ತಮಿಳುನಾಡಿನಲ್ಲಿ ವಾಸವಾಗಿದ್ದ ಆರೋಪಿ ರಮೇಶ್ 3 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಒಂದು ದಿನ ಬೆಂಗಳೂರಿಗೆ ಬಂದಾಗ ಇಬ್ಬರೂ ಮೀಟ್ ಮಾಡೋಣ ಎಂದು ಮಹಿಳೆಗೆ ಆಫರ್ ಕೊಟ್ಟಿದ್ದ. ಆದರೆ ಆ ಅಂಕಲ್ ಕೊಟ್ಟ ಮಾತಿನ ಹಿಂದೆ ಅದೊಂದು ದುರಾಲೋಚನೆಯಿತ್ತು ಎಂಬುದೇ ಸಂತ್ರಸ್ತ ಮಹಿಳೆಗೆ ಅರ್ಥವಾಗಿರಲಿಲ್ಲ.
ಬೆಂಗಳೂರಿನ ಆ ಲಾಡ್ಜ್ ರೂಮಿಗೆ ಬಾ ಎಂದಿದ್ದ 54ರ ಅಂಕಲ್
ಇತ್ತೀಚಿಗೆ ಬೆಂಗಳೂರಿಗೆ ಆಗಮಿಸಿದ್ದ ಆರೋಪಿ ರಮೇಶ್, ಸಂತ್ರಸ್ತೆಗೆ ಕರೆ ಮಾಡಿದ್ದನು. ನಗರದಲ್ಲಿರುವ ಖಾಸಗಿ ಲಾಡ್ಜ್ ರೂಮ್ ನಂಬರ್(XXX)ಗೆ ಬರುವಂತೆ ಬುಲಾವ್ ಕೊಟ್ಟಿದ್ದನು. ತಂದೆ ವಯಸ್ಸಿನ ಅಂಕಲ್ ಮೇಲೆ ವಿಶ್ವಾಸವಿಟ್ಟು ಲಾಡ್ಜ್ ರೂಮಿಗೆ ತೆರಳಿದ ಮಹಿಳೆಯ ಮೇಲೆ ಆತ ಕ್ರೌರ್ಯ ತೋರಿದ್ದಾನೆ. ತನ್ನ ಮೇಲೆ ಎರಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆಯು ತನ್ನ ದೂರಿದಲ್ಲಿ ಉಲ್ಲೇಖಿಸಿದ್ದಾರೆ.
ಅತ್ಯಾಚಾರದ ಕೇಸ್ ಬಗ್ಗೆ ಖಾಕಿ ಟೀಮ್ ಹೇಳುವುದೇನು?
ಇನ್ನು ಇಡೀ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, "ಪರಿಚಯಸ್ಥರಾಗಿದ್ದ ವ್ಯಕ್ತಿಯೊಬ್ಬರು ವ್ಯಾಪಾರದ ಮಾತುಕತೆಗಾಗಿ ಖಾಸಗಿ ಹೋಟೆಲ್ಗೆ ಕರೆಯಿಸಿಕೊಂಡು ನನ್ನ ಮೇಲೆ ಆತ್ಯಾಚಾರ ಎಸಗಿದ್ದಾನೆ. ಅಲ್ಲದೇ ಕೃತ್ಯದ ಬಳಿಕ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.