ಬೆಂಗಳೂರಿನ 2 ಖಾಸಗಿ ಶಾಲೆಗಳಲ್ಲಿ ಕೊರೊನಾ ಸ್ಫೋಟ, 31 ವಿದ್ಯಾರ್ಥಿಗಳಿಗೆ ಸೋಂಕು
ಬೆಂಗಳೂರು, ಜೂನ್ 14: ಬೆಂಗಳೂರಿನ ಶಾಲೆಗಳಲ್ಲಿ ಕೊರೊನಾ ಮತ್ತೆ ಕಾಣಿಸಿಕೊಂಡಿದ್ದು, ದಾಸರಹಳ್ಳಿಯ ವಲಯದ ಎರಡು ಖಾಸಗಿ ಶಾಲೆಗಳಲ್ಲಿ ಕೊರೊನಾ ಸ್ಫೋಟಗೊಂಡಿದೆ. ಒಟ್ಟು 31 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ದಾಸರಹಳ್ಳಿ ವಲಯದ ರಾಜಗೋಪಾಲನಗರದಲ್ಲಿರುವ ನ್ಯೂ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಎಂಇಎಸ್ ಪಬ್ಲಿಕ್ ಸ್ಕೂಲ್ ಎಂಬ ಎರಡು ಖಾಸಗಿ ಶಾಲೆಗಳಲ್ಲಿ ಕೊರೊನಾ ಪತ್ತೆಯಾಗಿದೆ. ಕಳೆದ ಗುರುವಾರ ನ್ಯೂ ಇಂಟರ್ ನ್ಯಾಷನಲ್ ಸ್ಕೂಲ್ನ 5 ಮತ್ತು 6ನೇ ತರಗತಿಯಲ್ಲಿ ಓದುತ್ತಿದ್ದು 21 ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇದೀಗ ಎಂಇಎಸ್ ಪಬ್ಲಿಕ್ ಸ್ಕೂಲ್ನ 5ನೇ ತರಗತಿಯಲ್ಲಿ ಓದುತ್ತಿದ್ದ 10 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲಿ ಕೋವಿಡ್ ಏರಿತು, ಡೆಂಘೀ ಕೂಡ ಹೆಚ್ಚಿತು: ಸುಧಾಕರ್ ಹೇಳೋದೇನು?
ಪ್ರಸ್ತುತ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಇತರೆ ಶಾಲಾ ಸಿಬ್ಬಂದಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ. ಶಾಲಾ ಕೊಠಡಿ ಹಾಗೂ ಆವರಣಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ವಿದ್ಯಾರ್ಥಿಗಳ ಆರೋಗ್ಯದ ಕಡೆಗೆ ನಿಗಾ ವಹಿಸಲಾಗಿದೆ. ಈ ಶಾಲೆಗಳನ್ನು ಕಂಟೈನ್ಮೆಂಟ್ ಎಂದು ಘೋಷಣೆ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಮಕ್ಕಳೆಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ.
ಕಂಟೈನ್ಮೆಂಟ್ ವಲಯಗಳ ಸಂಖ್ಯೆ 21ಕ್ಕೆ ಏರಿಕೆ
ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಕಂಟೈನ್ಮೆಂಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರವೇ ನಗರದಲ್ಲಿ 5 ಕಂಟೈನ್ಮೆಂಟ್ ವಲಯ ಸೃಷ್ಟಿಯಾಗಿದೆ. ಒಟ್ಟಾರೆ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ದಾಸರಹಳ್ಳಿ ವಲಯದಲ್ಲಿ ಒಂದು ಮತ್ತು ಮಹದೇವಪುರ ವಲಯದಲ್ಲಿ 4 ಹೊಸ ಕಂಟೈನ್ಮೆಂಟ್ಗಳಾಗಿವೆ ಎಂದು ಬಿಬಿಎಂಪಿ ತಿಳಿಸಿದೆ.
ಜೂನ್ 13ರ ಅಂಕಿ-ಅಂಶ: ವಿಶ್ವದ ಯಾವ ದೇಶದಲ್ಲಿ ಎಷ್ಟು ಕೊವಿಡ್ ಸೋಂಕಿತರು ಗುಣಮುಖ?
ಸೋಮವಾರ ರಾಜ್ಯದಲ್ಲಿ 415 ಕೋವಿಡ್ ಸೋಂಕು ಪ್ರಕರಣ ದಾಖಲಾಗಿದೆ. ಆದರೆ ಬೆಂಗಳೂರು ನಗರದಲ್ಲಿ 400 ಪ್ರಕರಣ ಕಂಡುಬಂದಿವೆ. ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಕ್ರಮಗಳ ಭರವಸೆ ನೀಡಿದ್ದಾರೆ. ಐಐಟಿ ತಜ್ಞರ ಪ್ರಕಾರ ಜುಲೈನಲ್ಲಿ ನಾಲ್ಕನೇ ಅಲೆ ಬರಬಹುದು ಎಂದು ಅಂದಾಜಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರಕರಣಗಳ ಏರಿಕೆ ನಾಲ್ಕನೇ ಅಲೆಗೆ ಮುನ್ನುಡಿಯಾಗಿದೆ. ಈಗಾಗಲೆ ಬೆಂಗಳೂರು ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿಲಾಗಿದೆ. ಮಾಸ್ಕ್ ಧರಿಸದಿದ್ದರೆ, ದಂಡ ವಿಧಿಸುವ ಪ್ರಸ್ತಾಪ ಕೂಡ ಕೇಳಿಬರುತ್ತಿದೆ.
ಡೆಂಘೀ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ
ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇದರ ಜೊತೆ ಡೆಂಘೀ ಪ್ರಕರಣಗಳ ಸಂಖ್ಯೆ ಕೂಡ ಉಲ್ಬಣಿಸಿದೆ. ಈ ಹಿನ್ನಲೆ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. " ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಜಿನೋಮಿಕ್ ಸಿಕ್ವೆನ್ಸಿಂಗ್ ಲ್ಯಾಬ್ ಆರಂಭಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಸಭೆ ನಂತರ ಇಲಾಖೆಯ ಪರಿಶೀಲನಾ ಸಭೆಯನ್ನೂ ನಡೆಸಲಾಗಿದೆ. ವಿಶೇಷವಾಗಿ ಕ್ಲಿನಿಕ್ಗಳ ಆರಂಭಕ್ಕೆ ಕಾಲಮಿತಿಯಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ " ಎಂದು ಸುಧಾಕರ್ ಸೋಮವಾರ ತಿಳಿಸಿದ್ದರು.
(ಒನ್ಇಂಡಿಯಾ ಸುದ್ದಿ)
Recommended Video