ಕೇಂದ್ರದಿಂದ 8,800 ಕೋಟಿ ಜಿಎಸ್ಟಿ ಬಾಕಿ ಹಂಚಿಕೆ: ಬೊಮ್ಮಾಯಿ
ಬೆಂಗಳೂರು, ಜು.20: ಕೇಂದ್ರ ಸರ್ಕಾರವು ಜಿಎಸ್ಟಿ ಬಾಕಿಯಲ್ಲಿ 8,800 ಕೋಟಿ ರೂ ನೀಡಿದ್ದು, ಉಳಿದ ಬಾಕಿ ಹಣವನ್ನು ಶೀಘ್ರದಲ್ಲೇ ಪಾವತಿಸಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ಜಿಎಸ್ಟಿ ಪರಿಹಾರದ ಅವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸುವಂತೆ ತಮ್ಮ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಅದನ್ನು ನಿಯಮಗಳನ್ನು ಉಲ್ಲೇಖಿಸಿ ತಿರಸ್ಕರಿಸಲಾಗಿತ್ತು. ಆದರೆ, ಅವರು ನಮ್ಮ ಬಾಕಿಯನ್ನು ನಮಗೆ ನೀಡುತ್ತಿದ್ದಾರೆ. ಕೇಂದ್ರ ನಮಗೆ 8,800 ಕೋಟಿ ರೂ.ಗಳನ್ನು ನೀಡಿದ್ದಾರೆ. ಅದಕ್ಕೆ ಯಾವುದೇ ತೊಂದರೆಯಿಲ್ಲ," ಎಂದು ಹೇಳಿದರು.
ಜಿಎಸ್ಟಿ ಪರಿಹಾರವನ್ನು ಐದು ವರ್ಷಕ್ಕಿಂತ ಹೆಚ್ಚು ವಿಸ್ತರಿಸುವ ಕುರಿತು ಬೊಮ್ಮಾಯಿ, ಜಿಎಸ್ಟಿ ಪರಿಹಾರವನ್ನು ಐದು ವರ್ಷಗಳವರೆಗೆ ಮಾತ್ರ ನೀಡಬಹುದು ಮತ್ತು ಅದನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಜಿಎಸ್ಟಿಯಲ್ಲಿ ರಾಜ್ಯದ ಪಾಲನ್ನು ನೀಡುತ್ತಿದೆ. ಕೋವಿಡ್ ಸಮಯದಲ್ಲಿ ಸಂಗ್ರಹವು ಬಹುತೇಕ ಶೂನ್ಯವಾಗಿತ್ತು. ಜಿಎಸ್ಟಿ ಸಂಗ್ರಹವಾಗಿದ್ದರೆ ಮಾತ್ರ ಪರಿಹಾರವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ನು ಜುಲೈ 1, 2017 ರಿಂದ ಜಾರಿಗೆ ತರಲಾಯಿತು. ಜಿಎಸ್ಟಿ (ರಾಜ್ಯಗಳಿಗೆ ಪರಿಹಾರ) ಕಾಯಿದೆ, 2017ರ ಪ್ರಕಾರ ಐದು ವರ್ಷಗಳ ಅವಧಿಗೆ ಹೊಸ ತೆರಿಗೆ ಪದ್ಧತಿಯ ಅನುಷ್ಠಾನದಿಂದ ಉಂಟಾಗುವ ಆದಾಯದ ನಷ್ಟಕ್ಕೆ ಪರಿಹಾರವನ್ನು ನೀಡಲು ಎಲ್ಲಾ ರಾಜ್ಯಗಳಿಗೆ ಭರವಸೆ ನೀಡಲಾಯಿತು.
ರಾಜ್ಯ ಮತ್ತು ಇತರೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಬೊಮ್ಮಾಯಿ ಅವರು, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಕುರಿತು ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಆಯೋಗ ತನ್ನ ವರದಿ ನೀಡಿದ ಕೂಡಲೇ ಸರ್ವೋಚ್ಚ ನ್ಯಾಯಾಲಯದಲ್ಲಿ 22 ರಂದು ಸಲ್ಲಿಸಲಾಗುವುದು. ವರದಿ ಬಂದ ಕೂಡಲೇ ಚುನಾವಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ನಂತರ ನ್ಯಾಯಾಲಯದ ನಿರ್ದೇಶನದ ಅನುಗುಣವಾಗಿ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು. ಮೈಸೂರು ಮೇಯರ್ ಚುನಾವಣೆ ಹಿಂದುಳಿದ ಆಯೋಗದ ವರದಿ ಬಂದ ಕೂಡಲೇ ನಡೆಸಲಾಗುವುದು ಎಂದು ತಿಳಿಸಿದರು.