85 ವರ್ಷದ ವೃದ್ಧೆ ಕೆಐಎಡಿಬಿಗೆ ಕೋಟಿಗಟ್ಟಲೆ ನಾಮ ಹಾಕಿದ ಕುತೂಹಲದ ಕತೆ!
ಬೆಂಗಳೂರು, ಜುಲೈ 28: ಎಂಭತ್ತೈದು ವರ್ಷದ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಸ್ವಾಧೀನಪಡಿಸಿಕೊಂಡಿದ್ದ ಜಾಗವೊಂದರ ಬಗ್ಗೆ ಮರು ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಕೆಐಎಡಿಬಿಗೆ ನೀಡಿ ಕೋಟ್ಯಂತರ ರು.ಗಳನ್ನು ಪರಿಹಾರ ಧನವಾಗಿ ಪಡೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯು ಪರಿಹಾರ ತೆಗೆದುಕೊಂಡು ಸುಮಾರು ಆರು ತಿಂಗಳಾದ ನಂತರ, ಪ್ರಕರಣದ ಕೆಐಎಡಿಬಿ ಗಮನಕ್ಕೆ ಬಂದಿದ್ದು, ಹಣ ಕಳೆದುಕೊಂಡಿರುವ ಸಂಸ್ಥೆ ಇದೀಗ ಕಾನೂನಿನ ಮೊರೆ ಹೋಗಿದೆ.
ಬೆಂಗಳೂರಿನ ಬಸ್ಸಿನಲ್ಲಿ ಕಂಡ ಜಿನ್ನಾ ಚಿತ್ರ, ಅಸಲಿ ವಿಷ್ಯ ಏನು?
ಏನಿದು ಕಥೆ?: ಆರ್ ವಿ ರಸ್ತೆಯಿಂದ ಸಿಲ್ಕ್ ಬೋರ್ಡ್ ಮೂಲಕ ಬೊಮ್ಮಸಂದ್ರದವರೆಗೆ ನಮ್ಮ ಮೆಟ್ರೋ ರೈಲು ಕಾಮಗಾರಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ, ಹೊಸೂರು ರಸ್ತೆಯ ಆಜುಬಾಜಿನಲ್ಲಿ ಕೆಐಎಡಿಬಿ ಕಡೆಯಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಕಳೆದ ವರ್ಷವೇ ಚಾಲನೆ ನೀಡಲಾಗಿತ್ತು.
ಈ ಪ್ರಕ್ರಿಯೆಯ ಅಂಗವಾಗಿ, ಹೊಸೂರು ಮುಖ್ಯ ರಸ್ತೆಯ ಬೇಗೂರು ಹೋಬಳಿ ಬಳಿಯ ಕೂಡ್ಲು ಜಂಕ್ಷನ್ ಹೊಂಗಸಂದ್ರದಲ್ಲಿರುವ ಸರ್ವೆ ನಂಬರ್ 55/6 ನಲ್ಲಿ ಮಂಡಳಿಯು, ಚಾಮುಂಡೇಶ್ವರಿ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಕಂಪನಿಗೆ ಸೇರಿದ 2 ಎಕರೆ, 16 ಗುಂಟೆ ಪ್ರದೇಶದಲ್ಲಿ 15 ಗುಂಟೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿತ್ತು.
2020 ಕ್ಕೆ ಪೂರ್ಣವಾಗಲಿದೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ
ಮಂಡಳಿಯು ವಶಪಡಿಸಿಕೊಂಡಿದ್ದ ಜಾಗವು, ಗುಪ್ತಾ ಕುಟುಂಬದ ಮಹಿಳೆಯಾದ ಸರ್ವನ್ ಕುಮಾರಿ ಎಂಬ 85 ವರ್ಷದ ವೃದ್ಧೆಯ ಹೆಸರಿನಲ್ಲಿತ್ತು. ಹಾಗಾಗಿ, ಮಂಡಳಿಯು ಅವರಿಗೆ ಪರಿಹಾರ ರೂಪವಾಗಿ 16.61 ಕೋಟಿ ರು. ಗಳನ್ನು ಕಳೆದ ವರ್ಷ ಅಕ್ಟೋಬರ್ 27ರಂದು ನೀಡಿತ್ತು.
ಭೂಮಿ ಮೇಲೆ ಕೆನರಾ ಬ್ಯಾಂಕ್ ನಿಂದ ಸಾಲ
ಇಲ್ಲೇ ಪ್ರಕರಣದ ರಹಸ್ಯ ಅಡಗಿದೆ. ಸರ್ವನ್ ಕುಮಾರಿ ಅವರೇ ಈ ಭೂಮಿಗೆ ನಿಜವಾದ ವಾರಸುದಾರರಾಗಿದ್ದರೂ, ಭೂಮಿಯ ಮೇಲೆ ಅವರ ಹತೋಟಿಯಿರಲಿಲ್ಲ. ಏಕೆಂದರೆ, ಕೆಲವು ವರ್ಷಗಳ ಹಿಂದೆ, ಅದೇ ಭೂಮಿಯನ್ನು ಕೆನರಾ ಬ್ಯಾಂಕಿನಲ್ಲಿ ಅಡವಿಟ್ಟು 43.44 ಕೋಟಿ ರು. ಸಾಲ ಪಡೆದಿದ್ದರು. ಹಾಗಾಗಿ, ಭೂಮಿಗೆ ಸಂಬಂಧಪಟ್ಟ ಮೂಲ ದಾಖಲೆಗಳು ಬ್ಯಾಂಕಿಗೆ ಒಪ್ಪಿಸಿದ್ದರು.
ನಕಲಿ ದಾಖಲೆ ಪಡೆದ ಮಹಿಳೆ
ಮೆಟ್ರೋ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಶುರುವಾಗಿ, ತಮಗೆ ಸಂಬಂಧಿಸಿದ ಭೂಮಿಗೆ ಬೆಲೆ ಬಂದಿರುವುದು ತಿಳಿದುಬಂದಾಗ ಹೊಸತೊಂದು ಆಲೋಚನೆ ಮಾಡಿದ ಕುಮಾರಿ, ಮೊದಲು ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳು ಕಳೆದು ಹೋಗಿದ್ದು, ಯಾರಿಗಾದರೂ ಸಿಕ್ಕರೆ ತಮ್ಮ ವಿಳಾಸಕ್ಕೆ ತಲುಪಿಸಬೇಕೆಂದು ಪತ್ರಿಕೆಗಳಲ್ಲಿ ಜಾಹೀರಾತು ಹಾಕಿದರು. ಆನಂತರ, ಸಂಬಂಧಪಟ್ಟ ಇಲಾಖೆಗಳಿಗೆ ಇದೇ ಜಾಹೀರಾತಿನ ಪ್ರತಿಗಳನ್ನು ಲಗತ್ತಿಸಿ, ಭೂಮಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳ ನಕಲು ಪ್ರತಿಗಳನ್ನು ಪಡೆದುಕೊಂಡರು. ಆನಂತರ, ಅದೇ ಪ್ರತಿಗಳನ್ನು ಕೆಐಎಡಿಬಿಗೆ ಕೊಟ್ಟು 16.61 ಕೋಟಿ ರು. ಪಡೆದಿದ್ದಾರೆಂದು ಮಂಡಳಿ ಆರೋಪಿಸಿದೆ.
ಬ್ಯಾಂಕ್ ಮೂಲಕ ಗೊತ್ತಾದ ವಿಚಾರ
ಇಂಥದ್ದೊಂದು ಮೋಸ ನಡೆದಿದ್ದರೂ ಅದು ಕೆಐಎಡಿಬಿ ಗಮನಕ್ಕೆ ಬಂದಿರಲಿಲ್ಲ. ಆದರೆ, ಕೆನರಾ ಬ್ಯಾಂಕ್ ನ ಸಾಲ ವಸೂಲಾತಿ ಸಿಬ್ಬಂದಿಯು ಸಾಲ ವಸೂಲಾತಿಗೆಂದು ಬಂದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ.
ಕೆನರಾ ಬ್ಯಾಂಕ್ ನಿಂದ ಪಡೆದಿದ್ದ 43.44 ಕೋಟಿ ರು. ಸಾಲದ ಕಂತನ್ನು 2008ರಿಂದಲೇ ಕುಮಾರಿ ಅವರು ಬ್ಯಾಂಕಿಗೆ ಕಟ್ಟುವುದನ್ನು ನಿಲ್ಲಿಸಿದ್ದಾರೆ. ಹಾಗಾಗಿ, ಈ ಬಡ್ಡಿ ಎಲ್ಲವೂ ಸೇರಿ ಈಗ ಅವರ ಮೇಲೆ 173 ಕೋಟಿ ರು. ಸಾಲ ಬಾಕಿಯಿದೆ. ಇದನ್ನು ಗಮನಿಸಿದ ಕೆನರಾ ಬ್ಯಾಂಕ್ ಅಧಿಕಾರಿಗಳು, ತನಿಖೆಗೆ ಆಗಮಿಸಿದಾಗ ಕುಮಾರಿ ಅವರು ಅಡವಿಟ್ಟ ಭೂಮಿಯ ಒಂದು ಭಾಗ ಕೆಐಎಡಿಬಿಗೆ ಹೋಗಿರುವುದು ತಿಳಿದುಬಂದಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಕೆಐಎಡಿಬಿ
ಕೆನರಾ ಬ್ಯಾಂಕ್ ಅಧಿಕಾರಿಗಳು ಕೆಐಎಡಿಬಿಗೆ ನೋಟಿಸ್ ನೀಡಿ, ಆ ಭೂಮಿಯ ಮೇಲೆ ತಾನು ಸಾಲ ಕೊಟ್ಟಿರುವುದರಿಂದ ಕಾನೂನಿನ ಪ್ರಕಾರ, ಆ ಭೂಮಿಯ ಮೇಲಿನ ಹಕ್ಕುಗಳು ಕೆನರಾ ಬ್ಯಾಂಕ್ ಗೆ ಇದ್ದು, ಮೆಟ್ರೋ ಯೋಜನೆ ಹಿನ್ನೆಲೆಯಲ್ಲಿ ಕುಮಾರಿ ಅವರಿಗೆ ನೀಡಿರುವ 16.66 ಕೋಟಿ ರು. ಪರಿಹಾರ ಧನ ಕೆನರಾ ಬ್ಯಾಂಕ್ ಗೆ ಸಲ್ಲಬೇಕೆಂದು ಸೂಚಿಸಿದೆ. ಆಗ, ಎಚ್ಚೆತ್ತುಕೊಂಡ ಕೆಐಎಡಿಬಿ, ಇದೀಗ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದೆ.