ಕೋರ್ಟ್ ಕಟಕಟೆಯಲ್ಲಿ' ಬೆಂಗಳೂರು ಕೋತಿಗಳ ಕಾಟ'
ಬೆಂಗಳೂರು, ಜು. 4: ಬೆಂಗಳೂರು ನಗರ ಜಿಲ್ಲೆಯ ರೌಡಿ ಮಂಗಗಳ ಬಗ್ಗೆ ಹುಷಾರ್. ಸ್ವಲ್ಪ ಯಾಮಾರಿದ್ರೆ ಪ್ರಾಣಕ್ಕೆ ತೊಂದರೆ ಕೊಡುತ್ತವೆ. ಬೆಂಗಳೂರು ನಗರದಲ್ಲಿ ಕೋತಿಗಳಿಂದ ಜನ ಸಾಮಾನ್ಯರು ತೊಂದರೆಗೆ ಒಳಗಾದ 56 ಪ್ರಕರಣ ವರದಿಯಾಗಿವೆ.
ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಇಂತಹ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. 2018 ರಿಂದ ಈವರೆಗೆ 56 ಕೋತಿಗಳಿಂದ ಜನರು ತೊಂದರೆಗೆ ಒಳಗಾಗಿರುವ ಪ್ರಕರಣಗಳು ದಾಖಲಾಗಿವೆ. ಮಂಗಗಳಿಂದ ತೊಂದರೆಗೆ ಅನುಭವಿಸಿದ ಜನರು ನೀಡಿರುವ ದೂರನ್ನು ಆಧರಿಸಿ ಸಂಗ್ರಹಿಸಿರುವ ಅಂಶಗಳನ್ನು ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದೆ.
39 ಮಂಗಗಳ ಮಾರಣಹೋಮ ಪ್ರಕರಣಕ್ಕೆ ಟ್ವಿಸ್ಟ್: ಐವರು ಪೊಲೀಸ್ ವಶಕ್ಕೆ
ಇನ್ನು ಮಂಗಗಳಿಂದ ಜನರಿಗೆ ಸಮಸ್ಯೆ ಉಂಟಾದರೆ ಅದನ್ನು ಸಂಬಂಧ ಪಟ್ಟ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ದೂರನ್ನು ಆಧರಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುವ ಮಹತ್ವದ ಆದೇಶವನ್ನು 2010 ರಲ್ಲೇ ಹೊರಡಿಸಲಾಗಿದೆ. ಅದರ ಪ್ರಕಾರ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ಜನರಿಗೆ ತೊಂದರೆ ಕೊಡುವ ಮಂಗಗಳ ಮೇಲೆ ಕ್ರಮ ಜರುಗಿಸಬೇಕು. ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಬರುವ ಮಂಗಗಳನ್ನು ಸ್ಥಳೀಯ ಮಂಗಗಳು ಬಿಟ್ಟು ಕೊಡುವುದಿಲ್ಲ. ಕೋತಿಗಳ ಕೂಡ ತನ್ನ ಪ್ರಾಂತ್ಯವನ್ನು ಗುರುತಿಸಿಕೊಂಡಿರುತ್ತವೆ. ಅಪ್ಪಿ ತಪ್ಪಿ ಗಡಿ ದಾಡಿದರೆ ಇತರೆ ಮಂಗಗಳು ಸಹಿಸುವುದಿಲ್ಲ. ಇದನ್ನು ಮನಗೊಂಡಿದ್ದ ಸರ್ಕಾರ ಶಿವಮೊಗ್ಗದಲ್ಲಿ ಮಂಗಗಳಿಗಾಗಿ ವಿಶೇಷ ಪಾರ್ಕ ರಚನೆ ಮಾಡಲು 170 ಎಕರೆ ಜಾಗ ಗುರುತಿಸಿದ್ದು, ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದೆ. ಜನರಿಗೆ ತೊಂದರೆ ಕೊಡುವ ಮಂಗಗಳ ವರ್ತನೆ, ಅವನ್ನು ಹಿಡಿದು ಚಿಕಿತ್ಸೆ ಕೊಡಿಸಿ ಅರಣ್ಯ ಕ್ಕೆ ಬಿಡುವ ಬಗ್ಗೆ ಪಶು ವೈದ್ಯರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವಾರ ಹಾಸನದಲ್ಲಿ 38 ಮಂಗಗಳಿಗೆ ವಿಷಪ್ರಾಶನ ಮಾಡಿ ಸಾಹಿಸಿದ್ದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಘಟನೆ ಸಂಬಂಧ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಅರ್ಜಿ ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಬೆಂಗಳೂರು ನಗರದಲ್ಲಿ ಮಂಗಗಳ ಕಾಟದ ಬಗ್ಗೆ ವರದಿ ಸಲ್ಲಿಸಿತು. ಈ ಹಿಂದೆ
ಬೆಂಗಳೂರು ನಗರ ಜಿಲ್ಲೆಯ ಜನರಿಗೆ ಮಂಗಗಳ ಕಾಟದ ಬಗ್ಗೆ ಬಿ.ಎಸ್. ರಾಧಾನಂದನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮಂಗಗಳಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ದೆಹಲಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿತ್ತು.
ವಿವಾದಿತ ಮಂಗ ಹಿಡಿಯಲು ತಯಾರಿ: ಬೆಂಗಳೂರು ನಗರದಲ್ಲಿ ಜನರಿಗೆ ಸಮಸ್ಯೆ ಉಂಟು ಮಾಡಿರುವ 56 ಪ್ರಕರಣಗಳ ಮಂಗಗಳನ್ನು ಹಿಡಿದು ಬೇರಡೆ ಬಿಡುವ ಸಂಬಂಧ ವಲಯ ಅರಣ್ಯ ಅಧಿಕಾರಿಗಳು ಆಯಾ ವಿಭಾಗದ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯ ಉಪ ವಿಭಾಗದ ಅಧಿಕಾರಿಗಳು ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ ಮನವಿ ನೀಡಿದ್ದು, " ತೊಂದರೆ ಉಂಟು ಮಾಡುತ್ತಿರುವ ಮಂಗಗಳನ್ನು ಹಿಡಿದು ಬೇರಡೆ ವರ್ಗಾಯಿಸಲು ಅನುಮತಿ ನೀಡುವಂತೆ ಕೋರಿದ್ದಾರೆ.
ದಕ್ಷಣ ಭಾರತಕ್ಕಿಂತಲೂ ಉತ್ತರ ಭಾರತದಲ್ಲಿ ಮಂಗಗಳ ಕಾಟ ಜಾಸ್ತಿ. ಅದರಲ್ಲೂ 2019 ರಲ್ಲಿ ಕೋತಿಗಳ ಕಾಟಕ್ಕೆ ಬೇಸತ್ತ ಹಿಮಾಚಲ ಪ್ರದೇಶ ಸರ್ಕಾರ ಬೆಳೆ ನಾಶ ಮಾಡಿ ಜನರಿಗೆ ತೊಂದರೆ ಕೊಡುವ ಮಂಗಗಳನ್ನು ಸಾಹಿಸಲು ಅನುಮತಿ ನೀಡಿತ್ತು. ಕಾಡು ನಾಶವಾದಂತೆ ಮಂಗಗಳು ನಾಡನ್ನು ಆರಿಸಿ ಬರುತ್ತಿವೆ. ಆಹಾರಕ್ಕಾಗಿ ನಗರ ಪ್ರದೇಶದಲ್ಲಿ ಪರದಾಡುವ ಮಂಗಗಳು, ಮನೆಗಳಿಗೆ ದಾಳಿ ಮಾಡುತ್ತವೆ. ಮಾತ್ರವಲ್ಲ ರಸ್ತೆ ಬದಿ ಆಹಾರಕ್ಕಾಗಿ ಸಂಚರಿಸುವಾಗ ಅಪಘಾತಕ್ಕೆ ಈಡಾಗಿ ಕೋತಿಗಳು ಸಾವನ್ನಪ್ಪುತ್ತಿರುವ ಸಂಖ್ಯೆ ಗಣನೀಯವಾಗಿ ಭಾರತದಲ್ಲಿ ಹೆಚ್ಚುತ್ತಿರುವುದು ಸಮೀಕ್ಷೆಯಿಂದ ಹೊರ ಬಂದಿತ್ತು.
Recommended Video