ಕ್ವಾರೆಂಟೈನ್ ಗೆ ವಿರೋಧಿಸಿದ ನಾಲ್ವರು ವಿದೇಶಿಗರಲ್ಲಿ ಕೊರೊನಾ ವೈರಸ್!
ಬೆಂಗಳೂರು, ಮೇ.26: ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಕ್ವಾರೆಂಟೈನ್ ಗೆ ಒಳಪಡಲು ನಿರಾಕರಿಸಿದ 30 ಜನರ ಪೈಕಿ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ.
ಮಾಲ್ಡೀವ್ಸ್ ಮತ್ತು ಜಕಾರ್ತಾದಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 30 ಜನರು ಆಗಮಿಸಿದ್ದರು. ಸರ್ಕಾರದ ನಿಯಮದಂತೆ ಕ್ವಾರೆಂಟೈನ್ ನಲ್ಲಿ ಇರಲು ನಿರಾಕರಿಸಿದ 30 ಮಂದಿ ವಿಮಾನ ನಿಲ್ದಾಣದಲ್ಲಿಯೇ ಪ್ರತಿಭಟನೆಯನ್ನೂ ನಡೆಸಿದ್ದರು.
ಬಿಗ್ ನ್ಯೂಸ್; ಸರ್ಕಾರಿ ಕ್ವಾರಂಟೈನ್ ನಿಯಮ ಬದಲಿಸಿದ ಕರ್ನಾಟಕ
ಏರ್ ಪೋರ್ಟ್ ನಲ್ಲಿ ಪ್ರತಿಭಟನೆ ನಡೆಸಿದ ಜನರ ಜೊತೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಮನವೊಲಿಸಿ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವಂತೆ ಸೂಚಿಸಿದರು. ತದನಂತರದಲ್ಲಿ 30 ಜನರನ್ನು ಕ್ವಾರೆಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು.
30 ಜನರ ಪೈಕಿ ನಾಲ್ವರಿಗೆ ಕೊರೊನಾ ವೈರಸ್:
ಮಾಲ್ಡೀವ್ಸ್ ಹಾಗೂ ಜಕಾರ್ತಾದಿಂದ ಬೆಂಗಳೂರಿಗೆ ಆಗಮಿಸಿದ 30 ಜನರ ರಕ್ತ ಮತ್ತು ಗಂಟಲು ಮಾದರಿಯನ್ನು ಪಡೆದುಕೊಳ್ಳಲಾಗಿತ್ತು. ವೈದ್ಯಕೀಯ ತಪಾಸಣೆ ಬಳಿಕ ನಿನ್ನೆ ಬಂದ ವರದಿಯಲ್ಲಿ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನು, ಈ 30 ಮಂದಿ ಪ್ರಯಾಣಿಕರು ಒಂದೇ ವಿಮಾನದಲ್ಲಿ ಆಗಮಿಸಿದ್ದು ಒಂದೇ ಶೌಚಾಲಯವನ್ನು ಬಳಸಿದ್ದು ಪ್ರಾಥಮಿಕ ಸಂಪರ್ಕದಲ್ಲಿ ಇರುವ ಉಳಿದ ಪ್ರಯಾಣಿಕರಿಗೂ ಸೋಂಕು ತಗಲಿರುವು ಆತಂಕ ಎದುರಾಗಿದೆ. ಈ ಹಿನ್ನೆಲೆ ಮತ್ತೊಮ್ಮೆ ಬಾಕಿ ಉಳಿದ 26 ಮಂದಿಯ ರಕ್ತ ಮತ್ತು ಗಂಟಲು ಮಾದರಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.