70,000 ರೋಗಿಗಳಿಗೆ ಚಿಕಿತ್ಸೆ:ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಶಕದ ಸಂಭ್ರಮ
ಬೆಂಗಳೂರು ಆಗಸ್ಟ್ 12: ನಿರಂತರ ಸಂಶೋಧನೆಯಿಂದ ನಾನಾ ಬಗೆಯ ಕ್ಯಾನ್ಸರ್ ರೋಗಗಳನ್ನು ತೊಲಗಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟು, ಅನೇಕ ಮೊದಲುಗಳಿಗೆ ಸಾಕ್ಷಿಯಾಗಿ, ಹತ್ತು ವರ್ಷದಿಂದ ಸುಮಾರು ಸುಮಾರು 70,000ಕ್ಕೂ ಹೆಚ್ಚು ಮಂದಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ಬೆಂಗಳೂರಿನ ಬಸವನಗುಡಿಯ ಶ್ರೀ ಶಂಕರ್ ಕ್ಯಾನ್ಸರ್ ಫೌಂಡೇಶನ್ನ 'ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ'ವು ದಶಮಾನೋತ್ಸವದ ಸಂಭ್ರಮದಲ್ಲಿದೆ.
520 ಹಾಸಿಗೆವುಳ್ಳ ಆಸ್ಪತ್ರೆಯು ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆ ನೀಡುವ ಹಾಗೂ ಎಲ್ಲ ವರ್ಗದ ಜನರಿಗೂ, ಎಲ್ಲಾ ಬಗೆಯ ಕ್ಯಾನ್ಸರ್ ಕಾಯಿಲೆಗಳಿಗೂ ಚಿಕಿತ್ಸೆ ನೀಡಿ ರೋಗ ಸಮಸ್ಯೆಗೆ ಪರಿಹಾರ ಒದಗಿಸಿದೆ. ತನ್ನ ಉತ್ತಮ ಸಂಶೋಧನೆಗಳಿಂದಲೇ ಕ್ಯಾನ್ಸರ್ ಎಂಬ ಮಾರಿಯನ್ನು ತೊಲಗಿಸುವ ದಿಟ್ಟ ಹೆಜ್ಜೆ ಇಡುವ ಮೂಲಕ ಕರ್ನಾಟಕದ ಹೆಮ್ಮೆ ಎನ್ನಿಸಿಕೊಂಡಿದೆ.
ಬೆಂಗಳೂರು: ಆಗಸ್ಟ್ 10ರ ರಾಜಕೀಯ ನಾಯಕರ ಕಾರ್ಯಕ್ರಮಗಳು ಹೀಗಿವೆ..
2012ರಲ್ಲಿ ಸ್ಥಾಪನೆಗೊಂಡ ಶ್ರೀ ಶಂಕರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಖ್ಯಾತ ವೈದ್ಯ ಡಾ. ಬಿ. ಎಸ್. ಶ್ರೀನಾಥ್ ಅವರ ಸಮರ್ಥ ನಾಯಕತ್ವದಲ್ಲಿ, ಉತ್ಸಾಹಿ ಪರಿಣಿತ ವೈದ್ಯ, ವೈದ್ಯಕೇತರ ಸಿಬ್ಬಂದಿಗಳ ಕಾರ್ಯಕ್ಷಮತೆಯೊಂದಿಗೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ವೈದ್ಯಕೀಯ ಸೇವೆಗಳಿಂದಲೇ ಅನೇಕ ಪ್ರಥಮಗಳಿಗೆ ಸಾಕ್ಷಿಯಾಗಿದೆ. ದೇಶದಲ್ಲೇ ಮೊದಲ ಖಾಸಗಿ ಚಾರಿಟೇಬಲ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥರು, ವ್ಯವಸ್ಥಾಪಕ ಟ್ರಸ್ಟಿ ಆದ ಡಾ. ಬಿ. ಎಸ್. ಶ್ರೀನಾಥ್ ತಿಳಿಸಿದ್ದಾರೆ.
25 ವರ್ಷಗಳಿಂದ ಕ್ಯಾನ್ಸರ್ ರೋಗಿಗಳ ಆರೈಕೆಗೆ ಜೀವನವನ್ನೇ ಮುಡಿಪಾಗಿಟ್ಟ ಡಾ. ಬಿ. ಎಸ್. ಶ್ರೀನಾಥ್ 30 ಸಾವಿರಕ್ಕೂ ಅಧಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.
3 ದಿನ ದಶಮಾನೋತ್ಸವ ಸಂಭ್ರಮ
ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ (ಎಸ್ಎಸ್ಸಿಎಫ್) ಒಂದು ಘಟಕವಾಗಿರುವ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಎಸ್ಎಸ್ಸಿಎಚ್ಆರ್ಸಿ)ವು ಸಾರ್ಥಕ ಹತ್ತು ವರ್ಷ ಸಂಭ್ರಮವನ್ನು ಆಗಸ್ಟ್ 13ರಿಂದ 15ರವರೆಗೆ ಮೂರು ದಿನ ಹಮ್ಮಿಕೊಂಡಿದೆ.
ಆಗಸ್ಟ್ 13ರಂದು 'ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಕ್ಯಾನ್ಸರ್ ಕಾಳಜಿ' ಎಂಬ ವಿಚಾರ ಸಂಕಿರಣ ಮೂಲಕ ದಶಮಾನೋತ್ಸವ ಆರಂಭವಾಗಲಿದೆ. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾ. ಎಂ. ಎನ್. ವೆಂಕಟಾಚಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. 'ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ಯಾನ್ಸರ್ ಆರೈಕೆ ಸಾಧಿಸುವುದು-ಚಾರಿಟೇಬಲ್ ಕ್ಯಾನ್ಸರ್ ಸಂಸ್ಥೆಗಳ ಸವಾಲುಗಳು' ಕುರಿತು ಚರ್ಚೆ ನಡೆಯಲಿವೆ.
ಆಗಸ್ಟ್ 15ರಂದು 75ನೇ ಸ್ವಾತಂತ್ರ್ಯ ವರ್ಷಾಚರಣೆ ನಡೆಯಲಿದ್ದು, ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪದ್ಮಶ್ರೀ ಡಾ. ವಿ. ಆರ್. ಗೌರಿಶಂಕರ್ ಧ್ವಜಾರೋಹಣ ಮಾಡಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ದಾನಿಗಳನ್ನು ಗೌರವಿಸಲಾಗುವುದು. ಅವರೆಲ್ಲ 10ವರ್ಷದ ಕಾರ್ಯ ಸಾಧನೆ ಸ್ಮರಿಸಲಿದ್ದಾರೆ.
ಶ್ರೇಷ್ಠ ಉದ್ದೇಶದೊಂದಿಗೆ ಆಸ್ಪತ್ರೆ ನಿರ್ಮಾಣ
2008ರಲ್ಲಿ ಸ್ಥಾಪನೆಯಾಗಿದ್ದ ಲಾಭರಹಿತ ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ ಸಂಸ್ಥೆಯು ಯಾವುದೇ ಜಾತಿ, ಧರ್ಮ, ಲಿಂಗ, ಶೈಕ್ಷಣಿಕ ಅಥವಾ ಸಾಮಾಜಿಕ-ಆರ್ಥಿಕ ಸ್ಥಾನಮಾನವನ್ನು ನೋಡದೆ ಎಲ್ಲಾ ಕ್ಯಾನ್ಸರ್ ರೋಗಿಗಳಿಗೂ ಅತ್ಯಾಧುನಿಕ, ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಿತ್ತು. ಅದರಂತೆಯೇ ದಾನಿಗಳ ಸಹಕಾರದಲ್ಲಿ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಎಸ್ಎಸ್ಸಿಎಚ್ಆರ್ಸಿ)ವನ್ನು 2010ರ ಅಕ್ಟೋಬರ್ ನಲ್ಲಿ ಆರಂಭಿಸಿ, 2012ರಲ್ಲಿ ಪೂರ್ಣಗೊಳಿಸಿತು.
ಇಲ್ಲಿ ಏನೇನು ಸೌಲಭ್ಯಗಳಿವೆ?
ಎಸ್ಎಸ್ಸಿಎಚ್ ಆರ್ಸಿಯಲ್ಲಿ ಕ್ಯಾನ್ಸರ್ ಕಾಳಜಿ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದರಲ್ಲಿ ಅತ್ಯಾಧುನಿಕ ರೇಡಿಯೊಥೆರಪಿಗಾಗಿ ಲೈನಿಯರ್ ಎಕ್ಸಿಲರೇಟರ್, ರೊಬೊಟಿಕ್ ಸರ್ಜರಿ ಕೇಂದ್ರದ ಜತೆಗೆ 9 ಶಸ್ತ್ರಚಿಕಿತ್ಸಾ ಕೊಠಡಿಗಳು, ಪ್ರತ್ಯೇಕ 33 ಹಾಸಿಗೆಗಳ ಡೇ ಕೇರ್ ಕಿಮೋಥೆರಪಿ ಘಟಕದ ಜತೆಗೆ ಮೆಡಿಕಲ್ ಆಂಕಾಲಜಿ, 40 ಹಾಸಿಗೆಗಳ ಪೇಡಿಯಾಟ್ರಿಕ್ ಆಂಕಾಲಜಿ ಘಟಕ ಹಾಗೂ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟೇಷನ್) ಕೇಂದ್ರಗಳನ್ನು ಸಂಸ್ಥೆ ಹೊಂದಿದೆ.
ಸ್ತನ ಕಾಯಿಲೆಗಳು ಮತ್ತು ಶ್ವಾಸಕೋಶ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪ್ರತ್ಯೇಕ ಕೇಂದ್ರವೂ ಸ್ಥಾಪನೆ ಆಗಿದೆ. ರೋಗಿಗಳ ಜತೆ ಬಂದವರಿಗೆ ಆಸ್ಪತ್ರೆ ಆವರಣದಲ್ಲೇ ವಿಶ್ರಾಂತಿ ಸೌಲಭ್ಯ, ಐಸಿಯುನಲ್ಲಿರುವ ರೋಗಿಗಳ ಸಂಬಂಧಿಗಳಿಗಾಗಿ ಶಸ್ತ್ರಚಿಕಿತ್ಸಾ ಕೊಠಡಿಯ, ಆಹಾರ ವ್ಯವಸ್ಥೆ, ನಿರೀಕ್ಷಣಾ ಕೊಠಡಿ, ಮಕ್ಕಳಿಗೆ ಆಟವಾಡಲು ಸ್ಥಳ, ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಗಾಗಿ ಬರುವ ಪೋಷಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಡೇ ಕೇರ್ ಕಿಮೋಥೆರಪಿ ವ್ಯವಸ್ಥೆಗಳಿಂದಾಗಿ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ನಿತ್ಯ ಜನರಲ್ ವಾರ್ಡಗಳ ರೋಗಿಗಳಿಗೆ ಕಾಳಜಿ ಮೇರೆಗೆ ಉಚಿತ ಪೌಷ್ಟಿಕ ಆಹಾರ ನೀಡಲಾಗುತ್ತದೆ.
ವಿಶೇಷವಾಗಿ ಶ್ರೀ ಶಂಕರ ಆಯುರ್ ಏಡ್ ಸೆಂಟರ್ ಫಾರ್ ಇಂಟಗ್ರೇಟಿವ್ ಆಂಕಾಲಜಿ ಹಾಗೂ ಕಾಯಿಲೆ ಸಂಬಂಧಿತ ಗುಂಪು ಥೆರಪಿಯು ರೋಗಿಗಳಿಗೆ ಮಾನಸಿಕ ದೃಢತೆಗೆ ಪೂರಕವಾದ ಸೇವೆಯಾಗಿದೆ. ಮುಖ್ಯವಾಗಿ ರೋಗಿಗಳಿಗೆ ಅವರ ಮನೆಗಳಲ್ಲೇ ಆರೈಕೆ ನೀಡುವಂತಹ ಡೊಮಿಸಿಲಿಯರಿ ಕೇರ್, ಯೋಗ ಥೆರಪಿ, ಮ್ಯೂಸಿಕ್ ಥೆರಪಿ, ಆಯುರ್ವೇದಿಕ್ ಥೆರಪಿಗಳನ್ನೂ ಇಲ್ಲಿ ನೀಡಲಾಗುತ್ತಿದೆ.
ಸಂಶೋಧನಾ ಪ್ರಯೋಗಾಲಯ
ಆಸ್ಪತ್ರೆಯಲ್ಲಿ ನುರಿತ ವೈದ್ಯರು ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಜೀನ್ ಸೀಕ್ವೆನ್ಸಿಂಗ್, ಟ್ಯೂಮರ್ ಸೆಲ್ ಲೈನ್ ಕಲ್ಚರ್, ಮಾಸ್ ಸ್ಪಕ್ಟೋಸ್ಕೋಪಿ ಸೌಲಭ್ಯದೊಂದಿಗೆ ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯ ಇವೆ. ಇದು ನಾನಾ ಬಗೆಯ ಕ್ಯಾನ್ಸರ್ ಪತ್ತೆಗೆ ವೈಯಕ್ತಿಕವಾಗಿ ರೋಗಿಗೆ ಸದ್ಯ ಎಂತಹ ಆರೈಕೆಯ ಅಗತ್ಯವಿದೆ ಎಂಬುದನ್ನು ತಿಳಿಯಲು ನೆರವಾಗುತ್ತವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮತ್ತು ಚಿಂತಾಮಣಿ ತಾಲೂಕುಗಳಲ್ಲಿ ಆರಂಭಿಕ ಕ್ಯಾನ್ಸರ್ ಪತ್ತೆಯ ಕೆಲಸವಾಗುತ್ತಿದ್ದು, ಆರು ಲಕ್ಷಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎನ್ನಲಾಗಿದೆ.
ಅಂಗ ಸಂಸ್ಥೆಗಳಿಂದ ಆರೈಕೆ
ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ ತನ್ನ ವಿವಿಧ ಅಂಗಸಂಸ್ಥೆಗಳಾದ ಶ್ರೀ ಶಂಕರ ಕ್ಯಾನ್ಸರ್ ಹಾಸ್ಟಿಟಪ್ ಆಂಡ್ ರಿಸರ್ಚ್ ಸೆಂಟರ್, ಶ್ರೀ ಶಂಕರ ನ್ಯಾಷನಲ್ ಸೆಂಟರ್ ಫಾರ್ ಕ್ಯಾನ್ಸರ್ ಪ್ರಿವೆಂನ್ಷನ್ ಆಂಡ್ ರಿಸರ್ಚ್, ಶ್ರೀ ಶಂಕರ ಕ್ಯಾನ್ಸರ್ ರಿಸರ್ಚ್ ಸೆಂಟರ್, ಶ್ರೀ ಶಂಕರ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಶ್ರೀ ಶಂಕರ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಸೈನ್ಸಸ್ ಮೂಲಕ ಸಮಗ್ರ ಆರೈಕೆ ನೀಡುವುದರೊಂದಿಗೆ, ಕೈಗೆಟುಕುವ ದರದಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯಂತ ಕಾಳಜಿ ವಹಿಸಿದ ವಾತಾವರಣದಲ್ಲಿ ರೋಗಿಗಳನ್ನು ಆರೈಕೆ ಮಾಡುತ್ತಿವೆ.
ಒಡಿಶಾದಲ್ಲಿ ಬೃಹತ್ ಕ್ಯಾನ್ಸರ್ ಆಸ್ಪತ್ರೆಗೆ ಸಿದ್ಧತೆ
ಒಡಿಶಾದ ರಾಜಧಾನಿ ಭುವನೇಶ್ವರದ ಇನ್ಫೊ ವ್ಯಾಲಿಯಲ್ಲಿ ಖ್ಯಾತ ಉದ್ಯಮಿ ಸುಬ್ರತೊ ಅವರ ದೇಣಿಗೆಯೊಂದಿಗೆ 750 ಹಾಸಿಗೆಯ ಶ್ರೀ ಶಂಕರ ಕ್ಯಾನ್ಸರ್ ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೊಳ್ಳಲಿದೆ. ಇದು 2023ರಲ್ಲಿ ಕಾರ್ಯಾರಂಭವಾಗಲಿದೆ. ಇದೊಂದು ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಆಗಲಿದೆ. 22.5 ಎಕರೆಜಾಗವನ್ನು ಒಡಿಶಾ ಸರ್ಕಾರ ಉಚಿತವಾಗಿ ನೀಡಿದೆ. ಮುಖ್ಯಮಂತ್ರಿಗಳ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ.