ವಿಡಿಯೋ: ಬೆಂಗಳೂರಿನಲ್ಲಿ ಕಂಡ ಕಂಡವರಿಗೆ ತಿವಿದ ಗೂಳಿ
ಬೆಂಗಳೂರು, ಸೆ. 6: ಬೆಂಗಳೂರಿನಲ್ಲಿ ಮದವೇರಿದ ಗೂಳಿ ತಿವಿದು ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಎಚ್ಎಎಲ್ ಬಳಿಯ ಅನ್ನಸಂದ್ರಪಾಳ್ಯದಲ್ಲಿಂದು ನಡೆದಿದೆ.
ಮದವೇರಿದ ಗೂಳಿಯೊಂದು ಅನ್ನಸಂದ್ರಪಾಳ್ಯದಲ್ಲಿ ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿ ಓಡಾಡಲು ಶುರುಮಾಡಿತ್ತು. ಕಂಡ ಕಂಡ ವಸ್ತುಗಳ ಮೇಲೆ ಪರಾಕ್ರಮ ಮೆರೆಯುತ್ತಿತ್ತು. ಆಗ ಗೂಳಿ ಮೇಲೆ ಸ್ಥಳೀಯರು ಅಟ್ಯಾಕ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಗೂಳಿ, ಕಂಡ ಕಂಡವರ ಮೇಲೆ ನುಗ್ಗಿದೆ. ಗೂಳಿ ತಿವಿದ ಪರಿಣಾಮ ಗುರಪ್ಪ ಹಾಗೂ ಸೆಲ್ವಕುಮಾರ್ ಎಂಬುವವರಿಗೆ ಗಂಭೀರ ಗಾಯವಾಗಿದೆ.
ಅಲ್ಲದೆ ಘಟನೆಯಲ್ಲಿ ಹಲವು ಅಂಗಡಿ ಮುಂಗಟ್ಟು, ವಾಹನಗಳು ಜಖಂ ಆಗಿವೆ. ಅಂಗಡಿ ವಸ್ತುಗಳ ಮೇಲೆ ದಾಳಿ ಮಾಡುವಾಗ ಮಾಲೀಕರು ಗೂಳಿ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಆಗ ಮತ್ತಷ್ಟು ಕೆರಳಿದ ಗೂಳಿ, ಹಲವು ಅಂಗಡಿಗಳಿಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನು ಪುಡಿ ಪುಡಿ ಮಾಡಿಬಿಟ್ಟಿದೆ.
ಕತ್ತಿಗೆ ಹಗ್ಗ ಬಿಗಿದು ಹತ್ಯೆ..?
ಇನ್ನು ಗೂಳಿ ಅಟ್ಟಹಾಸ ಮಿತಿಮೀರಿ, ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದ ನಂತರ ಜನರೆಲ್ಲಾ ಒಟ್ಟಾಗಿ ಸೇರಿ ಗೂಳಿಯ ಮೇಲೆ ತಿರುಗಿ ಬಿದ್ದಿದ್ದಾರೆ. ಆಗ ಗೂಳಿ ನಿಯಂತ್ರಿಸಲು ಕುತ್ತಿಗೆಗೆ ಹಾಕಿದ್ದ ಹಗ್ಗ ಅದರ ಪ್ರಾಣಕ್ಕೆ ಮುಳುವಾಯಿತು. ಹಗ್ಗ ಕುತ್ತಿಗೆಗೆ ಬಿಗಿದ ಪರಿಣಾಮ ಗೂಳಿ ಸ್ಥಳದಲ್ಲೇ ಮೃತಪಟ್ಟಿದೆ. ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಗೂಳಿ ಈ ಮಟ್ಟಿಗೆ ಮದವೇರಲು ಕಾರಣವೇನು ಎಂಬದು ಇನ್ನೂ ಸ್ಪಷ್ಟವಾಗಿಲ್ಲ. ಗಾಯಗೊಂಡಿರುವ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.