ಪಾನಮತ್ತ ಚಾಲನೆ: 304 ಪ್ರಕರಣ ದಾಖಲು
ಬೆಂಗಳೂರು, ಜೂ.30: ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಚಾಲಕರ ವಿರುದ್ಧ ರಾಜಧಾನಿಯ ಸಂಚಾರ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.
ಶನಿವಾರ ಜೂ.29ರ ರಾತ್ರಿ 9 ರಿಂದ 2 ಗಂಟೆಯವರೆಗೆ ವಿಶೇಷ ಕಾರ್ಯಾಚರಣೆಯಲ್ಲಿ 304 ಚಾಲಕರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ 30 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು 3,081 ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ಗಳನ್ನು ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಇಂದಿರಾನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅತ್ಯಂತ ಹೆಚ್ಚು 33 ಪ್ರಕರಣ ದಾಖಲಾಗಿದೆ.[ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]
6 ಟೆಂಪೊ, 10 ಲಾರಿ, 8 ಆಟೊ, 47 ಕಾರು ಚಾಲಕರು ಹಾಗೂ 236 ಬೈಕ್ ಸವಾರರು ಪಾನಮತ್ತರಾಗಿ ವಾಹನ ಚಾಲನೆ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿಬಿದ್ದವರು ಎಲ್ಲರೂ ಪುರುಷ ಸವಾರರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಲ್ಕೋ ಮೀಟರ್ ಮೂಲಕ ತಪಾಸಣೆ ನಡೆಸಿದಾಗ 2 ಚಾಲಕರ ಮದ್ಯ ಸೇವನೆ ಪ್ರಮಾಣ 550 ಮಿ.ಗ್ರಾಂನಷ್ಟಿತ್ತು. ಈ ಎಲ್ಲಾ ಸವಾರರ ವಾಹನ ಪರವಾನಗಿಯನ್ನು ಅಮಾನತಿನಲ್ಲಿಡುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ.[ಅಡ್ಡಾದಿಡ್ಡಿ ಚಾಲನೆ: ಎಸ್ಎಂಕೆ ಮೊಮ್ಮಗನಿಂದ ಟ್ರಾಫಿಕ್ ಪೊಲೀಸರಿಗೆ ಧಮ್ಕಿ]
ಸಂಚಾರ ಪೊಲೀಸರು ಪ್ರತಿ ಶನಿವಾರ ರಾತ್ರಿ ನಡೆಸುವ ಈ ಕಾರ್ಯಾಚರಣೆ ಕಳೆದ ಎರಡು ತಿಂಗಳಿನಿಂದ ಪೀಣ್ಯ ಸಂಚಾರ ಠಾಣೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ಈ ಬಾರಿ ಇಂದಿರಾನಗರ ಸಂಚಾರ ಠಾಣೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿರುವುದು ವಿಶೇಷ.