ಬೆಂಗಳೂರಿನ ಅರ್ಪಿತ್ ಸಾವು ಇನ್ನೂ ನಿಗೂಢ
ಕ್ಯಾಂಪಸ್ ಸಂದರ್ಶನದಲ್ಲಿ ಉತ್ತಮ ಕಂಪೆನಿ ಸಿಕ್ಕಿಲ್ಲ ಎಂಬ ಕೊರಗು ಅರ್ಪಿತ್ ಗೆ ಎಂದಿಗೂ ಇದ್ದೇ ಇತ್ತು. ಆತನ ಆತ್ಮಹತ್ಯೆಗೆ ಅದೇ ಕಾರಣವಿರಬಹುದು ಎಂಬುದು ಕುಟುಂಬಸ್ಥರ ಅನುಮಾನ.
ಬೆಂಗಳೂರು, ಮೇ 04: ನಿನ್ನೆ (ಮೇ 3) ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಕಂಬನಿ ಮಿಡಿಯುತ್ತಿದ್ದ ನೂರಾರು ವಿದ್ಯಾರ್ಥಿನಿಯರಿಗೆ ಇದು ಕನಸೋ, ನನಸೋ ಗೊತ್ತಾಗದ ಸ್ಥಿತಿ. ಕಾಲೇಜಿನ ಆದರ್ಶ ವಿದ್ಯಾರ್ಥಿ ಎಂದು ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ಅರ್ಪಿತ್ ಎಂಬ 22 ವರ್ಷದ ಯುವಕ ಕಿಮ್ಸ್ ನ ಶವಾಗಾರದ ಬಿಳಿಬಟ್ಟೆಯೊಳಗೆ ಜಗದರಿವಿಲ್ಲದೆ ಮಲಗಿಬಿಟ್ಟಿದ್ದ!
ಮಗನ ಹಠಾತ್ ನಿಧನದಿಂದ ಆತನ ಭವಿಷ್ಯಕ್ಕಾಗಿ ಹಗಲಿರುಳೂ ಶ್ರಮಿಸಿದ ತಂದೆ-ತಾಯಿಗಳೂ ದಿಗ್ಭ್ರಮೆಗೊಳಗಾಗಬೇಕಾದ ಸ್ಥಿತಿ! ಅಮೆರಿಕದ ಕರ್ನಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಇಂಟರ್ನ್ ಶಿಪ್ ಮುಗಿಸಿ, ಉತ್ತಮ ವಿದ್ಯಾರ್ಥಿ ಎಂಬ ಮೆಚ್ಚುಗೆ ಗಳಿಸಿದ್ದ ಅರ್ಪಿತ್ ಹೀಗೆ ಹೇಳದೆ ಕೇಳದೆ ಬದುಕಿನ ಪಯಣವನ್ನೇ ಮುಗಿಸಿದ್ದು ಏಕೆ ಎಂಬುದು ಕಿಮ್ಸ್ ಆವರಣದಲ್ಲಿ ನೆರೆದಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ.[ಬೀದರ್: ಕೇರಳ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ]
ಕ್ಯಾಂಪಸ್ ಸಂದರ್ಶನದಲ್ಲಿ ಉತ್ತಮ ಕಂಪೆನಿ ಸಿಕ್ಕಿಲ್ಲ ಎಂಬ ಕೊರಗು ಅರ್ಪಿತ್ ಗೆ ಎಂದಿಗೂ ಇದ್ದೇ ಇತ್ತು. ಆತನ ಆತ್ಮಹತ್ಯೆಗೆ ಅದೇ ಕಾರಣವಿರಬಹುದು ಎಂಬುದು ಕುಟುಂಬಸ್ಥರ ಅನುಮಾನ. ಆದರೂ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಮಾತ್ರ ತಿಳಿಯದೆ, ಅರ್ಪಿತ್ ಸಾವು ನಿಗೂಢವಾಗಿಯೇ ಉಳಿದಿದೆ.
ತುಮಕೂರಿನ ಗುಬ್ಬಿ ಮೂಲದ ರವೀಶ್ ಮತ್ತು ಮಂಗಳಮ್ಮ ದಂಪತಿಗಳ ಪುತ್ರ ಅರ್ಪಿತ್, ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಇತ್ತೀಚೆಗಷ್ಟೇ ಕಾಲೇಜು ನೀಡುವ 'ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್' ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಅರ್ಪಿತ್ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲೂ ಸದಾ ಮುಂದಿದ್ದ. ಕಾಲೇಜಿನ ಪ್ರತಿಯೊಬ್ಬ ಉಪನ್ಯಾಸಕರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ ಅರ್ಪಿತ್ ಇಂಥ ಅವಸರದ ನಿರ್ಧಾರ ತೆಗೆದುಕೊಂಡಿದ್ದೇಕೆ?
ಮೇ 02, ಮಂಗಳವಾರದಂದು 11:30ಕ್ಕೆ ಇಂಜಿನಿಯರಿಂದ್ ಅಂತಿಮ ವರ್ಷದ ಅಂತಿಮ ಥಿಯರಿ ಪರೀಕ್ಷೆ ಬರೆದಿದ್ದ ಅರ್ಪಿತ್ ತನ್ನ ಸ್ನೇಹಿತರೊಂದಿಗೆ ಅಷ್ಟೇ ಆತ್ಮೀಯತೆಯಿಂದ ಬೆರೆತು ಮಾತನಾಡಿದ್ದ. ಖುಷಿಯಾಗೇ ಮನೆಗೆ ತೆರಳಿದ್ದ ಅರ್ಪಿತ್ ಗೆ ಸಾಯುವ ಮನಸ್ಸು ಬಂದಿದ್ದೇಕೆ ಅನ್ನೋದು ಅರ್ಥವಾಗುತ್ತಿಲ್ಲ ಎಂಬುದು ಆತನ ಸ್ನೇಹಿತರೊಬ್ಬರು ಅಳುತ್ತಲೇ ಹೇಳಿದ ಮಾತು.
ಆತ ಎಷ್ಟೇ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರೂ ಆತನಿಗೆ ಕ್ಯಾಂಪಸ್ ಸಂದರ್ಶನದಲ್ಲಿ ಒಳ್ಳೆಯ ಕಂಪೆನಿ ಸಿಕ್ಕಿರಲಿಲ್ಲ. ಆ ಕೊರಗು ಆತನಿಗೆ ಇದ್ದೇ ಇತ್ತು. ನಿನಗಿರೋ ಪ್ರತಿಭೆಗೆ ಒಳ್ಳೇ ಕಂಪೆನಿಯೇ ಸಿಗುತ್ತೆ, ತಲೆಕೆಡಿಸಿಕೊಳ್ಬೇಡ ಎಂದು ನಾವು ಪ್ರತಿದಿನ ಅವನನ್ನು ಸಂತೈಸುತ್ತಿದ್ದೆವು ಎಂಬುದು ಆತನ ಕುಟುಂಬಸ್ಥರ ಮಾತು.
ಮಗನನ್ನು ಇಂಜಿನಿಯರ್ನನ್ನಾಗಿ ಮಾಡಬೇಕೆಂದು ತಂದೆ-ತಾಯಿ ಕಂಡಿದ್ದ ಕನಸುಗಳೆಲ್ಲ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸ್ವಲ್ಪ ದಿನ ತಾಳ್ಮೆಯಿಂದ ಕಾದಿದ್ದರೆ ಅರ್ಪಿತ್ ಗೆ ಉತ್ತಮ ಕೆಲಸವೇ ಸಿಕ್ಕುತ್ತಿತ್ತೇನೋ, ಆದರೆ ದುಡುಕಿ ಆತ ತೆಗೆದುಕೊಂಡ ಒಂದು ತಪ್ಪು ನಿರ್ಧಾರದಿಂದ ಆಘಾತಗೊಂಡಿರುವ ಆತನ ತಂದೆ-ತಾಯಿ, ಬಂಧು-ಬಳಗ, ಸ್ನೇಹಿತರನ್ನು ಸಂತೈಸುವವರ್ಯಾರು? ತನ್ನ ಏಳ್ಗೆಗಾಗಿ ನಿದ್ದೆ-ಊಟ ಬಿಟ್ಟು ಶ್ರಮಿಸಿದ್ದ ತಂದೆ-ತಾಯಿಯ ಋಣ ತೀರಿಸುವ ಬದಲು ಹೇಡಿಯಂತೆ ಪಲಾಯನ ಮಾಡಿದರೆ ಯಾರಿಗೆ ಲಾಭ? ತಂದೆ -ತಾಯಿಯ ಕನಸು, ನಿರೀಕ್ಷೆಯನ್ನು ಅಪೂರ್ಣವಾಗಿಯೇ ಉಳಿಸಿ, ಆಘಾತ ನೀಡಿ ಹೋಗುವ ಮತ್ತೆಷ್ಟೋ ಅರ್ಪಿತರ ಮನಸ್ಸು ಬದಲಾಗಬೇಕಿದೆಯಲ್ಲವೇ?