ಹೃದಯ ದಾನ ಮಾಡಿದ ಕೃಷ್ಣಗಿರಿಯ ಯುವಕ: ಆಂಧ್ರದ ವ್ಯಕ್ತಿಗೆ ಮರುಹುಟ್ಟು
ಬೆಂಗಳೂರು, ಜನವರಿ 16: ತೀವ್ರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ 40 ರ್ವದ ವ್ಯಕ್ತಿಯೊಬ್ಬರಿಗೆ ನಾರಾಯಣ ಹೆಲ್ತ್ ನಿರ್ವಹಿಸುವ ಎಂ.ಎಸ್.ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ ಹೃದಯ ಕಸಿ ಮೂಲಕ ಮರುಹುಟ್ಟು ನೀಡಲಾಯಿತು. ಕೃಷ್ಣಗಿರಿ ಜಿಲ್ಲೆಯ 30ರ ಯುವಕನೊಬ್ಬ ಹೃದಯ ದಾನ ಮಾಡಿದ್ದರಿಂದ ಈ ವ್ಯಕ್ತಿಗೆ ಹೃದಯ ಕಸಿ ಮಾಡಲು ಸಾಧ್ಯವಾಯಿತು.
2019ರ ಜನವರಿ 12ರಂದು ಬೈಕ್ನಲ್ಲಿ ಈ ಯುವಕ ಸವಾರಿ ಮಾಡುತ್ತಿದ್ದಾಗ ಗೋಪನಹಳ್ಳಿ ಎಂಬಲ್ಲಿ ನಾಲ್ಕು ಚಕ್ರ ವಾಹನವೊಂದು ಡಿಕ್ಕಿ ಹೊಡೆದಿತ್ತು. ಇಂದು ಬೆಳಿಗ್ಗೆ ಈತನ ಮೆದುಳು ನಿಷ್ಕ್ರಿಯವಾಗಿರುವುದನ್ನು ವೈದ್ಯರು ಘೋಷಿಸಿದರು. ಈ ಯುವಕನ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಯಿತು.
'ಹೃದಯ ಕಾಣೆಯಾಗಿದೆ, ಹುಡುಕಿಕೊಡಿ' ನಾಗ್ಪುರ ಪೊಲೀಸರಿಗೊಂದು ವಿಲಕ್ಷಣ ದೂರು!
ಬೊಮ್ಮಸಂದ್ರದಲ್ಲಿರುವ ನಾರಾಯಣ ಹೆಲ್ತ್ ಸಿಟಿಯಲ್ಲಿ ಮೆದುಳು ಮೃತವಾದ ಯುವಕನ ಹೃದಯವನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲಾಯಿತು. ಬಳಿಕ ಮತ್ತಿಕೆರೆಯಲ್ಲಿರುವ ಎಂ.ಎಸ್.ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ಇದನ್ನು ವರ್ಗಾಯಿಸಲಾಯಿತು. ಗ್ರೀನ್ ಕಾರಿಡಾರ್ ಮೂಲಕ ಹೃದಯವನ್ನು ಸಾಗಿಸಲಾಯಿತು. 29.5 ಕಿಲೋಮೀಟರ್ ದೂರವನ್ನು ಕೇವಲ 45 ನಿಮಿಷಗಳಲ್ಲಿ ಕ್ರಮಿಸಿ, ಸುಗಮ ಹೃದಯ ಕಸಿಗೆ ಅನುವು ಮಾಡಿಕೊಡಲಾಯಿತು.
ಹೃದಯ ಕಸಿಗೆ ಒಳಗಾದ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಈ ರೋಗಿ ವೃತ್ತಿಯಲ್ಲಿ ಟೈಲರ್ ಆಗಿದ್ದು, ಇವರು ಡಿಲೇಟೆಡ್ ಕಾರ್ಡಿಯೊ ಮಿಯೊಪಥಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಎಂ.ಎಸ್.ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಇವರನ್ನು ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಹೃದಯರೋಗ ತಜ್ಞರು ಮತ್ತು ಹೃದಯ ಶಸ್ತ್ರಚಿಕಿತ್ಸಾ ತಜ್ಞರು, ಹೃದಯ ಕಸಿಯೊಂದೇ ಪರಿಹಾರ ಎಂಬ ನಿರ್ಧಾರಕ್ಕೆ ಬಂದರು. ಈ ಹಿನ್ನೆಲೆಯಲ್ಲಿ ವ್ಯಕ್ತಿ ಜೀವನ ಸಾರ್ಥಕತೆ ಸಂಘಟನೆಯಲ್ಲಿ ಐದು ತಿಂಗಳ ಹಿಂದೆ ಹೆಸರು ನೋಂದಾಯಿಸಿಕೊಂಡಿದ್ದರು.
ಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕು
ಮೆದುಳು ನಿಷ್ಕ್ರಿಯವಾದ ವ್ಯಕ್ತಿಯ ಹೃದಯ ಹೊರತೆಗೆಯುವ ಮತ್ತು ಹೃದಯ ಕಸಿ ಕಾರ್ಯಾಚರಣೆಯಲ್ಲಿ ಎಂ.ಎಸ್.ರಾಮಯ್ಯ ನಾರಾಯಣ ಹೃದಯ ಕೇಂದ್ರದ ಹೃದಯ ವೈಫಲ್ಯ & ಕಸಿ ವಿಭಾಗದ ಹಿರಿಯ ಸಲಹಾ ತಜ್ಞ ಡಾ.ನಾಗಮಲೇಶ್ ಯು.ಎಂ, ನಾರಾಯಣ ಹೆಲ್ತ್ ಸಿಟಿಯ ಹೃದಯ ಚಿಕಿತ್ಸಾ ಮತ್ತು ಕಸಿ ಶಸ್ತ್ರಚಿಕಿತ್ಸಾ ತಜ್ಞ ಡಾ.ಜ್ಯೂಲಿಯಸ್ ಪುನ್ನೆನ್, ಹೃದಯ ಕಸಿ ಮತ್ತು ಹೃದಯ ಚಿಕಿತ್ಸಾ ತಜ್ಞ ಡಾ.ವರುಣ್ ಶೆಟ್ಟಿ, ಅರಿವಳಿಕೆ ತಜ್ಞ ಡಾ.ಪ್ರಶಾಂತ್ ರಾಮಸ್ವಾಮಿ, ಹೃದಯ ಶಸ್ತ್ರಚಿಕಿತ್ಸೆ ತಜ್ಞೆ ಡಾ.ಶಿಲ್ಪಾ ರುದ್ರದೇವರು, ಅರಿವಳಿಕೆ ಸಲಹಾ ತಜ್ಞ ಡಾ.ಗುರು ಪೊಲೀಸ್ ಪಾಟೀಲ್ ಭಾಗವಹಿಸಿದ್ದರು.
ಭಾರತದಲ್ಲಿ ಶೇ.50ರಷ್ಟು ಹೃದ್ರೋಗ ಹೆಚ್ಚಳ, ಇಲ್ಲಿವೆ ಪ್ರಮುಖ ಕಾರಣ
ಬೆಂಗಳೂರು ನಾರಾಯಣ ಹೆಲ್ತ್ ನೆಟ್ವರ್ಕ್: ನಾರಾಯಣ ಹೆಲ್ತ್ ಬೆಂಗಳೂರಿನ ಜನತೆಗೆ ಏಳು ಸರಣಿ ಆಸ್ಪತ್ರೆಗಳ ಮೂಲಕ ನಗರದಲ್ಲಿ ಸೇವೆ ಸಲ್ಲಿಸುತ್ತಿದೆ. ನಗರದ ಬೊಮ್ಮಸಂದ್ರ, ಎಚ್ಎಸ್ಆರ್ ಲೇಔಟ್, ವೈಟ್ಫೀಲ್ಡ್, ಇಂದಿರಾನಗರ, ನೃಪತುಂಗ ರಸ್ತೆ ಮತ್ತು ಮತ್ತಿಕೆರೆಯಲ್ಲಿ ನಾರಾಯಣ ಹೆಲ್ತ್ ಆಸ್ಪತ್ರೆಗಳಿವೆ.