ವೇತನ ತಾರತಮ್ಯ ನಿವಾರಣೆಗೆ ಸಿದ್ಧ: ಪಿಯು ಉಪನ್ಯಾಸಕರಿಗೆ ಸಿಎಂ ಭರವಸೆ
ಬೆಂಗಳೂರು, ಮಾರ್ಚ್ 3: ಬಹು ದಿನದಿಂದ ಚರ್ಚೆಯಲ್ಲಿರುವ ಪದವಿಪೂರ್ವ ಉಪನ್ಯಾಸಕರ ವೇತನ ತಾರತಮ್ಯವನ್ನು ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮತ್ತು ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಪದಾಧಿಕಾರಿಗಳೊಂದಿಗೆ ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು.
ಈ ಮೂಲಕ ಪ್ರತಿ ವರ್ಷ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ಆರಂಭವಾಗುತ್ತಿದ್ದ ಮೌಲ್ಯಮಾಪನ ಬಹಿಷ್ಕಾರ ಪ್ರಹಸನ ಈ ಬಾರಿ ತಣ್ಣಗಾಗುವ ಸೂಚನೆ ಸಿಕ್ಕಿದೆ.
ಶಿಕ್ಷಕರು ಮತ್ತು ಉಪನ್ಯಾಸಕರಲ್ಲಿ ಅಸಮಾಧಾನ ಮೂಡಿಸಿರುವ ವೇತನ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ ಏಳನೇ ವೇತನ ಆಯೋಗ ರಚನೆಯಾಗಲಿದೆ. ಆಯೋಗದ ವರದಿಯ ಆಧಾರದ ಮೇಲೆ ವೇತನ ಪರಿಷ್ಕರಣೆ ಮಾಡಲಾಗುವುದು ಎಂದಿರುವ ಅವರು ಶಿಕ್ಷಕರು ಮತ್ತು ಉಪನ್ಯಾಸಕರು ಯಾವುದೇ ಕಾರಣಕ್ಕೂ ಮೌಲ್ಯಮಾಪನ ಬಹಿಷ್ಕರಿಸಬಾರದು ಎಂದು ಮನವಿ ಮಾಡಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಮುಗಿಯುತ್ತಿದ್ದಂತೆಯೇ ಶಿಕ್ಷಕರ ಮತ್ತು ಉಪನ್ಯಾಸಕರ ಬೇಡಿಕೆಗಳ ಕುರಿತು ನಿರ್ಧರಿಸಲಾಗುವುದು. ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಚಳವಳಿ, ಗಲಾಟೆ ಎಬ್ಬಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ದಯವಿಟ್ಟು ಮುಷ್ಕರಕ್ಕೆ ಮುಂದಾಗಬೇಡಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಬದ್ಧವಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸಹ ಉಪಸ್ಥಿತರಿದ್ದರು.