ಬೆಂಗಳೂರಲ್ಲಿ 9027 ರಸ್ತೆ ಗುಂಡಿ; ಜನರೇ ಕೊಟ್ಟರು ಲೆಕ್ಕ!
ಬೆಂಗಳೂರು, ಮೇ16: ಸಿಲಿಕಾನ್ ಸಿಟಿ ರಸ್ತೆಯನ್ನು ಗುಂಡಿಮುಕ್ತ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆದರೂ ಸಹ ಉದ್ಯಾನ ನಗರಿ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ.
ಫಿಕ್ಸ್ ಮೈ ಸ್ಟ್ರೀಟ್ ಎಂಬ ಅಪ್ಲಿಕೇಶನ್ ಮೂಲಕ ನಡೆಸಿರುವ ಸಮೀಕ್ಷೆಯಲ್ಲಿ ಬೆಂಗಳೂರು ನಗರದ ರಸ್ತೆಗುಂಡಿಗಳ ಅಂಕಿ-ಅಂಶಗಳು ಸಿಕ್ಕಿವೆ. ಜನರೇ ಕೊಟ್ಟಿರುವ ರಸ್ತೆ ಗುಂಡಿಗಳ ಲೆಕ್ಕ ನೋಡಿ ಬಿಬಿಎಂಪಿ ಅಧಿಕಾರಿಗಳೇ ತಲೆ ಕೆಡಿಸಿಕೊಳ್ಳಬೇಕು.
ಸಮೀಕ್ಷೆಯಲ್ಲಿ ನಗರದಲ್ಲಿ 9207 ರಸ್ತೆ ಗುಂಡಿಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ. ರಸ್ತೆ ಗುಂಡಿಯನ್ನು ಮುಚ್ಚುವ ಕೆಲಸವನ್ನು ಮಾಡಲಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ.
ಈಗಾಗಲೇ ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ನಗರದಲ್ಲಿ ಹಲವಾರು ಅಪಘಾತಗಳು ನಡೆಯುತ್ತಿವೆ. ಇನ್ನು ಮಳೆಗಾಲ ಆರಂಭವಾಗುತ್ತಿದೆ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಘಾತಕ್ಕೆ ಆಹ್ವಾನ ನೀಡುತ್ತವೆ. ಬಿಬಿಎಂಪಿ ರಸ್ತೆ ಗುಂಡಿಗಳಿಗೆ ಯಾವಾಗ ಮುಕ್ತಿ ಹಾಡಲಿದೆ? ಎಂದು ಕಾದು ನೋಡಬೇಕು.
ರಸ್ತೆ ಗುಂಡಿಗಳ ಹಾವಳಿ
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳ ಹಾವಳಿ ತಪ್ಪಿದ್ದಲ್ಲ. ಅವೈಜ್ಞಾನಿಕ ಹಂಪ್, ಕೇಬಲ್ ಅಳವಡಿಕೆಗೆ ರಸ್ತೆ ಅಗೆತ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯದ ನೆಪದಲ್ಲಿ ರಸ್ತೆ ಅಗೆದು ಟಾರ್ ಹಾಕದೇ ಬಿಡಲಾಗಿರುತ್ತದೆ. ಇವೆಲ್ಲದರ ನಡುವೆ ಮಳೆರಾಯ ನಿರಂತರವಾಗಿ ಅಬ್ಬರಿಸಿರುವ ಪರಿಣಾಮ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಮಳೆ ಬಂದರೆ ಗುಂಡಿಗಳು ಕೆರೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದಾಗಿ ವಾಹನ ಸವಾರರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಗರದ ರಸ್ತೆ ಗುಂಡಿಗಳ ಲೆಕ್ಕ
ಫಿಕ್ಸ್ ಮೈ ಸ್ಟ್ರೀಟ್ ಅಪ್ಲಿಕೇಶನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಯಾವ-ಯಾವ ವಲಯದಲ್ಲಿ ಎಷ್ಟು ರಸ್ತೆಗುಂಡಿಗಳು ಇವೆ ಎಂಬ ಲೆಕ್ಕ ಸಿಕ್ಕಿದೆ.
ಬೊಮ್ಮನಹಳ್ಳಿ 1076, ದಾಸರಹಳ್ಳಿ 867, ಪೂರ್ವ 2066, ಮಹದೇವಪುರ 729, ಆರ್. ಆರ್. ನಗರ 1068, ದಕ್ಷಿಣ 1414, ಪಶ್ಚಿಮ 1232, ಯಲಹಂಕ 755 ಒಟ್ಟು ರಸ್ತೆಗುಂಡಿಗಳು 9207.
ಪೂರ್ವ ವಲಯದಲ್ಲಿ ಅತಿ ಹೆಚ್ಚು ಎಂದರೆ 2066 ಗುಂಡಿಗಳು ಪತ್ತೆಯಾಗಿವೆ. ದಾಸರಹಳ್ಳಿ, ಯಲಹಂಕ, ಮಹದೇವಪುರದಲ್ಲಿ ಕಡಿಮೆ ಗುಂಡಿಗಳಿವೆ. ಬೆಂಗಳೂರಿನ 5 ವಿಧಾನಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಯನ್ನು ಮುಚ್ಚಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಲಾಗಿದೆ . ಉಳಿದ 22 ಕಡೆ ಪಾಲಿಕೆಯಿಂದಲೇ ರಸ್ತೆ ಗುಂಡಿಗಳನ್ನು ಮುಚ್ಚಲು ತೀರ್ಮಾನ ಮಾಡಲಾಗಿದೆ.
ರಸ್ತೆ ಗುಂಡಿ ಮುಚ್ಚಲು ಕ್ರಮ
ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಯನ್ನು ಮುಚ್ಚಲು ತೀರ್ಮಾನಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಗಿ ಮಳೆ ಸುರಿಯುತ್ತಿರುವುದರಿಂದಾಗಿ ರಸ್ತೆಗುಂಡಿಗಳನ್ನು ಮುಚ್ಚುವುದು ಕಷ್ಟವಾಗುತ್ತಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಸಮರೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಬಿಬಿಎಂಪಿ ಮಾಡಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೂರು ನೀಡುವುದು ಹೇಗೆ?
ರಸ್ತೆಗಳಲ್ಲಿ ಗುಂಡಿಗಳು ಕಂಡು ಬಂದರೆ ಸಹಾಯ ಆಪ್ ಮೂಲಕ ದೂರು ಸಲ್ಲಿಕೆಗೆ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಯಾವ ರಸ್ತೆಯಲ್ಲಿ ಗುಂಡಿ ಬಿದ್ದಿದೆ ಎಂಬುದರ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಿ ವಿವರವನ್ನು ಸಲ್ಲಿಕೆ ಮಾಡಿದರೇ ಆ ರಸ್ತೆಯ ಗುಂಡಿಯನ್ನು ಮುಚ್ಚುವ ಕೆಲಸವನ್ನು ಬಿಬಿಎಂಪಿ ಮಾಡಲಿದೆ.
Recommended Video