ಅಮಾನ್ಯೀಕರಣಗೊಂಡ ನೋಟುಗಳ ಹೆಸರಿನಲ್ಲಿ ಖೋಟಾನೋಟು ದಂಧೆ: ಐವರ ಬಂಧನ
ಬೆಂಗಳೂರು, ಅ. 26: ಅಮಾನ್ಯೀಕರಣಗೊಂಡಿರುವ 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳನ್ನು ಜೆರಾಕ್ಸ್ ಮಾಡಿ ಅಕ್ರಮವಾಗಿ ಎಕ್ಸ್ ಚೇಂಜ್ ವಹಿವಾಟು ದಂಧೆ ನಡೆಸುತ್ತಿದ್ದ ಜಾಲವನ್ನು ಗೋವಿಂದಪುರ ಪೊಲೀಸರು ಪತ್ತೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೆ.ಆರ್. ಪುರಂ ಬಟ್ಟೆ ವ್ಯಾಪಾರಿ ಸುರೇಶ್ ಕುಮಾರ್, ರಾಜಾಜಿನಗರದ ಬಟ್ಟೆ ವ್ಯಾಪಾರಿ ರಾಮಕೃಷ್ಣ, ಆನೇಕಲ್ ಮೂಲದ ರೈತ ಮಂಜುನಾಥ್, ಬೆಂಗಳೂರಿನ ಹೊಂಗಸಂದ್ರದ ನಿವಾಸಿ ಬಿಬಿಎಂಪಿ ಗುತ್ತಿಗೆದಾರ ವೆಂಕಟೇಶ್, ಹೊಂಗಸಂದ್ರದ ನಿವಾಸಿ ದಯಾನಂದ್ ಬಂಧಿತ ಆರೋಪಿಗಳು. ಇವರಿಂದ 85 ಲಕ್ಷ ರೂ. ಮೌಲ್ಯದ ಅಮಾನ್ಯೀಕರಣಗೊಂಡಿರುವ ನೋಟುಗಳು ಹಾಗೂ ಐದು ಕೋಟಿ ರೂ. ಮೌಲ್ಯದ ಅಮಾನ್ಯೀಕರಣಗೊಂಡಿರುವ ನೋಟುಗಳ ಜೆರಾಕ್ಸ್ ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ದಂಧೆ: ಅಮಾನ್ಯೀಕರಣಗೊಂಡಿರುವ ನೋಟುಗಳನ್ನು ಕೈ ಬದಲಾವಣೆ ಮಾಡಲು ಎಚ್ಆರ್ಬಿಆರ್ ಬಡಾವಣೆಗೆ ಬಂದಿದ್ದ ಮೂವರ ಬಗ್ಗೆ ಸುಳಿವು ಪಡೆದು ಕಾರ್ಯಾಚರಣೆ ನಡೆಸಿದ ಗೋವಿಂದಪುರ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೂವರ ಬ್ಯಾಗಿನಲ್ಲಿ ಅಮಾನ್ಯೀಕರಣಗೊಂಡಿರುವ ನೋಟುಗಳು ಪತ್ತೆಯಾಗಿದ್ದವು. ಇವರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ಮತ್ತಿಬ್ಬರನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಕೇರಳದ ಕಾಸರಗೋಡಿನ ಕುಂದುಡುಕ್ಕುಂ ನ ಫಾರಂಹೌಸ್ ನಲ್ಲಿ ಸುಮಾರು ಐದು ಕೋಟಿ ರೂ. ಮೊತ್ತದ ಅಮಾನ್ಯೀಕರಣಗೊಂಡಿರುವ ನೋಟುಗಳ ಜೆರಾಕ್ಸ್ ಪ್ರತಿಗಳು ಲಭ್ಯವಾಗಿವೆ. ಸುಮಾರು 24 ಮೂಟೆಗಳಲ್ಲಿ ಅಮಾನ್ಯೀಕರಣಗೊಂಡಿರುವ ನೋಟುಗಳ ಜೆರಾಕ್ಸ್ ಪ್ರತಿಗಳು ಸಿಕ್ಕಿದ್ದು, ಅದರ ಜತೆಗೆ ಅಮಾನ್ಯೀಕರಣಗೊಂಡಿರುವ 35 ಲಕ್ಷ ರೂ. ಹಣ ಸಿಕ್ಕಿದೆ. ಈ ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಮಾನ್ಯೀಕರಣ ನೋಟುಗಳ ವಹಿವಾಟು: ಅಮಾನ್ಯೀಕರಣಗೊಂಡಿರುವ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾವಣೆ ಮಾಡಲು ನಾವು ಬ್ಯಾಂಕ್ ನವರನ್ನೇ ಒಪ್ಪಿಸಿದ್ದೇವೆ. ನಮಗೆ ಅಮಾನ್ಯೀಕರಣ ನೋಟುಗಳು ಬೇಕು ಎಂದು ಒಂದು ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಮುಖಬೆಲೆಯ ಶೇ. 60 ರಷ್ಟು ಹಣ ನೀಡುವ ಅಮಿಷ ಒಡ್ಡುತ್ತಿದ್ದರು. ಇದನ್ನು ನಂಬಿ ಅಮಾನ್ಯೀಕರಣ ನೋಟಿಗೆ ಹುಡುಕಾಡುವರಿಗೆ ಇದೇ ಗ್ಯಾಂಗ್ ನ ಇನ್ನೊಂದು ತಂಡ ಅಮಾನ್ಯೀಕರಣ ನೋಟು ಇರುವ ಬಗ್ಗೆ ಮಾಹಿತಿ ರವಾನಿಸುತ್ತಿತ್ತು. ಅವರಿಂದ ಅಸಲಿ ಹಣ ಪಡೆದು ಅಮಾನ್ಯೀಕರಣ ನೋಟುಗಳ ಜೆರಾಕ್ಸ್ ಪ್ರತಿ ನೀಡಿ ಕಾಣೆಯಾಗುತ್ತಿದ್ದರು. ಹೀಗೆ ಅಮಾನ್ಯೀಕರಣ ನೋಟಿನ ಹೆಸರಿನಲ್ಲಿ ಆರೋಪಿಗಳು ಕೆಲವರಿಗೆ ವಂಚನೆ ಮಾಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೇಶದಲ್ಲಿ ಒಂದು ಸಾವಿರ ಮುಖಬೆಲೆಯ ಹಾಗೂ ಐದನೂರು ಮುಖಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಮಾನ್ಯೀಕರಣ ಮಾಡಿದ್ದರು. ನೋಟು ಅಮಾನ್ಯೀಕರಣದಿಂದ ದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಹಣಕ್ಕಾಗಿ ಜನ ಪರದಾಡಿದ್ದರು. ಆದರೆ, ಅಮಾನ್ಯೀಕರಣಗೊಂಡ ಬಳಿಕ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಾಡುವ ದಂಧೆಗೆ ನಾಂದಿ ಹಾಡಿತ್ತು. ಹಲವು ಬ್ಯಾಂಕ್ ಗಳ ಮ್ಯಾನೇಜರ್ಗಳೇ ಅಮಾನ್ಯೀಕರಣ ನೋಟುಗಳನ್ನು ಬದಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು. ಅಮಾನ್ಯೀಕರಣಗೊಂಡು ವರ್ಷಗಳೇ ಕಳೆದು ಹೋಗಿವೆ. ಇದೀಗ ಅಮಾನ್ಯೀಕರಣಗೊಂಡಿರುವ ನೋಟುಗಳನ್ನು ಜೆರಾಕ್ಸ್ ಮಾಡಿ ಮೋಸ ಮಾಡುವ ಜಾಲ ಸಕ್ರಿಯವಾಗಿದೆ. ಗೋವಿಂದಪುರ ಪೊಲೀಸರು ಇಂತಹ ದೊಡ್ಡ ಜಾಲವನ್ನು ಪತ್ತೆ ಮಾಡಿದ್ದಾರೆ. ಅಮಾನ್ಯೀಕರಣಗೊಂಡಿರುವ ನೋಟುಗಳ ಎಕ್ಸ್ ಚೇಂಜ್ ದಂಧೆ ಮಾಡುತ್ತಿದ್ದ ಐವರು ಆರೋಪಿಗಳು ಸಿಕ್ಕಿಬಿದ್ದಿದ್ದು, ಪೊಲೀಸರ ಕಾರ್ಯವನ್ನು ಪೂರ್ವ ವಿಭಾಗದ ಡಿಸಿಪಿ ಎಸ್. ಡಿ. ಶರಣಪ್ಪ ಶ್ಲಾಘಿಸಿದ್ದಾರೆ.
Recommended Video