ಬಿಬಿಎಂಪಿ ವತಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ ದೇಣಿಗೆ
ಬೆಂಗಳೂರು, ಏಪ್ರಿಲ್ 4: ಕೊರೊನಾ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಬಿಬಿಎಂಪಿಯ ಎಲ್ಲಾ ಸದಸ್ಯರ 3 ತಿಂಗಳ ಗೌರವ ಧನದಿಂದ ಸಂಗ್ರಹಿಸಿದ 50 ಲಕ್ಷ ರುಪಾಯಿಯನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶನಿವಾರ ಸಲ್ಲಿಸಲಾಯಿತು.
ಈ ವೇಳೆ ಮಹಾಪೌರರು, ಉಪ ಮಹಾಪೌರರು, ಆಡಳಿತ, ವಿರೋಧ, ಹಾಗೂ ಜೆ.ಡಿ.ಎಸ್ ಪಕ್ಷದ ನಾಯಕರು ಮುಖ್ಯಮಂತ್ರಿಯನ್ನು ಭೇಟಿಯಾಗಿ ರೂ: 50 ಲಕ್ಷ ಮೊತ್ತದ ಚೆಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮೇಯರ್ ಎಂ ಗೌತಮ್ ಕುಮಾರ್ ಅವರು, ನಗರದಲ್ಲಿ ಊಟದ ವ್ಯವಸ್ಥೆ ಕಲ್ಪಿಸುವಂತೆ 15,000 ನೊಂದಾವಣಿ ಮಾಡಿಕೊಂಡಿದ್ದಾರೆ. ಆ ಸಂಖ್ಯೆ ಪ್ರತಿನಿತ್ಯ ಹೆಚ್ಚುತ್ತಲೇ ಇದೆ. ಈ ಸಂಬಂಧ ಪಾಲಿಕೆ 8 ವಲಯ ಹಾಗೂ ಡಿಸಿಪಿ ಕಛೇರಿಗಳಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ. ಹೊಯ್ಸಳ ವಾಹನದ ಮೂಲಕ ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಕಟ್ಟಡ ಕಾರ್ಮಿಕರು ಇದ್ದಲ್ಲಿ ಆಹಾರ ಸಹಾಯವಾಣಿ 15524 ಅಥವಾ ಪೊಲೀಸ್ ಇಲಾಖೆ 100ಗೆ ಕರೆ ಮಾಡಿದರೆ ಕೂಡಲೆ ಆಹಾರ ವ್ಯವಸ್ಥೆ ಕಲ್ಪಿಸಲಾಗವುದು ಎಂದು ಹೇಳಿದರು.
ಬೇರೆ ಕಡೆಯಿಂದ ಕೆಲಸ ಮಾಡಲು ಬಂದಿರುವ ಕಟ್ಟಡ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಅವರ ಊರುಗಳಿಗೆ ಹೂಗುವಂತೆ ಒತ್ತಾಯ ಮಾಡಬಾರದು. ಇರುವ ಸ್ಥಳದಲ್ಲೇ ಊಟ ಹಾಗೂ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಒಂದು ವೇಳೆ ಮಾಡದಿದ್ದಲ್ಲಿ, ಅವರಿಗೆ ನೀಡಿರುವ ಕಟ್ಟಡ ನಿರ್ಮಾಣ ನಕ್ಷೆಯನ್ನು ಕೂಡಲೆ ಹಿಂಪಡೆದು, ಅಂತಹವರ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.