ಹೆಬ್ಬಾಳದಲ್ಲಿ ಕಾಂಗ್ರೆಸ್ ಬೀಳಲು ಏಳೇ 7 ಕಾರಣಗಳು!
ಬೆಂಗಳೂರು, ಫೆಬ್ರವರಿ 16 : ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಎರಡು ಕ್ಷೇತ್ರದಲ್ಲಿ ಜಯಗಳಿಸಿದೆ. ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಅವರು ಗೆಲವು ಸಾಧಿಸುವ ಮೂಲಕ ಪಕ್ಷಕ್ಕೆ ಆಗುವ ಮುಖಭಂಗ ತಪ್ಪಿಸಿದ್ದಾರೆ. ಆದರೆ, ಹೆಬ್ಬಾಳ ಕ್ಷೇತ್ರದ ಸೋಲು ಕಾಂಗ್ರೆಸ್ಗೆ ಭಾರೀ ಹಿನ್ನಡೆ ಉಂಟುಮಾಡಿದೆ.
ಉಪ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ದಿನದಿಂದ ಹೆಬ್ಬಾಳ ಕ್ಷೇತ್ರ ಜನರಲ್ಲಿ ಕುತೂಹಲ ಮೂಡಿಸಿತ್ತು. ಚುನಾವಣೆ ಘೋಷಣೆಯಾಗುವ ಮೊದಲಿನಿಂದಲೇ ಕ್ಷೇತ್ರದ ಟಿಕೆಟ್ ಪಡೆಯಲು ಪೈಪೋಟಿ ಆರಂಭವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಯಸಿದ ಅಭ್ಯರ್ಥಿಗೆ ಹೆಬ್ಬಾಳದಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. [ಉಪ ಚುನಾವಣೆ ಫಲಿತಾಂಶ : ಕ್ಷಣ-ಕ್ಷಣದ ಮಾಹಿತಿ]
ಹೆಬ್ಬಾಳದಲ್ಲಿ ಟಿಕೆಟ್ಗಾಗಿ ಭೈರತಿ ಸುರೇಶ್, ರೆಹಮಾನ್ ಷರೀಫ್, ಎಚ್.ಎಂ.ರೇವಣ್ಣ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ಗೆ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. [ಉಪಚುನಾವಣೆ : ಅರಳಿದ ಕಮಲ, ಮುದುಡಿದ ಕಾಂಗ್ರೆಸ್]
ದೆಹಲಿಗೆ ಹೋಗಿ ಟಿಕೆಟ್ ತಂದ ಜಾಫರ್ ಷರೀಫ್ ಅವರು ಉಪ ಚುನಾವಣೆಯಲ್ಲಿ ಮೊಮ್ಮಗನನ್ನು ಗೆಲ್ಲಿಸುವಲ್ಲಿ ವಿಫಲವಾಗಿದ್ದಾರೆ. 2013ರ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಸೋತಿದ್ದ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್ ಅವರು 2016ರ ಉಪ ಚುನಾವಣೆಯಲ್ಲಿಯೂ ಸೋಲು ಅನುಭವಿಸಿದ್ದಾರೆ. ಹೆಬ್ಬಾಳದಲ್ಲಿ ಕಾಮಗ್ರೆಸ್ ಸೋಲಿಗೆ ಕಾರಣಗಳೇನು? ಚಿತ್ರಗಳಲ್ಲಿ ನೋಡಿ....
ಕಾರಣ 1 : ಅಭ್ಯರ್ಥಿ ಆಯ್ಕೆಯ ಗೊಂದಲ
ಹೆಬ್ಬಾಳ ಕ್ಷೇತ್ರದ ಟಿಕೆಟ್ಗಾಗಿ ಭೈರತಿ ಸುರೇಶ್, ರೆಹಮಾನ್ ಷರೀಫ್, ಎಚ್.ಎಂ.ರೇವಣ್ಣ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ಗೆ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಅಂತಿಮ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಪಕ್ಷದ ಸೋಲಿಗೆ ಪ್ರಮುಖ ಕಾರಣವಾಯಿತು.
ಕಾರಣ 2 : ಬಿಜೆಪಿಯ ಬಿರುಸಿನ ಪ್ರಚಾರ
ಹೆಬ್ಬಾಳ ಟಿಕೆಟ್ ವಿಷಯದಲ್ಲಿ ಬಿಜೆಪಿಯೂ ಸ್ವಲ್ಪ ಗೊಂದಲ ಮಾಡಿಕೊಂಡಿತು. ಆದರೆ, ವೈ.ನಾರಾಯಣಸ್ವಾಮಿ ಅವರು ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಪಕ್ಷ ಬಿರುಸಿನ ಪ್ರಚಾರ ನಡೆಸಿತು. ಕೇಂದ್ರ ಸಚಿವ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರ ಒಂದು ವಾರಕ್ಕೂ ಹೆಚ್ಚು ಕಾಲ ಹೆಬ್ಬಾಳದಲ್ಲಿಯೇ ಇದ್ದು, ಪ್ರಚಾರ ನಡೆಸಿದರು. ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿ ಅಭ್ಯರ್ಥಿಯನ್ನು ಗೆಲ್ಲಿಸಿದರು.
ಕಾರಣ 3 : ಬಂಡವಾಳ ಹೂಡಿಕೆದಾರರ ಸಮಾವೇಶ
ಫೆಬ್ರವರಿ 3 ರಿಂದ 5ರ ತನಕ ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಒಂದು ರೀತಿಯಲ್ಲಿ ಹೆಬ್ಬಾಳ ಚುನಾವಣೆ ಮೇಲೆ ಪರಿಣಾಮ ಬೀರಿತು. ಸಮಾವೇಶದ ತಯಾರಿಯಲ್ಲಿ ತೊಡಗಿದ ಬೆಂಗಳೂರು ನಗರ ವ್ಯಾಪ್ತಿಯ ಸಚಿವರು ನಾಲ್ಕು ದಿನಗಳ ಕಾಲ ಹೆಬ್ಬಾಳ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ.
ಕಾರಣ 4 : ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ
ಮೂರು ಕ್ಷೇತ್ರಗಳ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯ ಚುನಾವಣಾ ಆಯೋಗ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಘೋಷಣೆ ಮಾಡಿತು. ಇದರಿಂದಾಗಿ ಪಕ್ಷದ ನಾಯಕರು ರಾಜ್ಯದ ತುಂಬಾ ಪ್ರವಾಸ ಮಾಡಬೇಕಾಗಿ ಬಂದಿತು. ಇದರಿಂದ ಹೆಬ್ಬಾಳ ಕ್ಷೇತ್ರವನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು.
ಕಾರಣ 5 : ನಾಯಕರ ನಡುವಿನ ಅಸಮಾಧಾನ
ಹೆಬ್ಬಾಳ ಕ್ಷೇತ್ರದ ಟಿಕೆಟ್ ಪಡೆಯಲು ಭೈರತಿ ಸುರೇಶ್, ರೆಹಮಾನ್ ಷರೀಫ್, ಎಚ್.ಎಂ.ರೇವಣ್ಣ ನಡುವೆ ಪೈಪೋಟಿ ನಡೆದಿತ್ತು. ಟಿಕೆಟ್ ಕೈ ತಪ್ಪಿದ ನಂತರ ಭೈತರಿ ಸುರೇಶ್ ಮತ್ತು ಎಚ್.ಎಂ.ರೇವಣ್ಣ ಅವರು ಚುನಾವಣೆಯಿಂದ ದೂರ ಉಳಿದರು. ನಾಯಕರ ನಡುವಿನ ಈ ಅಸಮಾಧಾನ ಚುನಾವಣೆ ಮೇಲೆ ಪ್ರಭಾವ ಬೀರಿತು. ಕಾಂಗ್ರೆಸ್ಗೆ ಸೋಲು ಉಂಟಾಯಿತು.
ಕಾರಣ 6 : ವಾಚ್ ವಿವಾದ ಪಕ್ಷವನ್ನು ಸೋಲಿಸಿತು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಹ್ಯೂಬ್ಲೋಟ್' ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಕಟ್ಟುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆ ಉಂಟಾಯಿತು. ವಾಚ್ ಕುರಿತ ಆರೋಪ ಪ್ರತ್ಯಾರೋಪಗಳು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದವು.
ಕಾರಣ 7 : ಬೆನ್ನಿಗೆ ನಿಂತ ಹಿಂದಿನ ಚುನಾವಣೆ ಫಲಿತಾಂಶ
ಹೆಬ್ಬಾಳ ಚುನಾವಣೆಯ ಗೆಲುವಿನಲ್ಲಿ ಬಿಜೆಪಿಗೆ ಹಿಂದಿನ ಚುನಾವಣಾ ಫಲಿತಾಂಶವೂ ಸಹಾಯ ಮಾಡಿದೆ. ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಅವರ ಪರಮಾಪ್ತರಾಗಿದ್ದ ಜಗದೀಶ್ ಕುಮಾರ್ ಅವರಿಗೆ 2013ರ ಚುನಾವಣೆಯಲ್ಲಿ ಬಿಜೆಪಿ ಹೆಬ್ಬಾಳ ಕ್ಷೇತ್ರದಿಂದ ಟಿಕೆಟ್ ನೀಡಿತ್ತು. 38,162 ಮತಗಳನ್ನು ಪಡೆದು ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಉತ್ತಮ ಕೆಲಸಗಳನ್ನು ಮಾಡಿದ್ದರು. ಇದು ಉಪ ಚುನಾವಣೆಯಲ್ಲಿಯೂ ಸಹಾಯಕ್ಕೆ ಬಂದಿದ್ದು ವೈ.ನಾರಾಯಣಸ್ವಾಮಿ ಜಯಗಳಿಸಿದ್ದಾರೆ. [ಚಿತ್ರ : ವೈ.ಎ.ನಾರಾಯಣಸ್ವಾಮಿ]