ರಾಜ್ಯದಲ್ಲಿ ಮತ್ತೆರಡು ಕೋವಿಡ್ ಕೇಸ್ ದೃಢ, ಸೋಂಕಿತರ ಸಂಖ್ಯೆ 64
ಬೆಂಗಳೂರು, ಮಾರ್ಚ್ 27: ಕರ್ನಾಟಕದಲ್ಲಿ ಮತ್ತೆರಡು ಕೊರೊನಾ ವೈರಸ್ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 64ಕ್ಕೆ ಏರಿದೆ. ಈ ಬಗ್ಗೆ ಖುದ್ದು ಸರ್ಕಾರವೇ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
63ನೇ ಕೇಸ್ ಹಿನ್ನೆಲೆ
63ನೇ ವ್ಯಕ್ತಿ ದಾವಣಗೆರೆ ಮೂಲದ ನಿವಾಸಿ ಎಂದು ತಿಳಿದು ಬಂದಿದೆ. ಮಾರ್ಚ್ 18ರಂದು ಫ್ರಾನ್ಸ್ ನಿಂದ ಬೆಂಗಳೂರಿಗೆ ಬಂದಿದ್ದ ಈ ವ್ಯಕ್ತಿಯಲ್ಲಿ ಸೋಂಕು ದೃಢವಾಗಿದೆ. ದಾವಣಗೆರೆ ಆಸ್ಪತ್ರೆಯಲ್ಲಿ ಸದ್ಯ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!
''63ನೇ ಸೋಂಕಿತ ವ್ಯಕ್ತಿಯು ಮಾರ್ಚ್ 18ರಂದು ಫ್ರಾನ್ಸ್ ಪ್ರಸವಾದಿಂದ ಬೆಂಗಳೂರಿಗೆ ಹಿಂದುರಿಗಿದ್ದ. ಮಾರ್ಚ್ 25ರಂದು ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲಾಗಿದ್ದರು. ಇಂದು #Covid19 ಸೋಂಕು ತಗುಲಿರುವುದು ಖಚಿತವಾಗಿದೆ.'' ಎಂದು ಶ್ರೀರಾಮುಲು ಮಾಹಿತಿ ನೀಡಿದ್ದಾರೆ.
63ನೆ ಸೋಂಕಿತ ವ್ಯಕ್ತಿಯು ಮಾರ್ಚ್ 18ರಂದು ಫ್ರಾನ್ಸ್ ಪ್ರವಾಸದಿಂದ ಬೆಂಗಳೂರಿಗೆ ಹಿಂದುರಿಗಿದ್ದ. ಮಾರ್ಚ್ 25ರಂದು ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲಾಗಿದ್ದರು. ಇಂದು #Covid19 ಸೋಂಕು ತಗುಲಿರುವುದು ಖಚಿತವಾಗಿದೆ.
— B Sriramulu (@sriramulubjp) March 27, 2020
64ನೇ ಕೇಸ್ ಹಿನ್ನೆಲೆ
ದಕ್ಷಿಣ ಕನ್ನಡ ಜಿಲ್ಲೆಯ 21 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದುಬೈಗೆ ಹೋಗಿದ್ದ ವ್ಯಕ್ತಿ ಮಾರ್ಚ್ 22 ರಂದು ಭಾರತಕ್ಕೆ ವಾಪಸ್ ಆಗಿದ್ದರು. ಇಂದು ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ಹೊರಬಿದ್ದಿದೆ. ಈ ಮೂಲಕ ಇಂದು ಒಂದೇ ದಿನ ಒಟ್ಟು 9 ಜನರಲ್ಲಿ ಕೊವಿಡ್ 19 ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ಶ್ರೀರಾಮುಲು 'ಕರ್ನಾಟಕದಲ್ಲಿ ಇದುವರೆಗೆ 64 ವ್ಯಕ್ತಿಗಳಲ್ಲಿ #COVID19 ಸೋಂಕು ಖಚಿತವಾಗಿದ್ದು, ನಾಗರೀಕರು ಕಡ್ಡಾಯವಾಗಿ ಮನೆಯಲ್ಲಿದ್ದು ಶುಚಿತ್ವ ಪಾಲಿಸಬೇಕು ಎಂದು ವಿನಂತಿಸುತ್ತೇನೆ. ನೆನಪಿಡಿ, ಎಲ್ಲಾ ಮುಂಜಾಗೃತಾ ಕ್ರಮ ಕೈಗೊಂಡರೂ, ಬ್ರಿಟನ್ನಿನ ಪ್ರಧಾನಿಯನ್ನು ಈ ಸೋಂಕು ಬಿಡಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿಯೆಂದರೆ ಮನೆಯಲ್ಲಿರುವುದು'' ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಒಟ್ಟು 64 ಸೋಂಕಿತರು ರಾಜ್ಯದಲ್ಲಿ ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಲುಬುರ್ಗಿಯಲ್ಲಿ ಒಬ್ಬ, ಚಿಕ್ಕಬಳ್ಳಾಪುರದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದರು. ಒಟ್ಟು ಐದು ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.