ಅತ್ತಿಬೆಲೆ ಕೈಗಾರಿಕೆಯಲ್ಲಿ ಅಗ್ನಿ ಅನಾಹುತ: ರೊಚ್ಚಿಗೆದ್ದ ಸಾರ್ವಜನಿಕರಿಂದ ಪ್ರತಿಭಟನೆ
ಬೆಂಗಳೂರು, ಸೆ. 24 : ಆನೇಕಲ್ ಬಳಿ ಅತ್ತಿಬೆಲೆಯಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅತ್ತಿಬೆಲೆಯ ಲೇಕ್ ಕೆಮಿಕಲ್ ಕಂಪನಿಯಲ್ಲಿ ಸಿಲಿಂಡರ್ ಸ್ಫೋಟದಿಂದ ಈ ಅವಘಡ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ದಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಗ್ನಿ ಅವಘಡದಿಂದ ದಟ್ಟ ಹೊಗೆ ಬರುತ್ತಿದ್ದು, ಕಾರ್ಖಾನೆ ಸಮೀಪದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಈ ಹಿಂದೆ ಸಹ ಇದೇ ಕಂಪನಿಯ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪುನಃ ಅಗ್ನಿ ಅವಘಡ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಸಮೀಪ ಸಾವಿರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಸಿಲಿಂಡರ್ ಸ್ಫೋಟಿಸುತ್ತಿದ್ದಂತೆ ಕಾರ್ಖಾನೆ ನೌಕರರು ಹೊರಗೆ ಓಡಿ ಬಂದಿದ್ದಾರೆ. ಆದರೂ ಏಳು ಮಂದಿ ಗಾಯಗೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಮೃತಪಟ್ಟವರ ಬಗ್ಗೆ ಇನ್ನೂ ಪೊಲೀಸರು ಖಚಿತ ಪಡಿಸಿಲ್ಲ. ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಬೋರ್ವೆಲ್ಗೆ ರಾಸಾಯನಿಕ: ಕಾರ್ಖಾನೆಯೊಳಗೆ ರಾಸಾಯನಿಕ ವಸ್ತುಗಳು ಬೆಂಕಿಗೆ ಅಹುತಿಯಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಾಸಾಯನಿಕ ವಸ್ತು ಉರಿಯುತ್ತಿರುವ ಪರಿಣಾಮ ಇನ್ನೂ ತಹಬಂದಿಗೆ ತರಲಾಗುತ್ತಿಲ್ಲ. ಇದರ ನಡುವೆ ಸಾವಿರಾರು ಮಂದಿ ಕಾರ್ಖಾನೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪದೇ ಪದೇ ಕಂಪನಿಯಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದೆ. ಕೆಮಿಕಲ್ ನೀರನ್ನು ರೈತರ ಬೋರ್ವೆಲ್ಗಳಲ್ಲಿ ( ತೆರೆದ ಬೋರ್ವೆಲ್ ) ಬಿಟ್ಟು ಪರಿಸರ ನಾಶ ಮಾಡುತ್ತಿದ್ದಾರೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಎರಡನೇ ಬಾರಿ ಅವಘಡ ಸಂಭವಿಸುತ್ತಿದ್ದು, ಜೀವಗಳ ಜತೆ ಕಂಪನಿ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನೂರಾರು ಜನ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Recommended Video
ದುರಂತದ ಮೇಲೆ ದುರಂತ: ಯಾಕೋ ಮೈಸೂರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ವರದಿಯಾದ ಬಳಿಕ ರಾಜ್ಯದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಲೇ ಇವೆ. ಆಡಿ ಕಾರಿನಲ್ಲಿ ಅಪಘಾತಕ್ಕೀಡಾಗಿ ಏಳು ಮಂದಿ ಸಾವನ್ನಪ್ಪಿದ್ದರು. ಅದು ಮಾಸುವ ಮುನ್ನವೇ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ನಡೆದ ಅಪಘಾತ ಪ್ರಕರಣ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿತ್ತು. ಇದಾಗಿ ಕೆಲವೇ ದಿನಗಳ ನಂತರ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆಗೆ ಒಳಗಾಗಿದ್ದರು. ಇದರ ಬಿಸಿ ಆರುವ ಮುನ್ನವೇ ದೇವರ ಚಿಕ್ಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಸಜೀವ ದಹನಗೊಂಡಿದ್ದರು. ಇದಾದ ಮರು ದಿನವೇ ಚಾಮರಾಜಪೇಟೆಯಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಜೀವನ್ಮರಣದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದಾಗಿ ಇನ್ನೂ 24 ತಾಸು ಮುಗಿದಿಲ್ಲ, ಅತ್ತಿಬೆಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.