ಮೂರು ರಾಜ್ಯಗಳ ಪಡಿತರ ಅಕ್ಕಿ ಬಂಗಾರಪೇಟೆ ಮಿಲ್ ನಲ್ಲಿ ಪತ್ತೆ !
ಬೆಂಗಳೂರು, ಜು. 05: ಬಡವರ ಹಸಿವು ನೀಗಸಬೇಕಿದ್ದ ಅನ್ನಭಾಗ್ಯ ಅಕ್ಕಿ ಗಡಿಭಾಗದ ಮಿಲ್ ಸೇರಿ ನಾನಾ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಬಡವರಿಗೆ ವಿತರಣೆಯಾಗಬೇಕಿರುವ ಅನ್ನಭಾಗ್ಯ ಅಕ್ಕಿ ಬಂಗಾರಪೇಟೆಯ ರೈಸ್ ಮಿಲ್ ಸೇರಿ ನಾನಾ ಬ್ರಾಂಡ್ ರೂಪದಲ್ಲಿ ಮಾರಕಟ್ಟೆಗೆ ಪ್ರವೇಶಿಸುತ್ತಿವೆ ! ಇಂತಹ ಆಘಾತಕಾರಿ ಸಂಗತಿ ಆಹಾರ ಮತ್ತು ನಾಗರಿಕ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ರಾಮೇಶ್ವರಪ್ಪ ಅವರು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಿಂದ ಬಹಿರಂಗವಾಗಿದೆ.
ರಾಜಧಾನಿಯಿಂದ ಬಂಗಾರುಪೇಟೆ ಮಿಲ್ ಸೇರಿದ್ದ ಲಾರಿ ಜಾಡು ಹಿಡಿದು ಪತ್ತೆ ಮಾಡಿದ್ದ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕರೇ ಬಯಲಿಗೆ ಎಳೆದಿದ್ದಾರೆ. ಖಾಸಗಿ ಮಿಲ್ ನಲ್ಲಿ 2.31 ಕೋಟಿ ರೂ. ಮೌಲ್ಯದ 8497 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಪಿಆರ್ಎಸ್ ಅಗ್ರೋಟೆಕ್ ಮಿಲ್ ಮಾಲೀಕ ರಘುನಾಥ ಶೆಟ್ಟಿ ಸೇರಿದಂತೆ ಹದಿನೇಳು ಮಂದಿ ವಿರುದ್ಧ ಬಂಗಾರಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ಅನ್ಯಭಾಗ್ಯ ಅಕ್ಕಿ ಬಂಗಾರಪೇಟೆಗೆ:
ಬೆಂಗಳೂರಿನ ಯಶವಂತಪುರ, ಸುಂಕದಕಟ್ಟೆ ಗೋಡನ್ ಗಳಲ್ಲಿ ವಿತರಣೆಯಾಗಬೇಕಿದ್ದ ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಬಂಗಾರಪೇಟೆಯ ಖಾಸಗಿ ಮಿಲ್ ಗೆ ಸಾಗಣೆ ಮಾಡುತ್ತಿದ್ದರು. ಅನ್ನ ಭಾಗ್ಯದ ಅಕ್ಕಿಯ ಮೂಟೆಗಳು ಬೆಂಗಳೂರಿನಿಂದ ಬಂಗಾರಪೇಟೆಯ ಪಿಎಆರ್ಎಸ್ ಆಗ್ರೋಟೆಕ್ ಮಿಲ್ ಗೆ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ರಾಮೇಶ್ವರಪ್ಪ ಮತ್ತು ತಂಡ ಲಾರಿಯನ್ನು ಹಿಂಬಾಲಿಸಿದ್ದರು.
ಬಂಗಾರಪೇಟೆ ಪಿಆರ್ಎಸ್ ಆಗ್ರೋಟೆಕ್ ಮಿಲ್ ಲಾರಿ ತಲುಪಿದಾಗ ಆಹಾರ ಮತ್ತು ಪೂರೈಕೆ ಇಲಾಖೆ ಧಿಖಾರಿಗಳು ದಾಳಿ ನಡೆಸಿದ್ದರು. 20 ಸಾವಿರ ಅನ್ನಭಾಗ್ಯದ ಚೀಲಗಳು ಸಿಕ್ಕಿದ್ದವು. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಮಿಲ್ ಗೆ ಅಕ್ರಮವಾಗಿ ರವಾನೆ ಮಾಡಿರುವುದು ಪತ್ತೆಯಾಗಿದೆ. ಹೀಗೆ ಅಕ್ರಮವಾಗಿ ಸಾಗಣೆ ಮಾಡಿದ ಅಕ್ಕಿಯನ್ನು ಪಾಲಿಶ್ ಮಾಡಿ ವಿವಿಧ ಬ್ರಾಂಡ್ ಗಳ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಇದೀಗ ರಾಮೇಶ್ವರಪ್ಪ ಅವರು ಬಂಗಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪಿಆರ್ಎಸ್ ಅಗ್ರೋಟೆಕ್ ಮಿಲ್ ಮಾಲೀಕ ಸೇರಿದಂತೆ ಹದಿನೇಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ದೊಡ್ಡ ಜಾಲ: ಬೆಂಗಳೂರು, ತುಮಕೂರು, ಕೋಲಾರ, ರಾಮನಗರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅನ್ನ ಭಾಗ್ಯ ಅಕ್ಕಿ ಲೂಟಿ ಸ್ಕೀಮ್ ಸದ್ದಿಲ್ಲದೇ ನಡೆಯುತ್ತಿದೆ. ಕೊರೊನಾ ಲಾಕ್ ಡೌನ್ ವೇಳೆಯಲ್ಲಂತೂ ಬಡವರ ಅಕ್ಕಿಯನ್ನು ಪರಭಾರೆ ಮಾರಿ ಕೋಟಿ- ಕೋಟಿ ಲೂಟಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಅನ್ನಭಾಗ್ಯ ಅಕ್ಕಿ ಮಾರಾಟ ಜಾಲದ ಪ್ರಕರಣದ ಹೂರಣ ಹೊರ ಬಿದ್ದಿದೆ. ಕೇಂದ್ರ ಸರ್ಕಾರದ ಉಗ್ರಾಣಗಳಿಂದ ರಾಜ್ಯ ಆಹಾರ ಮತ್ತು ನಾಗರಿಕ ಇಲಾಖೆಯ ಗೋಡನ್ ಗಳಿಗೆ ಅಕ್ಕಿ ಡೆಲಿವರಿಯಾಗುತ್ತದೆ.
Recommended Video
ಈ ಅಕ್ಕಿಯನ್ನು ಪಡಿತರ ಚೀಟಿಗಳಿಗೆ ಅನುಗುಣವಾಗಿ ಪಡೆದು ಬಡವರಿಗೆ ಹಂಚಬೇಕು. ಆದರೆ, ಶೇ. 40 ರಷ್ಟು ಪಡಿತರವನ್ನು ಗೋಡನ್ ಗಳಲ್ಲಿಯೇ ಬಿಟ್ಟು ಮ್ಯಾನೇಜರ್ ಗಳ ಮೂಲಕ ಖಾಸಗಿ ಮಿಲ್ ಮಾಲೀಖರಿಗೆ ಮಾರಾಟ ಮಾಡುತ್ತಾರೆ. ಹೀಗೆ ಮಾರಾಟವಾಗುವ ಅಕ್ಕಿಯನ್ನು ಖಾಸಗಿ ಅಕ್ಕಿ ಗಿರಣಿಗಳಿಗೆ ಸಾಗಟ ಮಾಡಿ ಪಾಲಿಶ್ ಮಾಡಿ ಅದನ್ನೇ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಮತ್ತು ಆಂಧ್ರ ಮೂರು ರಾಜ್ಯಗಳಲ್ಲಿ ಈ ಅಕ್ರಮ ದಂಧೆ ನಡೆಯುತ್ತಲೇ ಇದೆ. ಇಷ್ಟು ಪ್ರಮಾಣದ ಪಡಿತರ ಅಕ್ಕಿ ಸಿಕ್ಕಿದ್ದು, ಇದೀಗ ಪೊಲೀಸರ ಯಾವ ಸ್ವರೂಪದ ತನಿಖೆ ಮಾಡುತ್ತಾರೋ ಕಾದು ನೋಡಬೇಕಿದೆ.