ಮಸೀದಿಗಳಿಂದ 36,000 ದೇಗುಲಗಳನ್ನು ವಾಪಸ್ ಪಡೆಯಲಾಗುವುದು: ಈಶ್ವರಪ್ಪ
ಬೆಂಗಳೂರು, ಮೇ 27: ಮಂದಿರ- ಮಸೀದಿ ವಿವಾದದ ಕುರಿತು ಹೇಳಿಕೆ ನೀಡಿರುವ ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, "ಮಸೀದಿ ಕಟ್ಟಲು 36,000 ದೇವಾಲಯಗಳನ್ನು ಧ್ವಂಸಗೊಳಿಸಲಾಗಿದ್ದು, ಅವೆಲ್ಲವನ್ನೂ ಕಾನೂನಾತ್ಮಕವಾಗಿ ಹಿಂಪಡೆಯಲಾಗುವುದು" ಎಂದು ಹೇಳಿದರು.
ಸದ್ಯ ಬಿಜೆಪಿ ಶಾಸಕರಾಗಿರುವ ಈಶ್ವರಪ್ಪ, "36,000 ದೇವಾಲಯಗಳನ್ನು ನಾಶಪಡಿಸಲಾಗಿದೆ ಮತ್ತು ಅದರ ಮೇಲೆ ಮಸೀದಿಗಳನ್ನು ನಿರ್ಮಿಸಲಾಗಿದೆ. ಅವರು ಬೇರೆಡೆ ಮಸೀದಿಗಳನ್ನು ನಿರ್ಮಿಸಲಿ ಮತ್ತು ನಮಾಜ್ ಮಾಡಲಿ. ಆದರೆ ನಮ್ಮ ದೇವಾಲಯಗಳ ಮೇಲೆ ಮಸೀದಿಗಳನ್ನು ನಿರ್ಮಿಸಲು ನಾವು ಅನುಮತಿಸುವುದಿಲ್ಲ. ದೇವಾಲಯಗಳನ್ನು ಹಿಂದೂಗಳು ಕಾನೂನುಬದ್ಧವಾಗಿ ಹಿಂಪಡೆಯುತ್ತಾರೆ" ಎಂದರು.
ಮಂದಿರ- ಮಸೀದಿ ವಿವಾದವು ಕರ್ನಾಟಕದಲ್ಲಿ ಏಪ್ರಿಲ್ 21ರಂದು ಹುಟ್ಟಿಕೊಂಡಿತ್ತು. ಮಂಗಳೂರಿನ ಹೊರವಲಯದಲ್ಲಿರುವ ಮಳಲಿಯಲ್ಲಿ ಹಳೆಯ ಮಸೀದಿಯ ಕೆಳಗೆ ಹಿಂದೂ ದೇವಾಲಯದಂತಹ ವಾಸ್ತುಶಿಲ್ಪದ ವಿನ್ಯಾಸವು ಕಂಡು ಬಂದಿತ್ತು. ಮಸೀದಿ ಕಟ್ಟುವ ಮೊದಲು ಆ ಸ್ಥಳದಲ್ಲಿ ದೇವಸ್ಥಾನವಿತ್ತು ಎಂದು ಕೆಲವರು ಹೇಳಿದ್ದಾರೆ. ದಾಖಲೆಗಳ ಪರಿಶೀಲನೆ ಆಗುವವರೆಗೆ ನವೀಕರಣ ಕಾಮಗಾರಿ ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈಗ ಕರ್ನಾಟಕದ ಶಾಸಕ ಕೆ. ಎಸ್. ಈಶ್ವರಪ್ಪ "ಮಸೀದಿಗಳನ್ನು ನಿರ್ಮಿಸಲು ನಾಶವಾದ ಎಲ್ಲಾ 36,000 ದೇವಾಲಯಗಳನ್ನು ಹಿಂದೂಗಳು ಕಾನೂನುಬದ್ಧವಾಗಿ ಹಿಂಪಡೆಯುತ್ತಾರೆ" ಎಂದು ಹೇಳಿದ್ದಾರೆ. ಮಂದಿರ- ಮಸೀದಿ ವಿವಾದವು ತೆಲಂಗಾಣವನ್ನೂ ತಲುಪಿದ್ದು, ರಾಜ್ಯ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ರಾಜ್ಯದಲ್ಲಿನ ಹಲವಾರು ದೇವಾಲಯಗಳನ್ನು ಕೆಡವಲಾಗಿದ್ದು ಮತ್ತು ಅವುಗಳ ಮೇಲೆ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಶಿವಲಿಂಗಗಳು ಕಂಡುಬಂದರೆ, ನಾವು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ
"ನಾನು ಈ ಮೂಲಕ ಆಲ್ ಇಂಡಿಯಾ ಮಜ್ಲಿಸ್-ಎ- ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿಗೆ ಸವಾಲು ಹಾಕುತ್ತೇನೆ. ತೆಲಂಗಾಣದ ಎಲ್ಲಾ ಮಸೀದಿಗಳನ್ನು ಅಗೆಯೋಣ. ಅಸ್ಥಿಪಂಜರಗಳು ಕಂಡುಬಂದರೆ, ನಾವು ಮಸೀದಿಗಳನ್ನು ಅವರಿಗೆ ಬಿಟ್ಟುಬಿಡುತ್ತೇವೆ. ಆದರೆ ಶಿವಲಿಂಗಗಳು ಕಂಡುಬಂದರೆ, ನಾವು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದು ಬಂಡಿ ಸಂಜಯ್ ಹೇಳಿದ್ದಾರೆ.
ಇದೇ ವೇಳೆ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, 'ಶಾಂತಿ ಕಾಪಾಡಬೇಕಾದರೆ ಮುಸ್ಲಿಂ ಸಮುದಾಯದವರು ಧ್ವಂಸಗೊಳಿಸಿ ಮಸೀದಿಗಳನ್ನಾಗಿ ಪರಿವರ್ತಿಸಿರುವ ದೇವಾಲಯಗಳನ್ನು ಹಿಂದೂಗಳಿಗೆ ವಾಪಸ್ ನೀಡಬೇಕು" ಎಂದು ಹೇಳಿದ್ದಾರೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ
ನವೀಕರಣಕ್ಕಾಗಿ ದರ್ಗಾವನ್ನು ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನ ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ನಡೆದಿತ್ತು. ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣದ ಸಲುವಾಗಿ ಮುಂಭಾಗ ಕೆಡವಲಾಗಿತ್ತು. ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಜೈನ ಅಥವಾ ಹಿಂದೂ ಧರ್ಮಕ್ಕೆ ಸೇರಿದ ದೇವಸ್ಥಾನವಿರುವ ಸಾಧ್ಯತೆ ಇದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಪುರಂದರ ಭೇಟಿ ನೀಡಿದ್ದರು.
ಹಳೇ ಕಾಲದ ಮಸೀದಿ ಕೆತ್ತನೆ ಹಿಂದೂ ಶೈಲಿಯಲ್ಲೇ ಇದೆ
ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ್ ಪುರಂದರ ಮುಂದಾಗಿದ್ದು, ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆಸೂಚನೆ ನೀಡಿದ್ದರು. ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ಸಮ್ಮತಿಸಿದ ದರ್ಗಾ ಆಡಳಿತ ಒಂದು ವಾರ ಕೆಲಸ ಸ್ಥಗಿತಕ್ಕೆ ಸಮ್ಮತಿ ಸೂಚಿಸಿತ್ತು. ಆಗ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ಯು. ಟಿ. ಖಾದರ್, ಮಳಲಿ ಮಸೀದಿ ಬಗ್ಗೆ ಹಲವರಿಗೆ ಸಂಶಯ ಇದೆ. ದಾಖಲೆಗಳೆಲ್ಲಾ ಜಿಲ್ಲಾಧಿಕಾರಿ ಬಳಿ ಇದೆ. ಮಳಲಿ ಮಸೀದಿಗೆ ಐನೂರು ವರ್ಷಗಳ ಇತಿಹಾಸ ಇದೆ. ಹಳೇ ಕಾಲದ ಮಸೀದಿ ಕೆತ್ತನೆ ಹಿಂದೂ ಶೈಲಿಯಲ್ಲೇ ಇದೆ. ಇದು ಮಸೀದಿ ಅಂತಾ ಊರಿನ ಎಲ್ಲಾ ಜನರಿಗೆ ಗೊತ್ತಿದೆ. ಆದರೆ ಹೊರಗಿನವರಿಗೆ ಈ ಬಗ್ಗೆ ಸಂಶಯ ಇದೆ. ಹೀಗಾಗಿ ಇದರ ಬಗ್ಗೆ ಕೆಲವರು ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದಾರೆ. ಅವರು ಮೊದಲು ದಾಖಲೆ ನೋಡಿ ತೀರ್ಪು ಕೊಡಬೇಕು" ಎಂದಿದ್ದರು.
ರಾಮ ಮಂದಿರದಂತಹ ಅಭಿಯಾನ
ಈ ಮಧ್ಯೆ ಕರ್ನಾಟಕದ ಮಂಗಳೂರಿನ ಹೊರವಲಯದಲ್ಲಿರುವ ಹಳೆಯ ಮಸೀದಿಯೊಂದರ ಕೆಳಗೆ ದೇವಾಲಯದಂತಹ ರಚನೆ ಕಂಡುಬಂದ ನಂತರ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನಾಯಕರೊಬ್ಬರು "ರಾಮ ಮಂದಿರದಂತಹ ಅಭಿಯಾನ"ದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ ಮತ್ತು ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದರು.
ಬಳಿಕ ಮಳಲಿ ದರ್ಗಾದಲ್ಲಿ ದೇವಸ್ಥಾನ ಶೈಲಿಯ ಕಟ್ಟಡ ವಿಚಾರದಲ್ಲಿ ಬುಧವಾರ ಕೇರಳದ ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಗುರುಸಾನಿಧ್ಯ ಗೋಚರವಾಗಿದೆ ಎಂದು ಹೇಳಲಾಗಿತ್ತು. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಇದೆಯೋ ಎಂಬುದನ್ನು ತಿಳಿದುಕೊಳ್ಳಲು ತಾಂಬೂಲ ಪ್ರಶ್ನೆ ನಡೆಸಲು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ನಿರ್ಧರಿಸಿತ್ತು.
Recommended Video