ದೆಹಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ 5 ವರ್ಷದ ಪೋರ!
ಬೆಂಗಳೂರು, ಮೇ 25: ಹತ್ತತ್ರ ಎರಡು ತಿಂಗಳ ಬಳಿಕ ಭಾರತದಲ್ಲಿ ವಿಮಾನಯಾನ ಆರಂಭಗೊಂಡಿದೆ. ಡೆಡ್ಲಿ ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಘೋಷಣೆಯಾದ್ಮೇಲೆ, ವಿಮಾನ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದೀಗ ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ನಿಯಮಗಳು ಸಡಿಲಗೊಂಡಿದ್ದು, ಇಂದಿನಿಂದ (ಮೇ 25) ದೇಶೀಯ ವಿಮಾನಯಾನ ಸ್ಟಾರ್ಟ್ ಆಗಿದೆ.
Recommended Video
ದೇಶೀಯ ವಿಮಾನಯಾನ ಪುನರಾರಂಭಗೊಳ್ಳುತ್ತಿದ್ದಂತೆಯೇ, ದೆಹಲಿ, ಚೆನ್ನೈ ಸೇರಿದಂತೆ ಹಲವು ಕಡೆಯಿಂದ ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಗುತ್ತಿವೆ.
ದೇಶೀಯ ವಿಮಾನಯಾನ ಆರಂಭ: ಕರ್ನಾಟಕಕ್ಕೆ ಬರುವವರಿಗೆ 'ಈ' ನಿಯಮಗಳು ಕಡ್ಡಾಯ!
ಲಾಕ್ ಡೌನ್ ಘೋಷಣೆಯಾದ್ಮೇಲೆ ದೇಶದ ಹಲವು ಭಾಗಗಳಲ್ಲಿ ಸಿಲುಕಿದ್ದ ಹಲವರು ಇದೀಗ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿದ್ದಾರೆ. ಅದರಂತೆ ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ಸಿಲುಕಿದ್ದ ಐದು ವರ್ಷದ ಪುಟ್ಟ ಪೋರ ಇಂದು ಫ್ಲೈಟ್ ಹತ್ತಿ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ್ದಾನೆ.
ಐದು ವರ್ಷದ ಬಾಲಕ ವಿಹಾನ್ ಶರ್ಮಾ
ಇಂದು ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಮೊದಲ ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರ ಪೈಕಿ ವಿಹಾನ್ ಶರ್ಮಾ ಎಂಬ ಐದು ವರ್ಷ ವಯಸ್ಸಿನ ಪುಟ್ಟ ಪೋರ ಕೂಡ ಒಬ್ಬ. ಕೈಯಲ್ಲಿ 'ಸ್ಪೆಷಲ್ ಕ್ಯಾಟಗರಿ' ಎಂದು ಬೋರ್ಡ್ ಹಿಡಿದುಕೊಂಡು, ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಅಮ್ಮನನ್ನ ಕಾಣಲು ವಿಹಾನ್ ಶರ್ಮಾ ಹಾತೊರೆಯುತ್ತಿದ್ದ. ಮೂರು ತಿಂಗಳಿನಿಂದ ತಾಯಿಯನ್ನು ಕಾಣದ ವಿಹಾನ್ ಶರ್ಮಾ ಇಂದು ಪ್ರೀತಿಯ ಅಮ್ಮನನ್ನು ಕಂಡೊಡನೆ ಭಾವುಕನಾಗಿ ಬಿಗಿದಪ್ಪಿದ ಘಟನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಯಿತು.
ದೆಹಲಿಯ ಅಜ್ಜಿ ಮನೆಗೆ ತೆರಳಿದ್ದ ವಿಹಾನ್ ಶರ್ಮಾ
ದೆಹಲಿಯಲ್ಲಿರುವ ಅಜ್ಜ-ಅಜ್ಜಿಯ ಮನೆಗೆ ವಿಹಾನ್ ಶರ್ಮಾ ತೆರಳಿದ್ದ. ದಿಢೀರ್ ಅಂತ ಲಾಕ್ ಡೌನ್ ಘೋಷಣೆಯಾಗಿದ್ರಿಂದ ಎರಡು ತಿಂಗಳು ಅಜ್ಜ-ಅಜ್ಜಿಯ ಮನೆಯಲ್ಲೇ ವಿಹಾನ್ ಶರ್ಮಾ ಉಳಿಯಬೇಕಾಯಿತು. ಇದೀಗ ದೇಶೀಯ ವಿಮಾನಯಾನ ಆರಂಭಗೊಂಡ ಮೇಲೆ ವಿಹಾನ್ ಶರ್ಮಾ ದೆಹಲಿಯಲ್ಲಿ ಫ್ಲೈಟ್ ಹತ್ತಿ, ಒಬ್ಬನೇ ಎರಡುವರೆ ಗಂಟೆಗಳ ಕಾಲ ಪ್ರಯಾಣ ಮಾಡಿ, ಬೆಂಗಳೂರಿಗೆ ಬಂದು ತಲುಪಿದ್ದಾನೆ.
ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ
ಸ್ಪೆಷಲ್ ಕ್ಯಾಟಗರಿ ಅಡಿಯಲ್ಲಿ ಪ್ರಯಾಣ
ದೇಶೀಯ ವಿಮಾನಯಾನ ಆರಂಭಗೊಳ್ಳುವ ಮಾಹಿತಿ ಲಭಿಸುತ್ತಿದಂತೆಯೇ, ವಿಹಾನ್ ಶರ್ಮಾ ಪೋಷಕರು ಅಧಿಕಾರಿಗಳನ್ನು ಭೇಟಿ ಮಾಡಿದ್ದರು. 'ವಿಶೇಷ ಪ್ರಕರಣ' ಎಂದು ಪರಿಗಣಿಸಿ ವಿಹಾನ್ ಶರ್ಮಾ ಪ್ರಯಾಣಕ್ಕೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದರು. ಪರಿಣಾಮ, 'ಸ್ಪೆಷಲ್ ಕ್ಯಾಟಗರಿ' ಅಡಿಯಲ್ಲಿ ಇವತ್ತು ವಿಹಾನ್ ಶರ್ಮಾ ಬೆಂಗಳೂರಿಗೆ ಬಂದಿಳಿದು ತಾಯಿಯ ಮಡಿಲು ಸೇರಿದ್ದಾನೆ.
ಸಂತಸ ವ್ಯಕ್ತಪಡಿಸಿದ ತಾಯಿ
''ನನ್ನ ಮಗ ಒಬ್ಬನೇ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾನೆ. ಮೂರು ತಿಂಗಳ ಹಿಂದೆ ಅವನು ದೆಹಲಿಗೆ ಹೋಗಿದ್ದ. ಮಗನ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು'' ಎಂದು ವಿಹಾನ್ ಶರ್ಮಾ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.