18 ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಇಲ್ಲ, ಕೊರೊನಾ ಪರಿಸ್ಥಿತಿಗೆ ಸಿಲುಕಿ ವ್ಯಕ್ತಿ ಸಾವು
ಬೆಂಗಳೂರು, ಜೂನ್ 30: ಕೊರೊನಾ ವೈರಸ್ ಮಹಾಮಾರಿಯ ಕಾಟ ಹೆಚ್ಚಿರುವ ಕಾರಣ, ಇತರೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಹಾಸಿಗೆ ಇಲ್ಲ, ಐಸಿಯು ಚಿಕಿತ್ಸೆ ಸಾಧ್ಯವಿಲ್ಲ ಎಂದು ಹೇಳಿ ತುರ್ತು ಪರಿಸ್ಥಿತಿ ಎಂದು ಬಂದರೂ ವಾಪಸ್ ಕಳುಹಿಸಲಾಗುತ್ತಿದೆ.
ಇಂತಹ ಪರಿಸ್ಥಿತಿಗೆ ಸಿಲುಕಿ 52 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಲಿಕಾನ್ ಸಿಟಿಯಲ್ಲಿರುವ ಸುಮಾರು 18 ಆಸ್ಪತ್ರೆಗಳಿಗೆ ರೋಗಿಯನ್ನು ಕರೆದುಕೊಂಡು ತಿರುಗಾಡಿದರೂ, ಯಾವ ಆಸ್ಪತ್ರೆಯವರು ದಾಖಲಿಸಿಕೊಂಡು ಚಿಕಿತ್ಸೆ ನೀಡಲಿಲ್ಲ.
ಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆ
ಬದುಕಿಸುವ ಅವಕಾಶ ಇದ್ದರೂ, ಕೊರೊನಾ ಪರಿಸ್ಥಿತಿಗೆ ಸಿಲುಕಿ ಆಸ್ಪತ್ರೆಗಳು ನಿರ್ಲಕ್ಷ್ಯ ಮಾಡಿವೆ. ಎಷ್ಟೇ ಪ್ರಯತ್ನ ಪಟ್ಟರೂ ಆತನನ್ನು ಉಳಿಸಿಕೊಳ್ಳಲು ಕುಟುಂಬದವರಿಂದ ಸಾಧ್ಯವಾಗಲಿಲ್ಲ. ಮುಂದೆ ಓದಿ...
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಮನ್
ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 50 ವರ್ಷದ ಅಮನ್ ಎಂಬ ವ್ಯಕ್ತಿಗೆ ಕೊರೊನಾ ರೋಗಲಕ್ಷಣಗಳು ಕಂಡು ಬಂದಿದೆ. ಬೆಂಗಳೂರಿನ ಹಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸುತ್ತಿದರೂ ಯಾವ ಆಸ್ಪತ್ರೆಯೂ ರೋಗಿಗೆ ಚಿಕಿತ್ಸೆ ನೀಡಲಿಲ್ಲ ಎಂದು ಸೋದರಳಿಯ ಇಂಡಿಯಾ ಟುಡೇ ಮಾಧ್ಯಮಕ್ಕೆ ಘಟನೆ ಬಗ್ಗೆ ವಿವರಿಸಿದ್ದಾರೆ.
ಹಾಸಿಗೆ ಸಮಸ್ಯೆಯಿಂದ ದಾಖಲಿಸಿಕೊಂಡಿಲ್ಲ
ಶನಿವಾರ ಬೆಳಿಗ್ಗೆಯಿಂದ ಬೆಂಗಳೂರು ನಗರದಲ್ಲಿರುವ ಸುಮಾರು 18 ಆಸ್ಪತ್ರೆಗಳಿಗೆ ರೋಗಿಯನ್ನು ಕರೆದುಕೊಂಡು ಹೋಗಲಾಗಿದೆ. ಆದರೆ, ಹಾಸಿಗೆ ಸಮಸ್ಯೆಯಿಂದ ಯಾವ ಆಸ್ಪತ್ರೆಯಲ್ಲೂ ದಾಖಲಿಸಿಕೊಂಡಿಲ್ಲ. ಒಂದು ವೇಳೆ ಆತನಿಗೆ ಕೊರೊನಾ ಪರೀಕ್ಷೆ ಮಾಡಿದರೂ ಸಹ, ಐಸಿಯು ವಾರ್ಡ್ನಲ್ಲಿ ಚಿಕತ್ಸೆ ನೀಡಬೇಕಾಗುತ್ತದೆ. ಆದರೆ, ಐಸಿಯು ವಾರ್ಡ್ ಇಲ್ಲ ಎಂದು ಆಸ್ಪತ್ರೆಯೊಂದು ಹೇಳಿತ್ತು ಎಂದು ಸೋದರಳಿಯ ತಿಳಿಸಿದ್ದಾರೆ.
ಕೊವಿಡ್-19 ರೋಗಿ ದಾಖಲಿಸಿಕೊಳ್ಳದ್ದಕ್ಕೆ ಆಸ್ಪತ್ರೆಗೆ 77 ಲಕ್ಷ ದಂಡ
ದೊಡ್ಡ ಆಸ್ಪತ್ರೆಗಳು ನಿರಾಕರಣೆ
ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ ದೊಡ್ಡ ಖಾಸಗಿ ಆಸ್ಪತ್ರೆಗಳಾದ ಅಪೊಲೋ, ಫೋರ್ಟಿಸ್, ಮಣಿಪಾಲ್ ಮತ್ತು ಇನ್ನೂ ಹಲವು ಆಸ್ಪತ್ರೆಗಳು ಹಾಸಿಗೆಗಳು ಮತ್ತು ಐಸಿಯುಗಳ ಕೊರತೆಯಿಂದಾಗಿ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ರೋಗಿಯ ಸಂಬಂಧಿ ಹೇಳಿದ್ದಾರೆ. ಎಲ್ಲ ಆಸ್ಪತ್ರೆಗಳಲ್ಲೂ ಒಂದೇ ಕಾರಣ ಹಾಸಿಗೆ ಇಲ್ಲ.
ಮನೆಯಲ್ಲಿಯೇ ಚಿಕಿತ್ಸೆ
ಯಾವ ಆಸ್ಪತ್ರೆಯೂ ದಾಖಲಿಸಿಕೊಳ್ಳದ ಕಾರಣ, ಆತನಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಕುಟುಂಬದವರು ನಿರ್ಧರಿಸಿದರು. ಶನಿವಾರ ಸಂಜೆ ಮನೆಗೆ ಕರೆದುಕೊಂಡು ಹೋಗಿ ಆಕ್ಸಿಜನ್ ವ್ಯವಸ್ಥೆ ಮಾಡಿ ಉಸಿರಾಡಲು ನೆರವು ನೀಡಲಾಯಿತು. ಖಾಸಗಿ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆಯೂ ಮಾಡಲಾಯಿತು. ಆದರೆ, ವರದಿ ಸೋಮವಾರ ಬರುವುದಾಗಿ ಹೇಳಿದ್ದರು. ಆದರೆ, ಭಾನುವಾರ ಸಂಜೆ ರೋಗಿಯ ಪರಿಸ್ಥಿಯಿ ಹದಗೆಟ್ಟಿತ್ತು. ಮತ್ತೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡು ಆಸ್ಪತ್ರೆಗಳ ಬಳಿ ಹೋದರು. ಎಷ್ಟೇ ಮನವಿ ಮಾಡಿಕೊಂಡರು ಹಾಸಿಗೆ ಇಲ್ಲ ಎಂದು ಹೇಳಿ ನಿರಾಕರಿಸಿದರು ಎಂದು ಸೋದಳಿಯ ವಿವರಿಸಿದರು.
ವ್ಯವಸ್ಥೆಗೆ ಸಿಲುಕಿ ಸಾವು
ಅಂತಿಮವಾಗಿ ಬೌರಿಂಗ್ ಆಸ್ಪತ್ರೆಗೆ ಬಹಳ ಗಂಭೀರ ಪರಿಸ್ಥಿತಿಯಲ್ಲಿ ರೋಗಿಯನ್ನು ಕರೆದುಕೊಂಡು ಹೋಗಲಾಯಿತು. ವೆಂಟಿಲೇಟರ್ ಮೂಲಕ ಚಿಕಿತ್ಸೆ ಆರಂಭಿಸಿದ ಹತ್ತು ನಿಮಿಷದಲ್ಲಿ 50 ವರ್ಷದ ಅಮನ್ ಸಾವನ್ನಪ್ಪಿದರು. ನಗರದಲ್ಲಿ ಹಾಸಿಗೆ ಬಿಕ್ಕಟ್ಟು ಉಲ್ಬಣವಾಗಿದೆ, ಆದರೆ, ಸರ್ಕಾರವೂ ಇನ್ನು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮೃತ ರೋಗಿಯ ಸಂಬಂಧಿ ಬೇಸರ ವ್ಯಕ್ತಪಡಿಸಿದ್ದಾರೆ.