ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
ಬೆಂಗಳೂರು, ಜನವರಿ. 27: ತನ್ನ ಪ್ರಯಾಣಕ್ಕಾಗಿ ತಾನು ಬುಕ್ ಮಾಡಿದ ಓಲಾದಲ್ಲಿ ಎಸಿಯಿರಲಿಲ್ಲ ಎಂದು ಬೆಂಗಳೂರಿನ ಉದ್ಯಮಿಯೊಬ್ಬರು ಓಲಾ ಕ್ಯಾಬ್ಗಳ ಸಿಇಒ ವಿರುದ್ಧ ದೂರು ನೀಡಿ, ಪರಿಹಾರ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಉದ್ಯಮಿ ವಿಕಾಸ್ ಭೂಷಣ್, ಓಲಾ ಸಿಇಒ ಭವಿಶ್ ಅಗರ್ವಾಲ್ ವಿರುದ್ಧ ದೂರು ನೀಡಿದ್ದರು. ತನ್ನ ಎಂಟು ಗಂಟೆಗಳ ಕಾಲದ ಪ್ರಯಾಣಕ್ಕೆ ಬಾಡಿಗೆಗೆ ಪಡೆದ ಕ್ಯಾಬ್ನಲ್ಲಿ ಅಸಮರ್ಪಕ ಎಸಿಯಿತ್ತು ಎಂದು ಮೊಕದ್ದಮೆ ಹೂಡಿದ್ದಾರೆ. ಈಗ ವಿಕಾಸ್ ಭೂಷಣ್ಗೆ 15,000 ರೂಪಾಯಿ ಪರಿಹಾರ ನಿಡುವಂತೆ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರಿಂದ ವೀಕೆಂಡ್ಗೆ ಒಂದು ದಿನದ ಟ್ರಿಪ್ ಹೋಗಬೇಕೆ..? ಸಮೀಪದ ಐದು ಸ್ಥಳಗಳ ಪಟ್ಟಿ ಇಲ್ಲಿದೆ
ಉದ್ಯಮಿ ವಿಕಾಸ್ ಭೂಷಣ್ ಅವರು ಓಲಾ ಸಿಇಒ ವಿರುದ್ಧ ಮಾರ್ಚ್ 2022 ರಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನಂತರ ವಿಕಾಸ್ ಭೂಷಣ್ಗೆ 15,000 ರೂಪಾಯಿ ನೀಡುವಂತೆ ಓಲಾಗೆ ನ್ಯಾಯಾಲಯ ಆದೇಶಿಸಿದೆ.
ವರದಿಗಳ ಪ್ರಕಾರ, ಉದ್ಯಮಿ ವಿಕಾಸ್ ಭೂಷಣ್ ಅಕ್ಟೋಬರ್ 2021 ರಲ್ಲಿ ಎಂಟು ಗಂಟೆಗಳ ಕಾಲ ಓಲಾ ಪ್ರೈಮ್ ಸೆಡಾನ್ ಅನ್ನು ಬಾಡಿಗೆಗೆ ಪಡೆದಿದ್ದರು. ಎಂಟು ಗಂಟೆಗಳ ಕಾಲ ಕ್ಯಾಬ್ ದರವಾಗಿ 1,837 ರೂಪಾಯಿ ನೀಡಿದ್ದರು. ಎಸಿ ಕಾರ್ಯನಿರ್ವಹಿಸದ ಕಾರಣ ಉದ್ಯಮಿ ಮತ್ತು ಅವರ ಸಹ ಪ್ರಯಾಣಿಕರು ಅನಾನುಕೂಲತೆಯನ್ನು ಎದುರಿಸಿದ್ದರು.
ವಿಕಾಸ್ ಭೂಷಣ್ ಪಾವತಿಸಿದ್ದ ಕ್ಯಾಬ್ ದರದಲ್ಲಿ ಎಸಿ ಶುಲ್ಕವನ್ನು ಸೇರಿಸಲಾಗಿತ್ತು. ನವೆಂಬರ್ 2021 ರಲ್ಲಿ, ಅವರು ಓಲಾ ಕಸ್ಟಮರ್ ಕೇರ್ಗೆ ಕರೆ ಮಾಡಿ ಮರುಪಾವತಿ ಮಾಡಬೇಕು ಎಂದು ಮನವಿ ಮಾಡಿದ್ದರು. ನಂತರ ಕ್ಯಾಬ್ನಲ್ಲಿ ಎಸಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಓಲಾ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಆದರೆ, ಮರುಪಾವತಿಗಾಗಿ ಅವರ ಬೇಡಿಕೆಯನ್ನು ಕಂಪನಿ ತಿರಸ್ಕರಿಸಿ, 100 ರೂಪಾಯಿಗಳ ವೋಚರ್ ನೀಡಿದೆ.
ನಂತರ ಅವರು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು. ಆಯೋಗದ ನ್ಯಾಯಾಧೀಶರ ಅವರ ದೂರನ್ನು ಪರಿಶೀಲಿಸಿದರು. ಓಲಾದ ಇಮೇಲ್ ಪ್ರಕಾರ, ಕ್ಯಾಬ್ನ ಎಸಿ ಕಾರ್ಯನಿರ್ವಹಿಸದಿದ್ದರೂ ಸಹ ಕಂಪನಿಯು 1,837 ರೂಪಾಯಿಗಳನ್ನು ವಿಧಿಸಿದೆ ಎಂದು ಆಯೋಗದ ಅಧ್ಯಕ್ಷೆ ಎಂ ಶೋಭಾ ನೇತೃತ್ವದ ಪೀಠ ಗಮನಿಸಿದೆ.
ವಿಕಾಸ್ ಭೂಷಣ್ ಅವರಿಗೆ ಮಾನಸಿಕ ಯಾತನೆ ಮತ್ತು ಅನಾನುಕೂಲತೆಯನ್ನು ಉಂಟುಮಾಡಿದ್ದಕ್ಕಾಗಿ ಪರಿಹಾರವಾಗಿ ಭೂಷಣ್ಗೆ 10,000 ರೂ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. 1,837 ರೂಪಾಯಿಗಳನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ಮತ್ತು ಉದ್ಯಮಿಯ ವ್ಯಾಜ್ಯ ವೆಚ್ಚದ 5,000 ರೂಪಾಯಿಗಳನ್ನು ಭರಿಸುವಂತೆ ಓಲಾ ಸಿಇಒ ಭವಿಶ್ ಅಗರ್ವಾಲ್ ಅವರಿಗೆ ನ್ಯಾಯಾಲಯ ಸೂಚಿಸಿದೆ.