ಮಕ್ಕಳಿದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕ್ರೂರ ತಂದೆ
ಬೆಂಗಳೂರು, ಜನವರಿ 8: ಮಕ್ಕಳಿದ್ದ ಮನೆಗೆ ಪೆಟ್ರೋಲ್ ಸುರಿದು ತಂದೆಯೇ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಕ್ಕಳು ತನ್ನ ಬಿಟ್ಟು ಹೋದರು ಎಂಬ ಕಾರಣಕ್ಕೆ ತಂದೆಯೊಬ್ಬ ಮಕ್ಕಳು ಮಲಗಿದ್ದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ. ಪ್ರಕರಣದ ಸಂಬಂಧ ನಂದಿನಿ ಲೇಔಟ್ ಪೊಲೀಸರು ಆರೋಪಿ ಶಂಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ರಿ ಅಮಲಾ ಯಲಹಂಕದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಹೋದರ ಯಶ್ಪಾಲ್ ಹಾಗೂ ತಂದೆ ಶಂಕರ್ ಜೊತೆ ರಾಜೀವ್ ಗಾಂಧಿ ನಗರದಲ್ಲಿ ವಾಸವಾಗಿದ್ದರು.
ಆ್ಯಸಿಡ್ ಎರಚಿ, ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹಲ್ಲೆ
ಸುಂಕದಕಟ್ಟೆಯ ಕಟ್ಟಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಕುಡಿದು ಬಂದು ಮಕ್ಕಳಿಗೆ ಬೆದರಿಸುತ್ತಿದ್ದ. ಇದರಿಂದ ನೊಂದ ಮಕ್ಕಳು ರಾಜೀವ್ ಗಾಂಧಿ ವೃತ್ತದ ಆಂಜನೇಯ ದೇವಾಲಯದ ಹತ್ತಿರವಿದ್ದ ದೊಡ್ಡಪ್ಪನ ಮನೆಯಲ್ಲಿ ವಾಸವಿದ್ದರು.
ಮಕ್ಕಳು ಮನೆ ಬಿಟ್ಟು ಹೋಗಿರುವುದರಿಂದ ಆಕ್ರೋಶಗೊಂಡ ತಂದೆ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೊಂಚು ಹಾಕುತ್ತಿದ್ದ.
ಮಕ್ಕಳು ರಾತ್ರಿ ದೊಡ್ಡಪ್ಪನ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಇವರ ಮನೆ ಬಳಿ ಬಂದ ಶಂಕರ್ ಕಿಟಕಿಯಿಂದ ಮನೆಯ ಒಳಗೆ ಹಾಗೂ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿ ಪರಾರಿಯಾಗಿದ್ದಾನೆ. ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಮಕ್ಕಳು ಜೋರಾಗಿ ಕೂಗಿದ್ದರು. ಬಳಿಕ ಅಕ್ಕಪಕ್ಕದ ಮನೆಯವರು ಬಂದು ಬೆಂಕಿಯನ್ನು ನಂದಿಸಿದ್ದಾರೆ.