ಚೆನ್ನೈ ಪ್ರಳಯ, ಪಾಠ ಕಲಿಯುವುದೇ ಬೆಂಗಳೂರು ನಗರಿ!
ಬೆಂಗಳೂರು, ಡಿಸೆಂಬರ್ 04 : ದಿಕ್ಕುದೆಸೆಯಿಲ್ಲದ ನಗರೀಕರಣ, ಎಗ್ಗುಸಿಗ್ಗಿಲ್ಲದ ಬೆಳವಣಿಗೆ! ಬೆಂಗಳೂರು, ದೆಹಲಿ, ಮುಂಬೈನಂಥ ನಗರಗಳಲ್ಲಿ ಚೆನ್ನೈನಂಥ ಅನಾಹುತ (ಜಲಪ್ರಳಯ) ಸಂಭವಿಸಲು ಇವೆರಡಕ್ಕಿಂತ ಇನ್ನೇನು ಬೇಕು? ಎಂದು ಅಸೋಚಾಮ್ (The Associated Chambers of Commerce and Industry of India) ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಎಚ್ಚರಿಕೆ ನೀಡಿದ್ದಾರೆ.
"ನಗರೀಕರಣ ಮತ್ತು ಯೋಜನಾಬದ್ಧ ರಹಿತ ಅಭಿವೃದ್ಧಿ ಚೈನ್ನೈನ ಪ್ರವಾಹಕ್ಕೆ ಪ್ರಮುಖ ಕಾರಣವಾಗಿವೆ. ಇಂಥ ಅನಾಹುತಗಳಿಗೆ ಸಿದ್ಧತೆ ಮಾಡಿಕೊಂಡಿರದಿದ್ದರೆ ಎಂಥ ತೊಂದರೆ ಸಿಕ್ಕಿಕೊಳ್ಳುತ್ತೇವೆ ಎಂಬುದು ಮೆಟ್ರೋ ನಗರಗಳಾದ ಮುಂಬೈ, ದೆಹಲಿ, ಬೆಂಗಳೂರಿಗೆ ತಕ್ಕ ಪಾಠ. ನಿರ್ಲಕ್ಷ್ಯವಹಿಸಿದರೆ ಇದಕ್ಕೂ ವಿಪರೀತವಾದ ಅನಾಹುತ ಸಂಭವಿಸಬಹುದು" ಎಂದಿದ್ದಾರೆ.
ಚೆನ್ನೈ ಮತ್ತು ತಮಿಳುನಾಡಿನ ಮತ್ತಿತರ ಪ್ರದೇಶಗಳಲ್ಲಿ ಶತಮಾನ ಕಂಡರಿಯದ ಜಲಪ್ರಳಯದಿಂದ 15 ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ಚೆನ್ನೈನ ಜನಜೀವನ ನಿಂತ ನೀರಿನಂತಾಗಿದೆ. ವಿದ್ಯುತ್, ಮೊಬೈಲ್ ಸೇವೆಗಳು ಹೆಚ್ಚೂಕಡಿಮೆ ಸ್ಥಗಿತಗೊಂಡಿವೆ. ಇನ್ನೂ ಪ್ರವಾಹದಲ್ಲಿ ಸಿಲುಕಿರುವ ಜನರು ದಿಕ್ಕೆಟ್ಟಂತಾಗಿದ್ದಾರೆ. [ಚೆನ್ನೈ ಜಲ ಪ್ರಳಯ ಮಾನವ ನಿರ್ಮಿತ, ಬೆಂಗಳೂರಿಗೆ ಎಚ್ಚರಿಕೆ!]
"ವೈಯಕ್ತಿಕ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದ್ದಲ್ಲದೆ ಚೆನ್ನೈ ಮತ್ತಿತರ ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ನಿಂತುಹೋಗಿವೆ. ಜನರಿಗೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಕಾರ್ಖಾನೆಗಳು ಕೆಲಸ ನಿಲ್ಲಿಸಿವೆ, ದಿನಗೂಲಿ ನೌಕರರು ದಿಕ್ಕೆಟ್ಟಂತಾಗಿದ್ದಾರೆ. ಜನರಿಗೆ ಈ ಸಂದರ್ಭದಲ್ಲಿ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ" ಎಂದು ರಾವತ್ ಅವರು ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ. [ಚೆನ್ನೈನಂಥ ಮಳೆ ಬೆಂಗಳೂರಿನಲ್ಲಾದರೆ?]
ಪ್ರಕೃತಿ ವಿಕೋಪ ನಿರ್ವಹಣೆ : ಪ್ರಕೃತಿ ವಿಕೋಪ ನಿರ್ವಣಾ ವ್ಯವಸ್ಥೆ ಸರಿಯಾಗಿದೆಯಾ ಎಂದು ಬೆಂಗಳೂರು ಸೇರಿದಂತೆ ಪ್ರತಿ ಪ್ರಮುಖ ನಗರಗಳಲ್ಲಿರುವ ಅಧಿಕಾರಿಗಳು ಪರಿಶೀಲಿಸಬೇಕು. ಚರಂಡಿ ದುರವಸ್ಥೆಯನ್ನು ಈಗಲೇ ಸರಿಪಡಿಸಬೇಕು. ನಿವಾಸಿಗಳು ಮತ್ತು ಸಂಘಟನೆಗಳು ಇಂಥ ಅನಾಹುತ ಹೇಗೆ ಎದುರಿಸಬೇಕು ಎಂಬುದನ್ನು ಅರಿತಿರಬೇಕು ಎಂಬ ಕಿವಿಮಾತು ರಾವತ್ ಹೇಳಿದ್ದಾರೆ.
ಹವಾಮಾನ ಮುನ್ನೆಚ್ಚರಿಕೆಯನ್ನು ಎಸ್ಎಂಎಸ್ ಮೂಲಕ ಜನರಿಗೆ ತಲುಪಿಸಬೇಕು. ಹದಗೆಟ್ಟ ಚರಂಡಿಗಳನ್ನು ಮೊದಲೇ ಗುರುತಿಸಿಕೊಂಡು ದುರಸ್ತಿಪಡಿಸಬೇಕು. ಮಳೆನೀರು ರಸ್ತೆಯನ್ನು ತುಂಬಿಕೊಳ್ಳದೆ ಚರಂಡಿಯಲ್ಲಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಇದರಿಂದಾಗಿ ವಾಹನಗಳು ಹಾಳಾಗದಂತೆ, ಜನರು ಸುರಕ್ಷಿತವಾಗದಂತೆ ಮುನ್ನೆಚ್ಚರಿಕೆ ನೀಡಬೇಕು. [ಚೆನ್ನೈಗೆ ಮೈಸೂರಿನ ಯಾವ ಸಂಸ್ಥೆಯಿಂದ ಆಹಾರ ರವಾನೆ?]
ಅಸೋಚಾಮ್ನಿಂದ ನಿಧಿ ಸಂಗ್ರಹಣೆ : ಚೆನ್ನೈ ಪ್ರವಾಸ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ದೇಶದಾದ್ಯಂತ ಇರುವ 4 ಲಕ್ಷಕ್ಕೂ ಹೆಚ್ಚು ಸದಸ್ಯ ಸಂಘಟನೆಗಳಿಂದ ಅಸೋಚಾಮ್ ನಿಧಿ ಸಂಗ್ರಹಿಸುತ್ತಿದೆ. ಸದಸ್ಯರು ಉದಾರವಾಗಿ ದೇಣಿಗೆ ನೀಡಬೇಕೆಂಗು ಅಸೋಚಾಮ್ ಆಗ್ರಹಿಸಿದೆ.
ಬೆಂಗಳೂರಿಗೆ ಕೇಳುವದೇ ಈ ಎಚ್ಚರಿಕೆ ಗಂಟೆ? : ಎಲ್ಲಿ ನೋಡಿದಲ್ಲಿ ಕಸದ ರಾಶಿ, ಕಿತ್ತುಹೋದ ರಸ್ತೆಗಳು, ಅಗೆದಿರುವ ನೆಲ, ಕಸದಿಂದಲೇ ತುಂಬಿಕೊಂಡಿರುವ ಚರಂಡಿ.... 26 ಸೆಂಟಿ ಮೀಟರ್ ಅಲ್ಲ ಕೇವಲ 10 ಸೆಂಟಿ ಮೀಟರ್ ಮಳೆ ಬಿದ್ದರೂ ಸಾಕು ಬೆಂಗಳೂರಿನ ಪರಿಸ್ಥಿತಿ ಚೆನ್ನೈಗಿಂತ ಭೀಕರವಾಗಿರುತ್ತದೆ. ಎಚ್ಚೆತ್ತುಕೊಳ್ಳುವುದೇ ಬಿಬಿಎಂಬಿ, ಈ ಎಚ್ಚರಿಕೆ ಗಂಟೆ ಬೆಂಗಳೂರಿನ ಅಧಿಕಾರಿಗಳ ಕಿವಿಗೆ ಬೀಳುವುದೆ? ಮಳೆಗಾಲ ಇನ್ನೂ ದೂರ ಇದೆ ಬಿಡಿ, ನಂತರ ವಿಚಾರ ಮಾಡಿದರಾಯಿತು!