ಹೊಂಡ ಬಿದ್ದ ರಸ್ತೆ, ಕಟ್ಟಿದ ಚರಂಡಿ, ಕೊಳೆತ ಕಸ, ಅಯ್ಯಪ್ಪಾ..!
ಬೆಂಗಳೂರು, ಜುಲೈ, 01: ಮಳೆಗಾಲ ಶುರುವಾಯಿತು ಎಂದರೆ ಬೆಂಗಳೂರಿಗರು ಬೆಚ್ಚಿ ಬೀಳುತ್ತಾರೆ. ಹೊಂಡ ಬಿದ್ದ ರಸ್ತೆ, ಕಟ್ಟಿದ ಚರಂಡಿ, ತಗ್ಗು ಪ್ರದೇಶಗಳಿಗೆ ನುಗ್ಗುವ ನೀರು, ಕೊಳೆತ ಕಸ., ಅಯ್ಯಪ್ಪಾ...
ಬೆಂಗಳೂರು ಮಹಾನಗರ ಜೂನ್ ತಿಂಗಳಲ್ಲಿ ವಾಡಿಕೆಯ ಮಳೆಯಾಗಿದೆ. ಆದರೆ ಜುಲೈ ತಿಂಗಳಲ್ಲಿ ಮಹಾನಗರ ಭಾರೀ ಮಳೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಹೆಚ್ಚಾಗುವುದರೊಂದಿಗೆ ಜನರ ಸಮಸ್ಯೆಯೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.[ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?]
ವಾತಾವರಣದ ಉಷ್ಣಾಂಶ ಇಳಿಕೆಯೊಂದಿಗೆ ನೂರಾರು ಸಮಸ್ಯೆಗಳು ಗರಿ ಬಿಚ್ಚಿಕೊಂಡಿವೆ. ಮಳೆಗಾಲ ಎಂದರೆ ಬೆಂಗಳೂರಿಗರು ಯಾಕೆ ಹೆದರುತ್ತಾರೆ ಅಥವಾ ಭಯ ಬೀಳಲು ಕಾರಣವೇನು ಎಂಬುದನ್ನು ಮುಂದೆ ನೋಡಿಕೊಂಡು ಬರೋಣ....
ಸಮಸ್ಯೆ ತರುವ ನೀರು
ಪ್ರತಿಯೊಂದು ಗಲ್ಲಿಯಲ್ಲೂ ನೀರು ತುಂಬಿಕೊಳ್ಳುವುದು ಬೆಂಗಳೂರ ವ್ಯಥೆ. ಮಳೆ ಜೋರಾದಾಗ ಇಲ್ಲಿಂದ ನೀರು ಹೊರಹಾಕುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಬಿಟಿಎಂ ನಿವಾಸಿಯೊಬ್ಬರು ಹೇಳುತ್ತಾರೆ.
ಚರಂಡಿ ಗೋಳು
ಯುವ ಜನತೆಯ ಮೆಚ್ಚಿನ ತಾಣ ಚರ್ಚ್ ಸ್ಟ್ರೀಟ್ ನಲ್ಲಿಯೇ ಚರಂಡಿ ನೀರು ಮೇಲಕ್ಕೆ ಹರಿಯುತ್ತದೆ ಅಂದರೆ ಇನ್ನುಳಿದ ಕಡೆ ವ್ಯವಸ್ಥೆ ಯಾವ ರೀತಿ ಇರಬಹುದು ಎಂಬುದನ್ನು ಲೆಕ್ಕ ಹಾಕಬಹುದು. ಇನ್ನು ಫುಟ್ ಪಾತ್ ಗಳ ಮೇಲೆ ನಡೆದು ಹೋಗುವುದು ಅಪಾಯ ಮೈ ಮೇಲೆ ಎಳೆದುಕೊಂಡಂತೆ.
ಟ್ರಾಫಿಕ್ ನರಕ
ಮಳೆ ಇಲ್ಲದ ದಿನವೇ ಟ್ರಾಫಿಕ್ ನರಕ ಅನುಭವಿಸಲು ಸಾಧ್ಯವಿಲ್ಲ. ಇನ್ನು ಜೋರಾಗಿ ಮಳೆ ಬಂದರೆ? ರಸ್ತೆಯಲ್ಲಿ ನೀರು ತುಂಬಿಕೊಳ್ಳುವುದರಿಂದ ಸಂಚಾರಕ್ಕೆ ಉಂಟಾಗುವ ಅಡಚಣೆ ಟ್ರಾಫಿಕ್ ನರಕವಾಗಿ ಪರಿಣಮಿಸುತ್ತದೆ.
ಡೆಂಗ್ಯೂ ಆತಂಕ
ಕಳೆದ ವರ್ಷ ಬೆಂಗಳೂರಲ್ಲಿ 5,077 ಡೆಂಗ್ಯೂ ಮತ್ತು 2,099 ಚಿಕೂನ್ ಗುನ್ಯ ಪ್ರಕರಣ ದಾಖಲಾಗಿದ್ದು 9 ಜನರು ಮಾರಕ ರೋಗಕ್ಕೆ ಬಲಿಯಾಗಿದ್ದರು .
ರಾಜ್ಯದ ಲೆಕ್ಕ
ಆರೋಗ್ಯ ಇಲಾಖೆ ದಾಖಲೆ ಹೇಳುವಂತೆ ಈ ಬಾರಿಯ ಮಾನ್ಸೂನ್ ಆರಂಭದಿಂದ 834 ಡೆಂಗ್ಯೂ ಮತ್ತು 304ಚಿಕೂನ್ ಗುನ್ಯ ಪ್ರಕರಣಗಳು ರಾಜ್ಯಾದ್ಯಂತ ಕಂಡು ಬಂದಿವೆ. ಮಳೆ ಹೆಚ್ಚಾದಂತೆ ಈ ರೋಗದ ಆತಂಕವೂ ಹೆಚ್ಚಾಗಲಿದೆ.
ರಸ್ತೆಯೋ ಅಥವಾ ಗಟಾರವೋ
ಇಡೀ ಮಹಾನಗರದ ರಸ್ತೆ ಗುಂಡಿಮಯ. ಇಲಾಖೆಗಳ ನಡುವಿನ ಸಮನ್ವಯ ಕೊರತೆ ಈ ಗುಂಡಿಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕೆಲ ಮುಖ್ಯ ರಸ್ತೆಗಳಲ್ಲೇ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಮಾಯವಾಗದ ಕಸ
ಬೆಂಗಳೂರಿಗೆ ಅಂಟಿಕೊಂಡ ಬಹುದೊಡ್ಡ ಕಳಂಕ ಕಸ ಸಮಸ್ಯೆ. ಕಳೆದ ಮೂರ್ನಾಲ್ಕು ವರ್ಷದಿಂದ ಹೆಚ್ಚಿಕೊಂಡಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಸ ಮಳೆಯಲ್ಲಿ ನೆನೆದು ಕೊಳೆತರೆ...?