ಪ್ರಧಾನಿ, ರಾಷ್ಟ್ರಪತಿ ಸೇರಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8ವರ್ಷದ ಬಾಲಕನ ಸಾಧನೆ ಏನು? ತಿಳಿಯಿರಿ
ಬೆಂಗಳೂರಿನ ನಿವಾಸಿ, ಪುಟ್ಟ ಲೇಖಕರು ಆಗಿರುವ ಬಾಲಕ ರಿಷಿ ಶಿವ ಪ್ರಸನ್ನ (08) ಅವತು ತಮ್ಮ ಸಾಧನೆಯಿಂದಲೇ ಇಂದು ರಾಷ್ಟ್ರಮಟ್ಟದಲ್ಲಿ ಪರಿಚಿತವಾಗಿದ್ದಾರೆ. ಅವರು ಮಾಡಿದ ಸಾಧನೆ, ಅವರ ಬುದ್ಧಿಮಟ್ಟ ಬಗ್ಗೆ ಪ್ರಧಾನಿ ಮೋದಿಯವರು, ರಾಷ್ಟ್ರಪತಿಗಳು ಪ್ರಶಂಶಿಸಿದ್ದಾರೆ. ಇದರ ಸ
ಬೆಂಗಳೂರು, ಜನವರಿ 27: ಬೆಂಗಳೂರಿನ ನಿವಾಸಿ, ಪುಟ್ಟ ಲೇಖಕರು ಆಗಿರುವ ಬಾಲಕ ರಿಷಿ ಶಿವಪ್ರಸನ್ನ (08) ಅವತು ತಮ್ಮ ಸಾಧನೆಯಿಂದಲೇ ಇಂದು ರಾಷ್ಟ್ರಮಟ್ಟದಲ್ಲಿ ಪರಿಚಿತವಾಗಿದ್ದಾರೆ.
ಹೌದು, ಎಂಟು ವರ್ಷದ ಈ ಬಾಲಕ ರಿಷಿ ಶಿವಪ್ರಸನ್ನ ಅವರು ಆಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪರ್ ಆಗಿದ್ದು, ಹೊಸತನಕ್ಕೆ ತುಡಿಯುವ ಅವರ ಪ್ರತಿಭೆ ಗುರುತಿಸಿ ದೇಶದ ಪ್ರತಿಷ್ಠಿತ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.
ವಿಡಿಯೋ: ಪುಟ್ಟ ಬಾಲಕನ ಸಾಂಬಾರ್ ರೆಸಿಪಿಗೆ ಮರುಳಾದ ಜನ
ಮೂಲತಃ ಮೈಸೂರು ಜಿಲ್ಲೆ ನಂಜನಗೂಡಿನವರಾದ ಬಾಲಕ ರಿಷಿ ಅವರು ಬೆಂಗಳೂರಿನ ಉತ್ತರಹಳ್ಳಿಯಲ್ಲಿ ತಂದೆ ಪ್ರಸನ್ನಕುಮಾರ್ ಹಾಗೂ ರೇಚೇಶ್ವರಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಇವರು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮೂರು ಮೊಬೈಲ್ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ ಲೇಖಕರೂ ಆಗಿದ್ದಾರೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಬುದ್ಧಿವಂತಿಕೆ (ಐಕ್ಯೂ 180 ಮಟ್ಟ) ಸಾರ್ವಕಾಲಿಕ ಶ್ರೇಷ್ಠ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಆಲ್ಬರ್ಟ್ ಐನ್ಸ್ಟೈನ್ ಗೂ ಹೆಚ್ಚಿದೆ ಎಂದು ತಿಳಿದು ಬಂದಿದೆ. ಜೊತೆಗೆ ಬಾಲಕ ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೂಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡುವ ಮೂಲಕ ಯೂಟ್ಯೂಬರ್ ಆಗಿಯೂ ಗುರುತಿಸಿಕೊಂಡಿದ್ದಾರೆ.
ರಿಷಿ ನರ್ಸರಿಯಲ್ಲಿದ್ದಾಗ ಅವರ ತಿಳುವಳಿಕೆ ಮತ್ತು ಕೌಶಲ್ಯ ಬಗ್ಗೆ, ಹಿರಿಯರಿಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ಬಗ್ಗೆ ಶಿಕ್ಷಕರು ಗಮನಿಸುತ್ತಲೇ ಬಂದಿದ್ದರು. ಮೂರು ವರ್ಷದ ಮಕ್ಕಳು ವರ್ಣಮಾಲೆ, ಸಂಖ್ಯೆ ಕಲಿಯಲು ಪ್ರಾರಂಭಿಸಿದಾಗ ರಿಷಿಯವರು ಸೌರವ್ಯೂಹ, ಗ್ರಹಗಳು ಮತ್ತು ಬ್ರಹ್ಮಾಂಡದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ವಿಜ್ಞಾನ- ತಂತ್ರಜ್ಞಾನ ಅವರು ಹೆಚ್ಚು ಆಸಕ್ತಿ ಹೊಂದಿದ್ದರು. ಹೀಗೆ ಹಂತ ಹಂತವಾಗಿ ಬೆಳೆದ ಅವರು ಐದನೇ ವಯಸ್ಸಿನಲ್ಲಿ ಅವರು ಕೋಡಿಂಗ್ ಕಲಿತರು.
ಇಷ್ಟೆಲ್ಲ ಸಾಧನೆ ಮಾಡಿದ ಈ ಬಾಲಕ ರಿಷಿ ಶಿವಪ್ರಸನ್ನ ಅವರು ಪ್ರಶಸ್ತಿ ಸ್ವೀಕಾರ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿಗಳನ್ನು ಸೇರಿದಂತೆ ಗಣ್ಯರನ್ನು ಭೇಟಿಯಾಗಿ ಶುಭಹಾರೈಕೆ ಪಡೆದಿದ್ದಾರೆ.
ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ಹೆಚ್ಚು ಸಂತಸ ಗೌರವ ತಂದಿದೆ. ಅಭಿವೃದ್ಧಿ ಪಡಿಸಿದ ಮೊಬೈಲ್ ಅಪ್ಲಿಕೇಶನ್, ಅವುಗಳ ಉಪಯೋಗಗಳ ಬಗ್ಗೆ ಪ್ರಧಾನಿಯವರು ಕೇಳಿದ್ದಕ್ಕೆ ಉತ್ತರಿಸಿದೆ. ಆಲೋಚನೆಗಳು ಮತ್ತು ನಾವೀನ್ಯತೆಗಳನ್ನು ಕಾರ್ಯಗತಗೊಳಿಸಲು ನನ್ನನ್ನು ಪ್ರೋತ್ಸಾಹಿಸುವುದಾಗಿ ಅವರು ಸಕಾರಾತ್ಮಕವಾಗಿ ತಿಳಿಸಿದರು ಎಂದು ರಿಷಿ ಹೇಳಿದ್ದಾರೆ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಭೇಟಿಯಾಗಿದ್ದು, ಅವರು ನನಗೆ ಪ್ರೀತಿಯಿಂದ 'ಪಾಸ್ತಮಾನ್' ಎಂಬ (ನಿಕ್) ಹೆಸರಿನಿಂದ ಕರೆದರು. ಅವರೊಂದಿಗೆ ನಾವು ಪಾನಿಪುರಿ ತಿನ್ನಲು ಹೋಗಿದ್ದು, ನಾನು ಬರೆದ ಪುಸ್ತಕಗಳನ್ನು ಅವರಿಗೆ ನೀಡಿರುವುದೆಲ್ಲವು ನನಗೆ ದೆಹಲಿಯಲ್ಲಿನ ಮರೆಯಲಾಗದ ಸಂತಿಗಳೇ ಆಗಿವೆ ಎಂದು ರಿಷಿ ಹರ್ಷ ವ್ಯಕ್ತಪಡಿಸಿದ್ದಾರೆ.
ರಿಷಿಯ 03 ಮೊಬೈಲ್ ಅಪ್ಲಿಕೇಷನ್ಗಳು
ರಿಷಿ ಅವರು ಮಕ್ಕಳಿಗಾಗಿ 'ಐಕ್ಯೂ ಪರೀಕ್ಷಾ ಅಪ್ಲಿಕೇಶನ್', 'ವಿಶ್ವದ ದೇಶಗಳು' ಮತ್ತು 'ಕೋವಿಡ್ ಸಹಾಯವಾಣಿ ಬೆಂಗಳೂರು' ಎಂಬ ಮೂರು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ . ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಶೀಘ್ರವೇ ಮತ್ತೊಂದು ಪುಸ್ತಕ ಹೊರತರಲಿದ್ದಾರೆ.
ತಂದೆ ಪ್ರಸನ್ನಕುಮಾರ್ ಅವರು ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ತಾಯಿ ರೇಚೇಶ್ವರಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ರಿಷಿಯ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿರುತ್ತಿದ್ದಾರೆ. ಇದೀಗ ಪೋಷಕರಿಗೆ ಅದೆಲ್ಲವನ್ನು ನಿಭಾಯಿಸುವುದು, ಮಗನ ಬುದ್ಧಿವಂತಿಕೆ ಮಟ್ಟಕ್ಕೆ ತಕ್ಕ ಅಗತ್ಯತೆ ಪೂರೈಸುವುದು ದೊಡ್ಡ ಸವಾಲಾಗಿದೆ. ಮಗ ಏನೇ ಮಾಡಿದರೂ ಆತನನ್ನು ಪ್ರೋತ್ಸಾಹಿಸಲು ನಮಗೂ ಮಾರ್ಗದರ್ಶನ ನೀಡಲಾಗಿದೆ ಎಂದು ಪೋಷಕರು ತಿಳಿಸಿದರು.