ಬೆಂಗಳೂರು; ಮೂವರು ಪೊಲೀಸ್ ಸಿಬ್ಬಂದಿಗೆ ಕೋವಿಡ್ - 19 ಸೋಂಕು
ಬೆಂಗಳೂರು, ಜೂನ್ 02 : ಕರ್ನಾಟಕದಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇವರೆಲ್ಲರೂ ಬೆಂಗಳೂರು ನಗರದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸರದಿಯ ಆಧಾರದ ಮೇಲೆ ಪರೀಕ್ಷೆ ನಡೆಯುತ್ತಿದೆ.
ಡಿಜಿ & ಐಜಿಪಿ ಕಚೇರಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು
ಚಾಮರಾಜಪೇಟೆಯ ಸೀಲ್ ಡೌನ್ ಪ್ರದೇಶದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಇಬ್ಬರು, ಬೆಳಗಾವಿಗೆ ಪ್ರಯಾಣ ಮಾಡಿ ಬಂದ ಒಬ್ಬರು ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.
ಕೊಟ್ಟೂರು ಠಾಣೆ ಸೀಲ್ ಡೌನ್; 42 ಸಿಬ್ಬಂದಿಗೆ ಕ್ವಾರಂಟೈನ್
ಪಾದರಾಯನಪುರ ವಾರ್ಡ್ ವ್ಯಾಪ್ತಿಯ ಜೆ. ಜೆ. ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ಗೆ ಸೋಂಕು ತಗುಲಿದೆ. 43 ವರ್ಷದ ಇವರು ಪಾದರಾಯನಪುರ ಸೀಲ್ ಡೌನ್ ಆದ ಸಂದರ್ಭದಲ್ಲಿ ಠಾಣೆಯಲ್ಲಿಯೇ ಕಾರ್ಯ ನಿರ್ವಹಣೆ ಮಾಡಿದ್ದರು.
ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ; 26 ಹುದ್ದೆಗಳು
ಹೆಡ್ ಕಾನ್ಸ್ಟೇಬಲ್ ಜೊತೆ ಕೆಲಸ ಮಾಡಿದ್ದ, ಸಂಪರ್ಕಕ್ಕೆ ಬಂದಿದ್ದ 14 ಸಿಬ್ಬಂದಿ ಸೇರಿ ಒಟ್ಟು 16 ಜನರಿಗೆ ಕ್ವಾರಂಟೈನ್ನಲ್ಲಿರಲು ಸೂಚನೆ ನೀಡಲಾಗಿದೆ. ಹೆಡ್ ಕಾನ್ಸ್ಟೇಬಲ್ ನಾಯಂಡಹಳ್ಳಿ ಬಳಿಯ ವಿನಾಯಕ ನಗರದಲ್ಲಿ ನೆಲೆಸಿದ್ದರು.
ಚಾಮರಾಜಪೇಟೆ ಠಾಣೆಯ ಸಿಬ್ಬಂದಿಯೊಬ್ಬರಿಗೂ ಸೋಂಕು ತಗುಲಿದೆ. ಆಜಾದ್ ನಗರ ವಾರ್ಡ್ ವ್ಯಾಪ್ತಿಯ ಆದರ್ಶ ನಗರದಲ್ಲಿ ಅವರು ನೆಲೆಸಿದ್ದರು. ಕಂಟೈನ್ಮೆಂಟ್ ಝೋನ್ ಆಗಿದ್ದ ಟಿಪ್ಪು ನಗರದಲ್ಲಿ ಇವರು ಕರ್ತವ್ಯ ನಿರ್ವಹಣೆ ಮಾಡಿದ್ದರು. ಪೊಲೀಸ್ ಸಿಬ್ಬಂದಿ ಮತ್ತು ಅವರ ನಾಲ್ವರು ರೂಂ ಮೇಟ್ಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ನಗರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ. ಕಳೆದ ವಾರ ರಜೆ ಪಡೆದಿದ್ದ ಇವರು ಬೆಳಗಾವಿಯ ತಮ್ಮ ಗ್ರಾಮಕ್ಕೆ ಹೋಗಿದ್ದರು. ರಜೆ ಮುಗಿಸಿ ವಾಪಸ್ ಬಂದು ಪರೀಕ್ಷೆ ಮಾಡಿಸಿದಾಗ ಕೋವಿಡ್ - 19 ಸೋಂಕು ತಗುಲಿರುವುದು ಖಚಿತವಾಗಿದೆ.