ಕೋವಿಡ್-19: ಬೆಂಗಳೂರಿನಲ್ಲಿ ಸರ್ಕಾರಕ್ಕೆ ಎದುರಾಯಿತು ಹೊಸ ಸವಾಲು!
ಬೆಂಗಳೂರು, ಜು. 08: ಕೋವಿಡ್-19 ಸೋಂಕಿತರಿಗೇ ಚಿಕಿತ್ಸೆ ಕೊಡಲು ರಾಜ್ಯ ಸರ್ಕಾರ ಕಷ್ಟಪಡುತ್ತಿದೆ. ಸೋಂಕಿತರಿಗೆ ಬೆಡ್ ಸಿಗದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸೋಂಕಿತರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ. ಅದಕ್ಕಾಗಿಯೇ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡಲು ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರೋಗ ಲಕ್ಷಣಗಳಿಲ್ಲದವರಿಗೆ ಕೋವಿಡ್ ಕೇರ್ ಸೆಂಟರ್ ಅಥವಾ ಮನೆಯಲ್ಲಿಯೇ ಚಿಕಿತ್ಸೆ ಕೊಡಲು ಸರ್ಕಾರ ಮುಂದಾಗಿದೆ.
ಇದರಿಂದ ಸ್ವಲ್ಪ ಮಟ್ಟಿಗೆ ಕೊರೊನಾ ವೈರಸ್ ಸೋಂಕಿತರ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ದೊಡ್ಡ ಸಮಸ್ಯೆ ಸರ್ಕಾರಕ್ಕೆ ಎದುರಾಗಿದೆ. ಅತ್ಯಂಕ ಸೂಕ್ಷ್ಮ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಎದುರಾಗಿದ್ದು, ಇದನ್ನು ರಾಜ್ಯ ಸರ್ಕಾರ ಕೂಡ ನಿರೀಕ್ಷೆ ಮಾಡಿರಲಿಲ್ಲ ಎನ್ನಲಾಗಿದೆ. ಹೀಗಾಗಿಯೇ ಇವತ್ತು ಬೆಳಗ್ಗೆಯೇ ಸಿಎಂ ನೇತೃತ್ವದಲ್ಲಿ ತುರ್ತು ಸಭೆ ನಡೆದಿದೆ.
ಕೋವಿಡ್ ಚಿಕಿತ್ಸೆ: ಮಂಡ್ಯದಿಂದ ಬಂತು ಆತ್ಮವಿಶ್ವಾಸ ವೃದ್ಧಿಸುವ ಸುದ್ದಿ!
ಚೇತರಿಕೆ ಪ್ರಮಾಣ
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಈ ವರೆಗೆ ಬೆಂಗಳೂರಿನಲ್ಲಿ 11,361 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 155 ಜನರು ಈಗಾಗಲೇ ಕೋವಿಡ್ಗೆ ಬಲಿಯಾಗಿದ್ದಾರೆ. ಒಟ್ಟು 1,810 ಜನರು ಗುಣಮುಖರಾಗಿದ್ದು, ಈಗಲೂ 9,395 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಕೊಟ್ಟಿದೆ.
ಬೆಂಗಳೂರಿನಲ್ಲಿ ಈವರೆಗೆ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,810 ಮಾತ್ರ. ಹೀಗಾಗಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಚೇತರಿಕೆ ಪ್ರಮಾಣ ಕೇವಲ ಶೇಕಡಾ 7.12 ಮಾತ್ರ. ಜೊತೆಗೆ ಮತ್ತೊಂದು ಹೊಸ ಸಮಸ್ಯೆ ಬೆಂಗಳೂರಿನಲ್ಲಿ ಸರ್ಕಾರಕ್ಕೆ ಎದುರಾಗಿದೆ.
ಗರ್ಭಿಣಿಯರಿಗೆ ಸೋಂಕು
ರಾಜ್ಯದ ಎಲ್ಲಡೆ ಗರ್ಭಿಣಿ ಮಹಿಳೆಯರಿಗೆ ಸೋಂಕು ತಗುಲುವುದು ಹೆಚ್ಚಾಗುತ್ತಿದೆ. ಇಚ್ಚೀಚೆಗೆ ಬೆಂಗಳೂರಿನಲ್ಲಿ ಗರ್ಭಿಣಿ ಮಹಿಳೆಗೆ ಸೋಂಕು ತಗುಲಿದ ಬಳಿಕ ಹೆರಿಗೆ ಆಗಿತ್ತು. ಆದರೆ 17 ದಿನಗಳ ಬಳಿಕ ಮಗು ಮೃತಪಟ್ಟಿರುವ ಘಟನೆ ನಡೆದಿತ್ತು. ಇದೀಗ ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಗರ್ಭಿಣಿ ಮಹಿಳೆಯರತ್ತ ಗಮನ ಕೊಟ್ಟಿದೆ.
ಬೆಂಗಳೂರಿನಲ್ಲಿ 60 ಗರ್ಭಿಣಿಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಹೀಗಾಗಿ ಅವರೆಲ್ಲರನ್ನೂ ಇವತ್ತು ಬೇರೆ ಬೇರೆ ಆಸ್ಪತ್ರೆಗಳಿಂದ ವಾಣಿವಿಲಾಸ್ ಹೆರಿಗೆ ಆಸ್ಪತ್ರಗೆ ಕಳುಹಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ. ಅವರು ಸಿಎಂ ಯಡಿಯೂರಪ್ಪ ಅವರೊಂದಿಗೆ ನಡೆಸಿದ ತುರ್ತು ಸಭೆಯ ಬಳಿಕ ಮಾಹಿತಿ ಕೊಟ್ಟಿದ್ದಾರೆ. ಒಟ್ಟು ಸದ್ಯ ಸುಮಾರು 60 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಸರ್ಕಾರದ ವ್ಯವಸ್ಥೆಯಲ್ಲಿ ಇನ್ನೂ ಮೂರು ಆಸ್ಪತ್ರೆಗಳನ್ನು ವಿಶೇಷವಾಗಿ ಮೀಸಲು ಇಡಲಾಗುತ್ತಿದೆ ಎಂದಿದ್ದಾರೆ.
ಕೋವಿಡ್ ಸೋಂಕಿರುತ ಗರ್ಭಿಣಿಯರಿಗೆ ವಿಶೇಷವಾಗಿ ಹೆರಿಗೆ ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಗರ್ಭಿಣಿ ಮಹಿಳೆಯರಿಗಾಗಿ ಒಟ್ಟು 150 ಹಾಸಿಗೆಗಳಿರುವ ಆಸ್ಪತ್ರೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಡಾ. ಸುಧಾಕರ್ ಮಾಹಿತಿ ಕೊಟ್ಟಿದ್ದಾರೆ.
ಸರ್ಕಾರಕ್ಕೆ ಸಲಾವಾಗಿದೆ
ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತದೆ ಎಂಬುದು ಗೊತ್ತಿತ್ತು. ಆದರೆ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ ಎಂದು ಕೊಂಡಿರಲಿಲ್ಲ. ಈ ಪ್ರಮಾಣದಲ್ಲಿ ಹೆಚ್ಚಿಗೆ ಆಗಲಿದೆ ಎಂಬ ಮಾಹಿತಿ ನಮಗೆ ಬಂದಿರಲಿಲ್ಲ ಎಂದು ಬೆಂಗಳೂರು ಕೋವಿಡ್ ಉಸ್ತುವಾರಿ, ಸಚಿವ ಡಾ. ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಅಂದರೆ, ಜುಲೈ ಅಂತ್ಯದಲ್ಲಿ ಬರುತ್ತವೆ ಎಂದುಕೊಂಡಿದ್ದ ಸೋಂಕಿತರ ಪ್ರಮಾಣ ಆರಂಭದಲ್ಲಿ ಈಗಲೇ ಬಂದಿದೆ. ಆದರೂ ಸೋಂಕಿತರಿಗೆ ಚಿಕಿತ್ಸೆ ಕೊಡಲು ಸರ್ಕಾರ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಯಾರೂ ಅಂತಕ ಪಡುವ ಅಗತ್ಯವಿಲ್ಲ ಎಂದು ಡಾ. ಸುಧಾಕರ್ ಭರವಸೆ ಕೊಟ್ಟಿದ್ದಾರೆ.
ಕೋವಿಡ್19: ಗೃಹಸಚಿವರ ಜಿಲ್ಲೆಯಲ್ಲಿ ಚೇತರಿಕೆ ಪ್ರಮಾಣ ಶೇ. 31 ಮಾತ್ರ!
ನವೆಂಬರ್ನಲ್ಲಿ ಮತ್ತಷ್ಟು ಹೆಚ್ಚಳ
ನವೆಂಬರ್ ತಿಂಗಳಿನ ವೇಳೆಗೆ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಡಾ. ಸುಧಾಕರ್ ಅವರು, ಅಧಿಕಾರಿಗಳ ಮಟ್ಟದ ಮಾಹಿತಿಯಲ್ಲಿ ಸೋಂಕು ಹೆಚ್ಚಳ ಆಗುವುದು ಗೊತ್ತಾಗುವುದಿಲ್ಲ. ತಜ್ಞರು ಸೋಂಕು ಹೆಚ್ಚಾಗುವ ಬಗ್ಗೆ ಕಾಲಕಾಲಕ್ಕೆ ಸಲಹೆ ಕೊಡುತ್ತಾರೆ. ಸರ್ಕಾರ ತಜ್ಞರೊಂದಿಗೆ ಜೊತೆ ನಿರಂತರ ಸಮಾಲೋಚನೆಯನ್ನು ಮಾಡುತ್ತಿದೆ. ತಜ್ಞರ ಸೂಚನೆಯ ಆಧಾರದಲ್ಲಿ ಸರ್ಕಾರ ಹಂತ ಹಂತವಾಗಿ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ಕೊಟ್ಟಿದ್ದಾರೆ.