ಬೆಂಗಳೂರಿನಲ್ಲಿ ಕುಸಿದು ಬೀಳುವ ಅಪಾಯದಲ್ಲಿವೆ 404 ಶಿಥಿಲ ಕಟ್ಟಡಗಳು!
ಬೆಂಗಳೂರು ಅ. 19: ಸಿಲಿಕಾನ್ ಸಿಟಿಯಲ್ಲಿ ಸುಮಾರು 404 ಹಳೇ ಕಟ್ಟಡಗಳು ಕುಸಿದು ಬೀಳುವ ಅಪಾಯದಲ್ಲಿವೆ. ಹೌದು. ಬೆಂಗಳೂರು ಮಹಾನಗರ ಪಾಲಿಕೆ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ ಇಂತಹ ಆತಂಕಕಾರಿ ಸಂಗತಿ ಹೊರ ಬಿದ್ದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿದ್ದೇ ಕಳೆದ ಒಂದು ತಿಂಗಳಿನಲ್ಲಿ ಏಳಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಕೆಲವಡೆ ಯಾವುದೇ ಪ್ರಾಣಾಪಾಯ ಆಗದಿದ್ದರೂ ಲಕ್ಷಾಂತರ ಮೌಲ್ಯದ ವಸ್ತುಗಳು ಜಖಂ ಆಗಿವೆ. ಕಟ್ಟಡಗಳು ಕುಸಿದು ನೆರೆ ಮನೆಗಳಿಗೆ ಹಾನಿ ಉಂಟಾಗಿವೆ. ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ನೆಲಕ್ಕೆ ಉರುಳಿ ಬಿದ್ದಿತ್ತು. ಅದಾದ ಬಳಿಕ ಬಸವೇಶ್ವರ ನಗರ ಸಮೀಪದ ಕರುಬರಹಳ್ಳಿಯಲ್ಲಿಯಲ್ಲಿ ಬೃಹತ್ ಕಟ್ಟಡ ಕುಸಿದು ಬಿದ್ದಿತ್ತು. ಡೈರಿ ಸರ್ಕಲ್ ಸಮೀಪದ ಮಿಲ್ಕ್ ಕಾಲೋನಿಯಲ್ಲಿ ಮನೆಯೊಂದು ಧರೆಗೆ ಬಿತ್ತು. ಹೀಗೆ ಒಂದಲ್ಲಾ ಒಂದು ಕಡೆ ಹಳೇ ಕಟ್ಟಡಗಳು ಕುಸಿದು ಜನರ ನಿದ್ದೆಗೆಡಿಸಿವೆ.
ಪರಿಷ್ಕೃತ ಸರ್ವೆ:
ಕಳಪೆ ಕಾಮಗಾರಿ ಹಾಗೂ ಅಕ್ರಮವಾಗಿ ಹೆಚ್ಚುವರಿ ಮಹಡಿ ನಿರ್ಮಿಸಿ ಜನರ ಜೀವಕ್ಕೆ ಅಪಾಯ ತಂದೊಡ್ಡಿರುವ ಕಟ್ಟಡಗಳ ಸಮೀಕ್ಷೆ ನಡೆಸಿರುವ ಬೆಂಗಳೂರು ಮಹಾನಗರ ಪಾಲಿಕೆ ಅಪಾಯದಲ್ಲಿರುವ 404 ಕಟ್ಟಡಗಳನ್ನು ಗುರುತಿಸಿದೆ. ಈ ಕಟ್ಟಡಗಳು ಕುಸಿದು ಬೀಳುವ ಅಪಾಯದಲ್ಲಿದ್ದು, ಕಟ್ಟಡಗಳ ಸದೃಢತೆ ಬಗ್ಗೆ ಪರೀಕ್ಷಿಸಿ ವರದಿ ನೀಡಲು ತಜ್ಞ ಇಂಜಿನಿಯರ್ ಗಳಿಗೆ ಸೂಚಿಸಲಾಗಿದೆ. ಇಂಜಿನಿಯರ್ ಗಳು ಕಟ್ಟಡದ ಸದೃಢತೆ ಬಗ್ಗೆ ನೀಡುವ ವರದಿ ಆಧರಿಸಿ 404 ಕಟ್ಟಡಗಳನ್ನು ನೆಲಸಮ ಮಾಡುವ ತೀರ್ಮಾನ ಕೈಗೊಳ್ಳಲಿದೆ.
ರಾಜಧಾನಿಯಲ್ಲಿ ಕಳಪೆ ಹಾಗೂ ಕುಸಿದು ಬೀಳುವ ಹಂತದಲ್ಲಿದ್ದ ಕಟ್ಟಡಗಳ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ 2018 ರಲ್ಲಿಯೇ ಸಮೀಕ್ಷೆ ನಡೆಸಿತ್ತು. ಈ ವೇಳೆ 195 ಕಳಪೆ ಕಟ್ಟಡಗಳನ್ನು ಇಂಜಿನಿಯರ್ಗಳು ಪತ್ತೆ ಮಾಡಿದ್ದರು. ಅಕ್ರಮ ಹಾಗೂ ಕಳಪೆ ಕಟ್ಟಡಗಳನ್ನು ಪತ್ತೆ ಮಾಡುವ ಸರ್ವೆಗೆ ಬೆಂಗಳೂರು ಪಾಲಿಕೆಯ ಕಾರ್ಪೋರೇಟರ್ಗಳೇ ಅಡ್ಡಿ ಪಡಿಸಿದ್ದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತಮ್ಮ ಆಪ್ತರ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡದಂತೆ ಒತ್ತಡ ಹಾಕಿದ್ದರು. ಅಕ್ರಮ ಹಾಗೂ ಕಳಪೆ ಕಟ್ಟಡ ನೆಲಸಮ ಮಾಡುತ್ತಾರೆ ಎಂಬ ಭಯ ಹುಟ್ಟಿಸಿ ಬಹುತೇಕ ಕಟ್ಟಡ ಮಾಲೀಕರಿಂದ ವಸೂಲಿ ಬಾಜಿ ಮಾಡಿ ಬಿಬಿಎಂಪಿ ಅಧಿಕಾರಿಗಳು ಜನರ ಕೆಂಗಣ್ಣಿಗೆ ಗುರಿಯಗಿದ್ದರು. ಅದರ ಪ್ರತಿಫಲ ಇದೀಗ ಜನ ಸಾಮಾನ್ಯರ ಮೇಲೆ ಬಿದ್ದಿದೆ.
ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ ಗುಪ್ತಾ ಅವರ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಂಟು ವಲಯದಲ್ಲಿ 405 ಕಳಪೆ ಕಟ್ಟಡಗಳನ್ನು ಗುರುತಿಸಿದ್ದು, ನೆಲಸಮ ಮಾಡಲು ಚಿಂತನೆ ಮಾಡಲಾಗಿದೆ. ನೆಲಸಮಕ್ಕೂ ಮೊದಲು ಕಟ್ಟಡಗಳ ಸದೃಢತೆ ಬಗ್ಗೆ ಪರೀಕ್ಷಿಸಿ ವರದಿ ಆಧರಿಸಿ ಬಿಬಿಎಂಪಿ ನೆಲಸಮ ಮಾಡಲಿದೆ ಎಂದು ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ಬೇಜವಾಬ್ದಾರಿತನ:
ಬೆಂಗಳೂರಿನಲ್ಲಿ ಶಿಥಿಲ ಕಟ್ಟಡಗಳನ್ನು ಗುರುತಿಸಿ ನೆಲಸಮ ಮಾಡಿ ಸುರಕ್ಷತಾ ಕ್ರಮ ಕೈಗೊಳ್ಳುವುದು ಬಿಬಿಎಂಪಿಯ ಜವಾಬ್ದಾರಿ. . ಬಿಬಿಎಂಪಿ ಕಾಯ್ದೆ ಸೆಕ್ಷನ್ 256 ರ ಪ್ರಕಾರ ಅಪಾಯಕಾರಿ ಕಟ್ಟಡಗಳನ್ನು ನೆಲಸಮ ಮಾಡಿ ಕ್ರಮ ಕೈಗೊಳ್ಳುವ ಅಧಿಕಾರ ಪಾಲಿಕೆ ಆಯುಕ್ತರಿಗೆ ಇದೆ. ಶಿಥಿಲ ವ್ಯವಸ್ಥೆ ತಲುಪಿರುವ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಬೇಕು. ಕೂಡಲೇ ಕಟ್ಟಡಗಳನ್ನು ಸರಿಪಡಿಸಬೇಕು, ಇಲ್ಲವೇ ನೆಲಸಮಾ ಮಾಡಬೇಕು. ಅಕ್ರಮವಾಗಿ ತಲೆಯೆತ್ತಿರುವ ಕಟ್ಟಡ ಹಾಗೂ ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸಲು ಬಿಬಿಎಂಪಿ ಹಾಗೂ ಮುನಿಸಿಪಲ್ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ಇದೆ. ಆದರೆ, ಕಟ್ಟಡಗಳು ಕುಸಿದು ಬಿದ್ದು ಅವಘಡ ಸಂಭವಿಸುತ್ತಿರುವ ವರೆಗೂ ಪಾಲಿಕೆ ಸುಮ್ಮನಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.
ಸರ್ವೆಯಲ್ಲಿ ಪತ್ತೆಯಾಗಿರುವ ಶಿಥಿಲ ಕಟ್ಟಡಗಳ ವಿವರ
ವಲಯ 2018 2021
ದಕ್ಷಿಣ - 33 103
ಪಶ್ಚಿಮ- 34 95
ಪೂರ್ವ - 46 67
ಮಹದೇವಪುರ - 3 24
ರಾಜ ರಾಜೇಶ್ವರಿ ನಗರ - 1 11
ಬೊಮ್ಮನಹಳ್ಳಿ - 0 9
ಯಲಹಂಕ - 60 84
ದಾಸರಹಳ್ಳಿ - 8 4
ಒಟ್ಟು 185 404
Recommended Video