ಐಎಎಸ್ ಪರೀಕ್ಷೆ: 569 ರ್ಯಾಂಕ್ ಪಡೆದ ಚಾಲಕನ ಮಗನಿಗೆ ಕೆಎಸ್ಆರ್ಟಿಸಿ ಸನ್ಮಾನ
ಬೆಂಗಳೂರು ಜೂ.22: ಭಾರತೀಯ ಆಡಳಿತ ಸೇವೆ (ಐಎಎಸ್) ಪರೀಕ್ಷೆಯಲ್ಲಿ 569 ರ್ಯಾಂಕ್ ಬಂದ ಕೆಎಸ್ ಆರ್ ಟಿಸಿ ಬಸ್ ಚಾಲಕರ ಮಗ ಇತರರಿಗೂ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ ಟಿಸಿ)ದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಶ್ಲಾಘಿಸಿದ್ದಾರೆ.
ಕೆಎಸ್ಆರ್ ಟಿಸಿಯ ಕಲ್ಯಾಣ ಕರ್ನಾಟಕದಲ್ಲಿರುವ ಬೀದರ್ನ ಭಾಲ್ಕಿ ಘಟಕದಲ್ಲಿ ಬಸ್ ಚಾಲಕರಾಗಿರುವ ಮಾಣಿಕ್ ರಾವ್ ದಂಪತಿ ಪುತ್ರ ಅನುರಾಗ್ ಅವರು ಐಎಎಸ್ ನಲ್ಲಿ 569 ಸ್ಥಾನ ಪಡೆದು ಭಾರತೀಯ ಪೊಲೀಸ್ ಸೇವೆ ಸೇರಲಿದ್ದಾರೆ. ಬುಧವಾರ ಬೆಂಗಳೂರಿನ ಕೆಎಸ್ಆರ್ ಟಿಸಿ ನಿಗಮದಲ್ಲಿ ಅನುರಾಗ್ ಮತ್ತವರ ಪೋಷಕರಿಗೆ ಅನ್ಬುಕುಮಾರ್ ಸನ್ಮಾನಿಸಿ ಮಾತನಾಡಿದರು.
ಯಶೋಗಾಥೆ: SSLCಯಲ್ಲಿ ಜಸ್ಟ್ ಪಾಸ್ ಆಗಿದ್ದ ತುಷಾರ್ ಈಗ ಐಎಎಸ್ ಅಧಿಕಾರಿ
ಸತತ ಪರಿಶ್ರಮ, ನಿರಂತರ ಕಲಿಕೆ, ಶ್ರದ್ಧೆಯಿಂದ ಎಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಿಗಮದ ಚಾಲಕರೊಬ್ಬರ ಪುತ್ರ ಐಎಎಸ್ ಪರೀಕ್ಷೆ
ಉತ್ತೀರ್ಣರಾಗಿ ಪೋಷಕರ ಕನಸು ನನಸು ಮಾಡಿದ್ದಾರೆ. ಅವರ ಈ ಸಾಧನೆ ನಿಗಮವೇ ಹೆಮ್ಮೆ ಪಡುವ ಸಂಗತಿ ಎಂದರು.
ಅಭಿಮಾನದ ಸಂಗತಿ:
ಪುತ್ರನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ನಿಗಮದ ಚಾಲಕ ಮಾಣಿಕ್ ರಾವ್ ದಂಪತಿಗೆ ಅಭಿನಂದನೆಗಳು. ನಿಗಮದ ಚಾಲಕ, ನಿರ್ವಾಹಕರ ಮಕ್ಕಳು ಎಂಜಿನಿಯರಿಂಗ್, ಮೆಡಿಕಲ್, ಐಐಟಿ, ಐಐಎಂ, ಐಎಎಸ್, ಐಪಿಎಸ್, ಸೇನೆ ಸೇರಿದಂತೆ ವಿವಿಧ ಉನ್ನತ ಸ್ಥಾನದಲ್ಲಿದ್ದಾರೆ ಎಂಬುದು ಅಭಿಮಾನದ ವಿಷಯ ಎಂದ ಅವರು, ಅಧಿಕಾರ ವಹಿಸಿಕೊಂಡು ಸಮಾಜ ಪರ ಕಾರ್ಯಗಳಲ್ಲಿ ಅನುರಾಗ್ ಅವರು ತೊಡಗಿಕೊಳ್ಳಲಿ ಎಂದು ಹಾರೈಸಿದರು.
ಕೆಎಸ್ಆರ್ ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಮಾತನಾಡಿ, ನಿಗಮದ ಸಿಬ್ಬಂದಿ ಹಗಲಿರುಳು ಎನ್ನದೆ ಕಾರ್ಯ ನಿರ್ವಹಿಸುತ್ತಾರೆ. ಹೆಚ್ಚಿನ ಸಮಯ ಬಸ್ ಗಳಲ್ಲಿ, ನಿಗಮಗಳಲ್ಲೇ ಕಳೆಯುವ ನಮ್ಮ ಸಿಬ್ಬಂದಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಸಫಲರಾಗಿದ್ದಾರೆ. ಯಾರ ಮಕ್ಕಳೆ ಆಗಲಿ ಅವರಿಗೆ ಶಿಕ್ಷಣ ಕೊಡಿಸುವುದು ಮುಖ್ಯ ಎಂದರು.
ಅನುರಾಗ್ ಸಮಾಜದ ಕೆಳಮಟ್ಟದ ಪ್ರತಿ ಪ್ರಜೆಯ, ನೊಂದರವರ ಧನಿಯಾಗಲಿ. ಅವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕ (ಭದ್ರತಾ ಸಿಬ್ಬಂದಿ ವಿಭಾಗ) ಡಾ.ನವೀನ್ ಭಟ್ ವೈ, ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Recommended Video